ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ಇಂದು ಬೀದಿ ನಾಯಿಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಮೈಸೂರಿನ ಟೌನ್ಹಾಲ್ ಬಳಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಅವರು, ನಾಯಿಗಳನ್ನ ಸಾಕಲು ಇಚ್ಚಿಸುವವರಿಗೆ ದತ್ತು ಪಡೆಯಲು ಪಾಲಿಕೆ ವತಿಯಿಂದ ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ದತ್ತು ಸ್ವೀಕಾರ ಸಹಕಾರಿ ಆಗುತ್ತದೆ. ಹಣ ಕೊಟ್ಟು ಖರೀದಿಸುವ ನಾಯಿಗಳಿಗಿಂತ ಈ ನಾಯಿಗಳು ಎಲ್ಲಾ ರೀತಿಯಲ್ಲೂ ಉತ್ತಮ. ಅವುಗಳಿಗೆ ಅರೋಗ್ಯ ಸಮಸ್ಯೆ ಬರೋದು ಕಡಿಮೆ. ಎಲ್ಲಾ ಸಮಯದಲ್ಲೂ ಆರೋಗ್ಯವಾಗಿರುತ್ತವೆ. ಹಾಗಾಗಿ ಪ್ರಾಣಿಪ್ರಿಯರು ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಆಶ್ರಯ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ವಿದೇಶಿ ಪ್ರಜೆಗಳು, 2 ನಾಯಿ ಮರಿಗಳನ್ನು ದತ್ತು ಪಡೆದು ಸಂತಸ ವ್ಯಕ್ತಪಡಿಸಿದರು.





