ಮೈಸೂರು : ರಸ್ತೆ ಬದಿ ನಿಂತಿದ್ದ ಕಾರಿನ ಕಿಟಕಿಯ ಗಾಜು ಒಡೆದ ಕಳ್ಳರು, ಕಾರಿನಲ್ಲಿದ್ದ 48 ಲಕ್ಷ ರೂ. ಮೌಲ್ಯದ 385 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಕಾರಿನ ಮಾಲೀಕರು ರಾತ್ರಿ ಊಟಕ್ಕೆಂದು ರಸ್ತೆ ಬದಿ ವಾಹನ ನಿಲ್ಲಿಸಿ ತೆರಳಿದ್ದಾಗ ದುಷ್ಕರ್ಮಿಗಳು ಈ ಕೃತ್ಯವೇಸಗಿದ್ದಾರೆ.
ಇದನ್ನು ಓದಿ: ಮೈಸೂರು | ಮನೆಯಲ್ಲಿ ಕಳ್ಳತನ ; ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಕಳ್ಳರ ಪಾಲು
ಮೈಸೂರು-ಹುಣಸೂರು ಹೆದ್ದಾರಿಯ ಇಲವಾಲ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನ ನಿವಾಸಿ ರಾಜೇಶ್ ಎಂಬುವರೇ ಚಿನ್ನಾಭರಣ ಕಳೆದುಕೊಂಡವರು. ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ರಾಜೇಶ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ವಿರಾಜಪೇಟೆಯಲ್ಲಿನ ಸಂಬಂಧಿಕರ ಮದುವೆಗೆ ತೆರಳಿದ್ದರು. ಈ ವೇಳೆ ರಾತ್ರಿ ಊಟಕ್ಕಾಗಿ ಇಲವಾಲ ಬಳಿಯ ಹೋಟೆಲ್ ಎದುರು ವಾಹನ ನಿಲ್ಲಿಸಲು ಮುಂದಾಗಿದ್ದಾರೆ. ಹೋಟೆಲ್ ಎದುರು ಪಾರ್ಕಿಂಗ್ಗೆ ಅವಕಾಶ ಸಿಗದೇ ಇದ್ದುದ್ದರಿಂದ ಹೋಟೆಲ್ನಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿ ಹೋಟೆಲ್ಗೆ ತೆರಳಿದ್ದಾರೆ. ಹೋಟೆಲ್ನಲ್ಲಿ ಊಟ ಮುಗಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಸ್ಥಳದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು ಕಾರಿನ ಬಲಭಾಗದ ಸೀಟಿನ ಗಾಜನ್ನು ಒಡೆದು ಕಾರಿನಲ್ಲಿ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಲವಾಲ ಠಾಣೆ ಪೊಲೀಸರು, ಕಾರಿನ ಸುತ್ತ ಮುತ್ತಲೂ ಇರುವ ಸಿಟಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಕತ್ತಲು ಇದ್ದುದ್ದರಿಂದ ಯಾವುದೇ ಸುಳಿವು ಸಿಕ್ಕಿಲ್ಲ ಕಾರಿನ ಮಾಲೀಕ ರಾಜೇಶ್ ನೀಡಿದ ದೂರಿನ ಮೇರೆಗೆ ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





