Mysore
28
overcast clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಮೈಸೂರು | ನೆಚ್ಚಿನ ತೋಟದಲ್ಲಿ ಎಸ್.ಜಾನಕಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ

ಮೈಸೂರು : ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರದ ಸಿದ್ಧತೆಗಳು ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದಲ್ಲಿ ಭರದಿಂದ ಸಾಗುತ್ತಿದ್ದು, ಇಂದು ಸಂಜೆ 5:30ರ ಒಳಗೆ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.

ಜಾನಕಿಯಮ್ಮ ಅವರು ಬದುಕಿದ್ದಾಗ, ತಮ್ಮ ನಿಧನದ ನಂತರ ತಮ್ಮ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಅವರ ಕೊನೆಯ ಕೋರಿಕೆಯಂತೆ ಕಣಿಯನಹುಂಡಿ ಗ್ರಾಮದಲ್ಲಿರುವ ಅವರ ತೋಟದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಜೆಸಿಬಿ ಯಂತ್ರಗಳ ಮೂಲಕ ತೋಟದ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಬಸವರಾಜು “ಸ್ವರ ಸಾಮ್ರಾಟೆ ಎಸ್. ಜಾನಕಿ ಅವರು ತಮ್ಮ ಬದುಕಿನ ಕಡೆಯ ದಿನಗಳನ್ನು ಕಣಿಯನಹುಂಡಿ ಗ್ರಾಮದಲ್ಲೇ ಕಳೆಯಲು ಗಟ್ಟಿ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರು ಇಲ್ಲಿ ಎರಡು ಎಕರೆ ಜಮೀನನ್ನು ಖರೀದಿ ಮಾಡಿಸಿದ್ದರು. ನಾವೇ ಖುದ್ದಾಗಿ ನಿಂತು ಅವರಿಗೆ ಈ ಜಮೀನನ್ನು ಕೊಡಿಸಿದ್ದೆವು” ಎಂದು ತಿಳಿಸಿದರು.

“ಬಹಳ ಪ್ರೀತಿಯಿಂದ ಜಮೀನು ಕೊಂಡಿದ್ದ ಜಾನಕಿಯಮ್ಮ ಅವರು, ಅಲ್ಲಿ ತಮಗಾಗಿ ಒಂದು ಸುಂದರವಾದ ಮನೆಯನ್ನು ಕಟ್ಟುವ ಬಗ್ಗೆಯೂ ನಮ್ಮೊಂದಿಗೆ ಹಲವು ಬಾರಿ ಮಾತನಾಡಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಕಡೆಯ ದಿನಗಳಲ್ಲಿ ಅವರು ಕಟ್ಟಬಯಸಿದ್ದ ಮನೆಯ ಜಾಗದಲ್ಲೇ, ಅವರ ಕೊನೆಯ ಆಸೆಯಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ” ಎಂದು ಬಸವರಾಜು ಭಾವುಕರಾಗಿ ನುಡಿದರು.

 

Tags:
error: Content is protected !!