ಮಂಡ್ಯ : ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ಇಬ್ಬರು ಮಕ್ಕಳು ಸೇರಿಕೊಂಡು ತನ್ನ ಚಿಕ್ಕಪ್ಪನನ್ನೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಕೆರಗೋಡು ಹೋಬಳಿ ಬಿ.ಹೊಸೂರು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು ಕೂಡ್ಲಗಿಯ ಬಿ.ಪಿ.ತಾಂಡ ನಿವಾಸಿ ಬಸೀರ್ ಸಾಬ್ (೩೦) ಎಂಬಾತನನ್ನು ಅಣ್ಣನ ಮಕ್ಕಳಾದ ಅಲ್ಲಾ ಭಕ್ಷಾ, ಅಮಾನ್ ಎಂಬವರೇ ಹತ್ಯೆಗೈದ ಆರೋಪಿಗಳಾಗಿದ್ದಾರೆ.
ಕಬ್ಬು ಕಡಿಯುವ ಕೆಲಸಕ್ಕೆಂದು ಬಸೀರ್ ಸಾಬ್ ಹಾಗೂ ಈತನ ಅಣ್ಣ ಜಾಕೀರ್ ಸಾಬ್ ಅವರು ಹೊಸಪೇಟೆ ತಾಲ್ಲೂಕು ಕೂಡ್ಲಗಿಯ ಬಿ.ಪಿ. ತಾಂಡಾದಿಂದ ಬಿ.ಹೊಸೂರು ಗ್ರಾಮಕ್ಕೆ ಬಂದಿದ್ದರು.
ಇದನ್ನು ಓದಿ ; ಪತ್ನಿ ಜೊತೆ ಸಂಬಂಧ ಶಂಕೆ : ಮಗನಿಂದಲೇ ತಂದೆಯ ಹತ್ಯೆ
ಕಳೆದ ಐದಾರು ತಿಂಗಳ ಹಿಂದೆ ಜಾಕೀರ್ ಸಾಬ್ ಬಸೀರ್ ಸಾಬ್ನನ್ನು ಕಬ್ಬು ಕಡಿಯಲೆಂದು ಗಂಟಗೌಡನಹಳ್ಳಿಗೆ ಕರೆಸಿಕೊಂಡಿದ್ದನು. ಗ್ರಾಮದ ಸ್ವಾಮಿ ಎಂಬವರ ಆಲೆಮನೆ ಹತ್ತಿರ ಶೆಡ್ಡು ಹಾಕಿಕೊಂಡು ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಸಣ್ಣ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಜಗಳವಾಗಿ, ಬಶೀರ್ ಸಾಬ್ ಜಾಕೀರ್ ಸಾಬ್ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಗಂಟಗೌಡನಹಳ್ಳಿಯಿಂದ ಬಿ.ಹೊಸೂರಿನ ಚಂದ್ರಣ್ಣ ಎಂಬವರ ಆಲೆಮನೆಗೆ ಬಂದು ಕೆಲಸಕ್ಕೆ ಸೇರಿಕೊಂಡು ಅಲ್ಲೇ ವಾಸವಾಗಿದ್ದರು.
ಜಾಕೀರ್ ಸಾಬ್ಗೆ ಬಶೀರ್ ಸಾಬ್ ಹಲ್ಲೆ ನಡೆಸಿದ್ದರಿಂದ ಜಾಕೀರ್ ಸಾಬ್ನ ಮಕ್ಕಳಾದ ಅಲ್ಲಾ ಭಕ್ಷಾ, ಅಮಾನ್ ಅವರು ದ್ವೇಷ ಸಾಽಸಿ ಸೆ.೩೦ರ ಮಧ್ಯಾಹ್ನ ಬಸೀರ್ಸಾಬ್ ಬಿಳಿದೇಗಲು ಗ್ರಾಮದಲ್ಲಿ ಮದ್ಯಪಾನ ಮಾಡಲು ಹೋಗಿದ್ದಾಗ ಜಗಳ ಮಾಡಿದ್ದಾರೆ. ದ್ವೇಷ ಸಾಧಿಸಿಕೊಂಡು ಅದೇ ದಿನ ರಾತ್ರಿ ೧೧ರ ಸಮಯದಲ್ಲಿ ಬಿ.ಹೊಸೂರು ಗ್ರಾಮದಲ್ಲಿದ್ದ ಶೆಡ್ಗೆ ಬಂದು ಮಲಗಿದ್ದ ಬಶೀರ್ ಸಾಬ್ನನ್ನು ಎಬ್ಬಿಸಿ ಕಬ್ಬು ಕಡಿಯುವ ದರಾಂತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಇದನ್ನು ನೋಡಿದ ಬಶೀರ್ ಸಾಬ್ನ ಪತ್ನಿ ರೇಷ್ಮಾ ಕೂಗಿಕೊಂಡಾಗ ಪಕ್ಕದ ಮನೆಯ ಜಗಣ್ಣ ಹಾಗೂ ನೆರೆಹೊರೆಯವರು ಬರುತ್ತಿದ್ದಂತೆ ಆರೋಪಿಗಳಾದ ಅಲ್ಲಾ ಭಕ್ಷಾ ಹಾಗೂ ಅಮಾನ್ ಅವರು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಶೀರ್ ಸಾಬ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಶೀರ್ ಸಾಬ್ನ ಪತ್ನಿ ರೇಷ್ಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೆರಗೋಡು ಪೊಲೀಸರು, ಆರೋಪಿಗಳಾದ ಅಲ್ಲಾ ಭಕ್ಷಾ ಹಾಗೂ ಅಮಾನ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.





