Mysore
19
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಪ್ರಯತ್ನ ಬಿಡದೆ ಶ್ರಮ ಪಟ್ಟರೆ ಯಶಸ್ಸು ಸಾಧ್ಯ; ನವೀನ್‌ ಕುಮಾರ್‌

ಮೈಸೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯತ್ನ ಬಿಡದೆ ಶ್ರಮ ಪಟ್ಟರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎಸ್.ಕೆ. ನವೀನ್‌ಕುಮಾರ್ ಹೇಳಿದರು.

ಇಂದು ನಗರದ ಜ್ಞಾನಬುತ್ತಿ ಸಂಸ್ಥೆವತಿಯಿಂದ ಆಯೋಜಿಸಿದ್ದ ಪಿಸಿ-ಪಿ.ಎಸ್.ಐ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಮಾಡಿ ಮಾತನಾಡಿದರು.

ನಿಮ್ಮಲ್ಲಿ ಬಹುತೇಕ ದಲಿತ, ಹಿಂದುಳಿದ, ಗ್ರಾಮೀಣ ಮತ್ತು ನಗರದ ಬಡ-ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರಾಗಿದ್ದೀರಿ. ಹಾಗಾಗಿ ನಿಮ್ಮ ಕಣ್ಣುಗಳಲ್ಲಿ “ಬೆಂಕಿ ಮತ್ತು ಹಸಿವು” ನನಗೆ ಕಾಣಿಸುತ್ತಿದೆ. ನಾನು ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ಓದುತ್ತಿದ್ದಾಗ ಈಗ ನಿಮಗಿರುವ ಯಾವುದೇ ಸೌಕರ್ಯಗಳು ನನ್ನ ತಲೆಮಾರಿನವರಿಗೆ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದೇವೆ ಎಂದರೆ, ಈಗ ನಿಮಗಿದು ಆಶ್ಚರ್ಯ ಎನಿಸಬಹದು. ಆದರೆ ಅದು ಸತ್ಯ. ಸೋಲಿಗೆ ಅಂಜದಿರಿ. ಬಿದ್ದವನು ಇಂದಲ್ಲ ನಾಳೆ ಎದ್ದೇ ಏಳುತ್ತಾನೆ. ಭಯಬಿಟ್ಟಾಗಲೇ ನಿಜವಾದ ಬದುಕು ಆರಂಭವಾಗುವುದು. ಆತ್ಮವಿಶ್ವಾಸ ನಿಮ್ಮನ್ನು ಎಷ್ಟು ಎತ್ತಕ್ಕೆ ಬೇಕಾದರೂ ತೆಗೆದುಕೊಂಡು ಹೋಗುವ ಶಕ್ತಿ ಅದಕ್ಕಿದೆ ಎಂದರು.

ದಾನಗಳಲ್ಲೇ ಅನ್ನ ಮತ್ತು ಅಕ್ಷರ ದಾನ ಬಹುದೊಡ್ಡದು. ನಾಡಿನ ಹೆಸರಾಂತ ಸಿದ್ದಗಂಗಾ ಮಠ ಹೇಗೆ ನಿಸ್ವಾರ್ಥವಾಗಿ ಅನ್ನ ಮತ್ತು ಅಕ್ಷರ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆಯೋ ಅದೇ ಹಾದಿಯಲ್ಲಿ ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ನಡೆಯುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಜ್ಞಾನಬುತ್ತಿಯಿಂದ ನಿಮ್ಮ ಬದುಕಿನ ಬಾಳ ಬುತ್ತಿ ತುಂಬಲಿ. ನಿಮ್ಮಿಂದ ನಾಳಿನ ಸಮಾಜ ಬಹುನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದನ್ನು ಹುಸಿಗೊಳಿಸಬೇಡಿ. ಹಗಲು ರಾತ್ರಿ ಕಷ್ಟಪಡಲು ಸಿದ್ಧರಾದರೆ ರೆಡ್‌ಕಾರ್ಪೆಟ್‌ಸ್ವಾಗತ ನಿಮಗಾಗಿ ಕಾದಿರುತ್ತದೆ. ವಿದ್ಯೆಯೊಂದಿಗೆ ವಿನಯ ಮರೆಯಬೇಡಿ. ಮೊಬೈಲ್‌ಬಿಡಿ, ಪುಸ್ತಕ ಹಿಡಿದು ಸಾಧನೆಯತ್ತ ದಾಪುಗಾಲು ಹಾಕಿ ಎಂದರು. ಸಾಧ್ಯವಾದರೆ ಸಹಾಯ ಮಾಡಿ ಆದರೆ ತೊಂದರೆ ಮಾತ್ರ ಕೊಡಬೇಡಿ ಎಂದರು. ದೇಶ ಕಾಯುವ ಸೈನಿಕರಷ್ಟೇ ದೇಶದೊಳಗಿನ ಪೊಲೀಸರ ಸೇವೆ ಸರಿಸಮಾನವಾದುದು ಎಂದರು.

ಲಕ್ಷ್ಮಿಪುರಂ ಪೊಲೀಸ್‌ಠಾಣೆಯ ಇನ್‌ಸ್ಪೆಕ್ಟರ್‌ಆದ ರವಿಶಂಕರ್‌ಮಾತನಾಡಿ, ನಿಮಗೇನು ಬೇಕು ಎಂದು ಕೇಳಿಕೊಳ್ಳಿ, ಅದರಲ್ಲಿ ನಂಬಿಕೆಯಿಡಿ ಮತ್ತು ಸಾಧಿಸಿದ ನಂತರ ಅದಕ್ಕೆ ಕೃತಜ್ಞತೆ ಸಲ್ಲಿಸಿ. ಇದೇ ಯಶಸ್ಸಿನ ಗುಟ್ಟು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಹಕಾರಿಗಳಾದ ವೈ.ಎನ್.‌ಶಂಕರೇಗೌಡ ಅವರು ಮಾತನಾಡಿ ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದರು. ಸಮಾಜದಲ್ಲಿ ಆರಕ್ಷಕ ವೃತ್ತಿಗೆ ತನ್ನದೇ ಆದ ಮಹತ್ವ ಮತ್ತು ಜವಾಬ್ದಾರಿಯಿದೆ. ಖಾಕಿ ಧರಿಸುವ ಅವಕಾಶ ನಿಮಗೆ ಲಭಿಸಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್.‌ಬಾಲಕೃಷ್ಣ, ಪ್ರೊ. ಕೃ.ಪ. ಗಣೇಶ, ಡಾ. ಎಸ್.‌ಬಿ.ಎಂ. ಪ್ರಸನ್ನ, , ಪ್ರೊ. ಹೊನ್ನಯ್ಯ, ಪ್ರೊ. ಜಯಪ್ರಕಾಶ್‌, ಪ್ರೊ. ಈ. ಶಿವಪ್ರಸಾದ್‌, ಕೆ.ವೈ. ನಾಗೇಂದ್ರ, ಡಾ. ಕೃಷ್ಣಕುಮಾರ್‌, ಯು.ಎಂ. ಶರದರಾವ್‌, ರಾಜೀವ್‌ಶರ್ಮಾ, ಸಿ.ಕೆ. ಕಿರಣ್‌ಕೌಶಿಕ್‌ ಇದ್ದರು.

Tags:
error: Content is protected !!