ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ 11 ಮಂದಿಗೆ 5 ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಅವರು, ರಾಜ್ಯ ಸರ್ಕಾರ ಹಾಗೂ ಕ್ರಿಕೆಟ್ ಮಂಡಳಿ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಘಟನೆಯ ನೈತಿಕ ಹೊಣೆ ಹೊತ್ತು ಯಾರೂ ರಾಜೀನಾಮೆ ಕೊಡಲಿಲ್ಲ. ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿಹಾಕಿದ್ದಾರೆ. ಕ್ರಿಕೆಟ್ ಮಂಡಳಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಕ್ಕೆ 5 ಕೋಟಿಯನ್ನು ಕೂಡಲೇ ನೀಡಬೇಕು. ಸರ್ಕಾರ ಸಂಭ್ರಮಾಚರಣೆಯನ್ನು ನಾವು ಮಾಡಿಲ್ಲ ಅಂತಾ ಹೇಳಿದೆ. ಆದರೆ ವಿಧಾನಸೌದದ ಬಳಿ ಆಟಗಾರರನ್ನು ಕರೆಸಿ ಕುಟುಂಬಸ್ಥರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ತನಿಖಾ ತಂಡ ಈಗಾಗಲೇ ವರದಿ ನೀಡಿದೆ. ಆ ವರದಿ ನ್ಯಾಯಾಧೀಶರು ಕೊಟ್ಟ ವರದಿಯಂತಿಲ್ಲ. ಸರ್ಕಾರವೇ ಬರೆದುಕೊಂಡ ವರದಿಯಾಗಿದೆ ಎಂದು ಆರೋಪಿಸಿದರು.





