ಮೈಸೂರು: ಯಾವ ಕಾರಣಕ್ಕೆ ಉದ್ಯಮಗಳು ರಾಜ್ಯದ ಕೈತಪ್ಪುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕಾರಣಕ್ಕೆ ಕರ್ನಾಟಕದಿಂದ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ರಾಜ್ಯ ಸರ್ಕಾರ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೆ ಉದ್ಯಮಗಳು ರಾಜ್ಯದ ಕೈತಪ್ಪುತ್ತಿದೆ ಎಂಬುದು ಯೋಚನೆ ಮಾಡಬೇಕು. ಸುಮ್ಮನೆ ರಾಜಕೀಯವಾಗಿ ಹೇಳುವುದು ಸರಿಯಲ್ಲ. ಕರ್ನಾಟಕದಲ್ಲಿ ವ್ಯವಸ್ಥೆಗಳು ಸರಿಯಿಲ್ಲದ ಕಾರಣ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಾ ವ್ಯವಸ್ಥೆ ಸಿಗುತ್ತಿದೆ. ಹೀಗಾಗಿ ಪಕ್ಕದ ರಾಜ್ಯಕ್ಕೆ ಉದ್ಯಮಗಳು ಹೋಗುತ್ತಿದೆ. ಕರ್ನಾಟಕ ಸರ್ಕಾರ ಯಾವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ ನೀವೇ ಹೇಳಿ. ಗ್ಯಾರಂಟಿ ಯೋಜನೆ ಬಿಟ್ಟರೆ ಅವರ ಬಾಯಲಿ ಇನ್ನೂ ಏನೂ ಬರುತ್ತಿಲ್ಲ. ಗುಂಡಿ ಮುಚ್ಚಲು ಸಹ ಇಲ್ಲಿ ಹಣ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:-ನಟ ಧ್ರುವಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲು
ಇನ್ನು ಧರ್ಮಸ್ಥಳ ಕೇಸ್ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು. ಈಗ ಕಾನೂನಾತ್ಮಕವಾಗಿ ಅದು ಸಾಬೀತಾಗುತ್ತಿದೆ. ಯಾವ ಅಸ್ತಿ ಪಂಜರಗಳು ಸಿಗಲಿಲ್ಲ. ಹೀಗಾಗಿ ಕೇಸ್ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೌಜನ್ಯ ಕೇಸ್ ಬಗ್ಗೆಯೂ ಪೂರ್ಣವಾಗಿ ತನಿಖೆಯಾಗಲಿ. ಎಲ್ಲ ಸತ್ಯಗಳು ಹೊರಬರಲಿ ಎಂದು ಆಗ್ರಹಿಸಿದರು.
ಇನ್ನು ಕೇಂದ್ರ ಚುನಾವಣಾ ಆಯುಕ್ತರನ್ನು ರಾಜಕೀಯ ಪುಡಾರಿ ಎಂದಿದ್ದ ಯತೀಂದ್ರ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಅವರು, ಸಾಂವಿಧಾನಿಕ ಸಂಸ್ಥೆಗಳಲ್ಲಿ ಇರುವವರಿಗೆ ಗೌರವದಿಂದ ಮಾತನಾಡಬೇಕು. ಅವರ ಸರ್ಕಾರ ಬಂದಿದ್ದು ಕೂಡ ಇದೇ ಚುನಾವಣೆ ವ್ಯವಸ್ಥೆಯಿಂದ. ಸರ್ಕಾರ ಬಂದಾಗ ಸರಿ ಎನ್ನುವುದು, ಬರದಿದ್ದಾಗ ತಪ್ಪು ಎನ್ನುವುದು ಎಷ್ಟು ಸರಿ ಎಂಬುದನ್ನ ಅವರೇ ಹೇಳಲಿ. ಯಾರೋ ಒಂದಿಬ್ಬರ ಹೇಳಿಕೆಗಳಿಂದ ಈ ವ್ಯವಸ್ಥೆಗೆ ಅನುಮಾನಗಳು ಮೂಡುವುದಿಲ್ಲ. ಅಂತಹ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಬೇಡ ಎಂದು ಯತೀಂದ್ರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.





