Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆ| ಜೂನ್‌ 2027ರೊಳಗೆ ಪೂರ್ಣಗೊಳ್ಳಲಿದೆ: ಸಂಸದ ಯದುವೀರ್‌

ಮೈಸೂರು: ಜೂನ್‌ 2027ರೊಳಗೆ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆ ಪೂರ್ಣಗೊಳ್ಳಲಿದ್ದು, ಇದೀಗ ಕಾಮಗಾರಿಯೂ ಸ್ಥಿರ ಪ್ರಗತಿಯಲ್ಲಿದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಜೂನ್ 2027 ರೊಳಗೆ ಪೂರ್ಣಗೊಳ್ಳಲು ನಿರ್ಧರಿಸಲಾಗಿರುವ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಯು ಇದೀಗ ಸ್ಥಿರ ಪ್ರಗತಿಯಲ್ಲಿದೆ. ಈ ಹೆದ್ದಾರಿಯೂ 92.3 ಕಿ.ಮೀ.ಗಳಷ್ಟು ವಿಸ್ತಾರವಾದ ಈ ನಾಲ್ಕು ಪಥದ ಪ್ರವೇಶ-ನಿಯಂತ್ರಿತ ಹೆದ್ದಾರಿಯಾಗಿದೆ. ಅಲ್ಲದೇ ಮೈಸೂರು ಮತ್ತು ಕುಶಾಲನಗರದ ಪ್ರಯಾಣದ ಸಮಯವನ್ನು ಕನಿಷ್ಠ 1-1.5 ಗಂಟೆಗಳಿಗೆ ಕಡಿತಗೊಳಿಸಲಿದೆ. ಇನ್ನೂ ಬೆಂಗಳೂರಿನಿಂದ ಕುಶಾಲನಗರದವರೆಗೆ ಪ್ರಯಾಣಿಸಲು ಕೇವಲ 3-3.5ಗಂಟೆಗಳ ಸಮಯ ತಗಲುವಂತೆ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಜೂರು ಮಾಡಿದ 4,129 ಕೋಟಿ ರೂ. ಬಜೆಟ್‌ನೊಂದಿಗೆ ಈ ಯೋಜನೆಯು ಈಗಾಗಲೇ ಗಣನೀಯವಾದ ಪ್ರಗತಿ ಕಾಣುತ್ತಿದೆ. ಇದರಲ್ಲಿ ಹೆಚ್ಚಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅರಣ್ಯ ಪ್ರದೇಶದ ತೆರುವಿಗೆ ಅನುಮತಿಯೂ ಸಹ ದೊರೆತಿದೆ ಎಂದು ಹೇಳಿದ್ದಾರೆ.

ಈ ಬಹುನಿರೀಕ್ಷಿತ ಯೋಜನೆಯು ಪೂರ್ಣಗೊಂಡ ನಂತರ ಮೈಸೂರು ಮತ್ತು ಕೊಡಗಿನಲ್ಲಿ ಹೆದ್ದಾರಿ ಸಂಪರ್ಕ ಸುಧಾರಣೆಗೊಳ್ಳುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೆ ವೇಗ ನೀಡುತ್ತದೆ. ಅಲ್ಲದೇ ವ್ಯಾಪಾರ ಮತ್ತು ಹೂಡಿಕೆಗಳನ್ನು ಆಕರ್ಷಿಸಲುˌ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಸ್ಥಳೀಯ ವ್ಯವಹಾರಗಳಿಗೆ ಅವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಈ ಯೋಜನೆಯಿಂದಾಗಿ ನಮ್ಮ ಪ್ರದೇಶಕ್ಕೆ ಗರಿಷ್ಠ ಮಟ್ಟದ ಪ್ರಯೋಜನಗಳು ದೊರೆಯಲಿವೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರತಿನಿಧಿಯಾಗಿ ಕ್ಷೇತ್ರದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಗೆ ಬದ್ಧನಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.

Tags: