ಮೈಸೂರು: ಬಡತನ, ಹಸಿವಿನ ಸಂಕಟ ಗೊತ್ತಿಲ್ಲದವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು (ಜ.29) ಆಯೋಜಿಸಿದ್ದ ಸಿಂಧುವಳ್ಳಿ ಸುಧೀರ ಅವರು ರಚಿಸಿರುವ “ಭಾಗ್ಯವಿಧಾತ” ಪುಸ್ತಕವನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಕೆ.ದೀಪಕ್ ಮಾತನಾಡುತ್ತಾ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಆರಂಭದಲ್ಲೆ ʼಅನ್ನಭಾಗ್ಯʼ ಯೋಜನೆ ಘೋಷಿಸಿದರು. ಆದರೆ ಹಸಿವಿನ ಪದದ ಅರ್ಥವೇ ತಿಳಿಯದವರು, ಶತಮಾನಗಳಿಂದ ಮೃಷ್ಠಾನ ಭೋಜನ ಉಂಡವರು ಇದನ್ನು ಟೀಕಿಸಿದರು.
ರಾಜ್ಯದ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರು. ಆದರೆ ಈ ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಯನ್ನು ಸೋಮಾರಿ ಮಾಡಿ ಕೂರಿಸಿದೆ ಎಂದು ವಿರೋಧ ಪಕ್ಷದವರು ಟೀಕಿಸುತ್ತಾರೆ. ಅವರಿಗೆ ರಾಜ್ಯದ ಜನತೆ ಅಭಿವೃದ್ದಿಯಾಗುವುದು ಇಷ್ಟವಿಲ್ಲ ಎಂದು ಟೀಕಿಸಿದರು.
ಸಮಾಜದ ಒಂದು ವರ್ಗದ ಜನರಿಗೆ ಬಡತನ ನಿರ್ಮೂಲನೆಗಿಂತ ಬಡವರನ್ನೇ ನಿರ್ಮೂಲನೆ ಮಾಡುವ ಉದ್ದೇಶವಿದೆ. ಅದಕ್ಕಾಗಿಯೇ ಬಡವರಿಗೆ ಆರ್ಥಿಕಾವಾಗಿ ನೆರವಾಗುವ ಯಾವುದೇ ಯೋಜನೆಗಳನ್ನು ಅವರು ಸಹಿಸುವುದಿಲ್ಲ. ಆದರೆ ಸಿದ್ದರಾಮಯ್ಯ ಅವರು ಸಮಾಜವಾದದ ಹಿನ್ನಲೆಯಿಂದ ಬಂದಿರುವ ಕಾರಣ ಈ ವಿಷಯದಲ್ಲಿ ಅವರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.