ಮೈಸೂರು: ಹೊರಗಿನಿಂದ ಬಂದವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ವಿಶ್ವದ ನಂಬರ್ ೧ ರಾಜಕೀಯ ಪಕ್ಷ. ಬಿಜೆಪಿ-ಜೆಡಿಎಸ್ ಮೈತ್ರಿಯಾದಗಲೇ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ವಿರೋಧಿ ರಾಜಕಾರಣ ಸತ್ತುಹೋಯಿತು. ವಿಜಯೇಂದ್ರ ಅಧಿಕಾರಾವಧಿ ಇನ್ನು ಮುಗಿದಿಲ್ಲ. ಅವಧಿಗೂ ಮುನ್ನ ಬದಲಿಸುವುದಾದರೆ ಪಕ್ಷದ ದೃಷ್ಟಿಯಿಂದ ಶ್ರೀರಾಮುಲು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ. ತೇಜಸ್ವಿನಿ ಅನಂತ್ ಕುಮಾರ್, ಈಶ್ವರಪ್ಪ, ಯಡಿಯೂರಪ್ಪನವರ ಕ್ಷಮೆ ಕೇಳಿದ್ರೆ ಮತ್ತೆ ಬಿಜೆಪಿಗೆ ಕರೆತಂದು ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷ ಮಾಡಿ. ಇಲ್ಲವಾದ್ರೆ ಉತ್ತಮ ಸಂಘಟನೆ ಮಾಡುತ್ತಿರುವ ವಿಜಯೇಂದ್ರರವರನ್ನೇ ಮುಂದುವರಿಸಿ. ವರಿಷ್ಠರು ಹೊರಗಿನಿಂದ ಬಂದವರನ್ನು ರಾಜ್ಯಾಧ್ಯಕ್ಷ ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಮಾಡುವ ಅಪಮಾನ ಎಂದು ವಿ.ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ವಿ.ಸೋಮಣ್ಣ ಸರ್ವ ಪಕ್ಷ ನಾಯಕರು. ಕಳೆದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋತಾಗ ಸಭೆಯಲ್ಲಿ ಅವಾಚ್ಯ ಶಬ್ದದಿಂದ ಕಾರ್ಯಕರ್ತರನ್ನು ಅಪಮಾನಿಸಿದ್ದಾರೆ. ಒಂದೊಂದು ಮತಕ್ಕೂ 2 ಸಾವಿರ ನೀಡಿ ಕ್ಷೇತ್ರದ ಮತದಾರರನ್ನು ಭ್ರಷ್ಟರನ್ನಾಗಿಸಿದ್ದಾರೆ. ಸ್ವಯಂಕೃತ ಅಪರಾಧದಿಂದ ಸೋತಿದ್ದಾರೆ. ವಿಜೆಯೇಂದ್ರ, ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡಿದ್ದೆ ಸೋಲಿಗೆ ಕಾರಣವಾಯ್ತು. ಸೋಮಣ್ಣಗೆ ಕೇಂದ್ರ ಗೃಹಮಂತ್ರಿ ಮಾಡಿ, ಬೇಕಿದ್ರೆ ಪ್ರಧಾನಿ ಮಾಡಿ. ಆದರೆ ಹೊರಗಿನಿಂದ ಬಂದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ, ಬಿಜೆಪಿ ಕಛೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದರು.





