ಮೈಸೂರು: ಸತ್ಯಮೇವ ಜಯತೇ. ಸತ್ಯ,ಕಾನೂನಿಗೆ ಜಯ ದೊರೆಯಲಿದೆ ಎನ್ನುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣವೇ ನಿದರ್ಶನವಾಗಿದೆ. ಸಿದ್ದರಾಮಯ್ಯ ಅವರು ಗೌರವದಿಂದ ರಾಜೀನಾಮೆ ಕೊಡುತ್ತಾರೆ ಎನ್ನುವ ನಿರೀಕ್ಷೆ ಇದೆ. ಕೊಡದೆ ಇದ್ದರೂ ಹೈಕಮಾಂಡ್ ಪಡೆಯುತ್ತದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ರಾಜೀನಾಮೆ ಪಡೆಯಲಿ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ರಾಹುಲ್ಗಾಂಧಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮದೇ ಮುಖ್ಯಮಂತ್ರಿ ವಿರುದ್ಧ ಹೈಕೋರ್ಟ್ ತನಿಖೆ ನಡೆಸಲು ಒಪ್ಪಿರುವಾಗ ಯಾವ ರೀತಿ ರಾಜೀನಾಮೆ ಪಡೆಯದೆ ಇರುತ್ತಾರೆ ಎಂದು ಪ್ರಶ್ನಿಸಿದರು. ನಮಗೆ ದಾಖಲೆ ನೋಡಿಯೇ ಪ್ರಾಸಿಕ್ಯೂಷನ್ಗೆ ಅನುಮತಿ ಸಿಗುತ್ತದೆ ಎನ್ನುವುದು ಗೊತ್ತಿತ್ತು. ಮೊದಲ ದಿನವೇ ನ್ಯಾಯಾಲಯ ತಿರಸ್ಕಾರ ಮಾಡಿದ್ದರೆ ಸರಿ ಇತ್ತು. ಆದರೆ ಎಲ್ಲವನ್ನು ಪರಿಶೀಲಿಸಿ ಅನುಮತಿ ನೀಡಿರುವುದರಿಂದ ಸತ್ಯವಿದೆ ಎನ್ನುವುದು ಜನರಿಗೂ ಗೊತ್ತಾಗಿದೆ ಎಂದರು. ಸಿಎಂ ರಾಜೀನಾಮೆ ಕೊಡದಿದ್ದರೆ ಏನು ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ಜತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಸಿಎಂ ಅವರಲ್ಲಿ ನೈತಿಕತೆ ಎನ್ನುವುದು ಇದ್ದರೆ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಸಲಹೆ ನೀಡಿದರು.