Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಪತ್ರಿಕಾ ಛಾಯಾಗ್ರಹಣ ವಿಶೇಷ ವೃತ್ತಿ : ರಾಮಸ್ವಾಮಿ ಅಭಿಪ್ರಾಯ

press photography

ಮೈಸೂರು : ಪತ್ರಿಕಾ ಛಾಯಾಗ್ರಹಣ ಸವಾಲೊಡ್ಡುವ ಜೊತೆಗೆ ಹೆಚ್ಚು ಖುಷಿ ಕೊಡುವ ಕೆಲಸವಾಗಿದೆ. ಘಟನೆಗಳನ್ನು ಸಾಕ್ಷೀಕರಿಸುವ ಅಪೂರ್ವ ಅವಕಾಶ ಪತ್ರಿಕಾ ಛಾಯಾಗ್ರಾಹಕರಿಗೆ ದೊರೆಯುತ್ತದೆ. ಹೀಗಾಗಿ ಇದೊಂದು ವಿಶೇಷ ವೃತ್ತಿ ಎಂದು ಹಿರಿಯ ಛಾಯಾಗ್ರಾಹಕ ಸಾಗ್ಗೆರೆ ರಾಮಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸಭಾಂಗಣದಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸುದ್ದಿ ಛಾಯಾಗ್ರಹಣ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಆರಂಭದಲ್ಲಿ ವರದಿಗಾರನಾಗಿ ನಗರದ ಪತ್ರಿಕೆಯೊಂದರಲ್ಲಿ ಕೆಲಸ ಮಾಡಬೇಕಾದರೂ ಸಂದರ್ಭಗಳ ಕಾರಣ ಕ್ಯಾಮೆರಾ ಹಿಡಿದು ಛಾಯಾಗ್ರಾಹಕನಾದೆ. ಇನ್ನು ಬಹುತೇಕ ಸ್ಪರ್ಧೆಗಳಲ್ಲಿ ರಾಜಕೀಯ ಆಧಾರಿತ ಛಾಯಾಚಿತ್ರಗಳೇ ಇರುತ್ತವೆ. ಆದರೆ ಇಲ್ಲಿ ಅಂತಹ ಕೇವಲ ಎರಡೇ ಚಿತ್ರ ಇದ್ದು, ಉಳಿದವೆಲ್ಲವೂ ಮೈಸೂರು ಸಾಂಸ್ಕೃತಿಕ ನಗರಿ ಎಂಬುದನ್ನು ಪ್ರತಿಬಿಂಬಿಸಿರುವುದು ಸಂತಸ ಉಂಟು ಮಾಡುತ್ತದೆ ಎಂದರು.

ಪ್ರದರ್ಶನ ಉದ್ಘಾಟಿಸಿದ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಯಾವುದಾದರೂ ಮಹತ್ವದ ಘಟನೆ ನಡೆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಮೊದಲೇ ಛಾಯಾಗ್ರಾಹಕರು ಹಾಜರಿರುತ್ತಾರೆ. ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು, ಇಲ್ಲಿನ ಸೌಹಾರ್ದತೆ, ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಸಂದರ್ಭಾನುಸಾರ ಛಾಯಾಚಿತ್ರದ ಮೂಲಕ ಸಾಕ್ಷೀಕರಿಸುವ ಪತ್ರಿಕಾ ಛಾಯಾಗ್ರಾಹಕರ ಸೇವೆ ಮೆಚ್ಚಬೇಕಾದುದಾಗಿದೆ ಎಂದರು.

ಡಿಸಿಪಿ ಕೆ.ಎಸ್.ಸುಂದರ್ ರಾಜ್ ಮಾತನಾಡಿ, ಛಾಯಾಚಿತ್ರ, ವಿಡಿಯೋಗಳು ಅಪರಾಧ ಪತ್ತೆಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈಚೆಗೆ ದೇಶದಲ್ಲಿ ಕೋಟ್ಯಂತರ ಮಂದಿ ಮೊಬೈಲ್ ಬಳಸುತ್ತಾ, ಅದರಲ್ಲಿ ಛಾಯಾಚಿತ್ರ, ವಿಡಿಯೋ ತೆಗೆಯುವ ಮೂಲಕ ತಾವೂ ಛಾಯಾಗ್ರಾಹಕರೇ ಆಗಿದ್ದಾರೆ. ಒಂದು ದಿನದ ಹಿಂದಷ್ಟೇ ಪಬ್‌ವೊಂದರಲ್ಲಿ ನಗರ ಪೊಲೀಸ್ ಇಲಾಖೆಯ ಅಽಕಾರಿಯೊಬ್ಬರು ಗಲಾಟೆ ಮಾಡಿದ ವಿಡಿಯೋ ವೈರಲ್ ಆದ ಬಳಿಕ ಆತ ಅಮಾನತ್ತಾದರು. ಈ ರೀತಿ ವಿಡಿಯೋಗಳು ಸಹ ಅತ್ಯಂತ ಪ್ರಮುಖ ಪರಿಣಾಮ ಬೀರಬಹುದಾಗಿವೆ ಎಂದರು.

ದಸರಾ ವೇಳೆ ಸುದ್ದಿ ಛಾಯಾಗ್ರಾಹಕರು ತೆಗೆದ ಲ್ಯಾನ್ಸ್‌ಡೌನ್ ಕಟ್ಟಡ, ಇನ್ನಿತರ ಕಡೆಗಳಲ್ಲಿ ಜನರು ಕಿಕ್ಕಿರಿದು ನಿಂತು ವೀಕ್ಷಿಸುವ ಚಿತ್ರಗಳು ಜನರಿಗೆ ಮಾಹಿತಿ ನೀಡುವುದಷ್ಟೇ ಅಲ್ಲ, ಎಂತೆಂತಹ ಜಾಗಗಳಲ್ಲಿ ಪೊಲೀಸರು ನಿಗಾ ಇರಿಸಬೇಕು ಎಂಬುದನ್ನು ಸಹ ತಿಳಿಸುತ್ತವೆ. ಹೀಗಾಗಿ ಪೊಲೀಸ್ ಇಲಾಖೆಗೂ ಸುದ್ದಿ ಛಾಯಾಚಿತ್ರಗಳು ನೆರವಾಗುತ್ತವೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಜಗತ್ತಿನ ಎಲ್ಲೇ ಛಾಯಾಚಿತ್ರ ಸ್ಪರ್ಧೆ ನಡೆದರೂ ಮೈಸೂರಿನವರ ಛಾಯಾಚಿತ್ರಗಳು ಇದ್ದೇ ಇರುತ್ತವೆ. ಬಹುಮಾನಗಳಂತೂ ಇವುಗಳಿಗೆ ಬರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಮೈಸೂರು ಪತ್ರಿಕೆಗಳು ಪ್ರತಿಭಾವಂತ ಛಾಯಾಗ್ರಾಹಕರನ್ನು ಬೆಳೆಸಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಉದಯ್ ಶಂಕರ್, ಗವಿಮಠ ರವಿ, ಮಧುಸೂದನ್, ಅನೂಪ್ ಅವರಿಗೆ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ನರೆಡ್ಕೋ ಅಧ್ಯಕ್ಷ ವಿ.ಸಿ.ರವಿಕುಮಾರ್, ಉದ್ಯಮಿ ಡಾ.ವಿ.ಕಾರ್ತಿಕ್, ಮಮತಾ, ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಕಾರ್ಯಕ್ರಮದಲ್ಲಿ ಹಾಜರಿದ್ದರು.

Tags:
error: Content is protected !!