ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿ ಹಾವಳಿ ಹೆಚ್ಚಳವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಹುಲಿ, ಆನೆಗಳು ಕಾಡಿನಿಂದ ಹೊರಬರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಹುಲಿ, ಆನೆಗಳ ಸಂಖ್ಯೆ ಹೆಚ್ಚಾಗಿದೆ. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ಕಾಯುವ ಕೆಲಸ ಮಾಡಲಾಗುವುದು.
ಇದನ್ನು ಓದಿ: ಹೆಚ್ಚಿದ ಮಾನವ-ಹುಲಿ ಸಂಘರ್ಷ : ಅರಣ್ಯಾಧಿಕಾರಿಗಳಿಗೆ ಸಿಎಂ ಕೊಟ್ಟ ಸಲಹೆ ಏನು..?
ನಿನ್ನೆ ನಡೆದ ಸಭೆಯಲ್ಲಿ ಅಧಿಕಾರಿಗಳ ಉತ್ತರದಿಂದ ನಾನು ಸಮಾಧಾನಗೊಂಡಿಲ್ಲ. ಕಾಡಿನಲ್ಲಿ ಹೆಚ್ಚಾಗಿ ಬೆಳೆದಿರುವ ಲಂಟಾನ ಗಿಡಗಳನ್ನು ಕ್ಲೀನ್ ಮಾಡಬೇಕು. ಕೆರೆಗಳಲ್ಲಿ ಆನೆಗಳಿಗೆ ಹುಲಿಗಳಿಗೆ ನೀರು ಸಿಗಬೇಕು. ಕಾಡಿನಲ್ಲಿ ಹೆಚ್ಚಾಗಿ ಮೇವು ಸಿಗಬೇಕು ಅದಕ್ಕಾಗಿ ಕಟ್ಟುನಿಟ್ಟಾಗಿ ಕೆಲಸ ಆಗಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.
ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ಮಾಡುತ್ತೇನೆ. ಮುಂದಿನ ವಾರ ಅರಣ್ಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ರೈಲ್ವೆ ಬ್ಯಾರಿಕೇಡ್ ಎಲ್ಲಾ ಕಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿಬಿಟ್ಟಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿದಂತೆ ಎಲ್ಲರ ಜೊತೆ ಮೀಟಿಂಗ್ ಮಾಡುತ್ತೇನೆ. ಕಾಡಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗುವುದು ಎಂದು ಹೇಳಿದರು.





