ಮೈಸೂರು: ಮುಡಾ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿ, ಪ್ರಕರಣದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಸಾರ್ವಜನಿಕ ಸೇವಕರಾಗಿರುವ ನಾಯಕರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟು ಅಧಿಕಾರ ಮತ್ತು ಪಾರದರ್ಶಕ ಆಡಳಿತವನ್ನು ಎತ್ತಿ ಹಿಡಿಯಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭ್ರಷ್ಟಾಚಾರವೆಂಬುದು ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ನಂಬಿಕೆಯನ್ನು ಅಪಮೌಲ್ಯಗೊಳಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮತ್ತಿತರರು ಭಾಗಿಯಾಗಿರುವ ಮುಡಾ ಹಗರಣದ ಕಾಂಡಗಳು ಬಹಿರಂಗವಾಗಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಈ ತನಿಖೆ ಸಂಪೂರ್ಣ ನಿಷ್ಪಕ್ಷವಾಗಿ ನಡೆಯಬೇಕೀದೆ. ಹೀಗಾಗಿ ಸಾರ್ವಜನಿಕ ಸೇವಕರಾಗಿರುವ ನಾಯಕರು, ಅಧಿಕಾರದ ಸಮಗ್ರತೆಯನ್ನು ಮತ್ತು ಪಾರದರ್ಶಕವಾದ ಆಡಳಿತವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳು ನಿಜವೋ? ಸುಳ್ಳೊ? ಎಂಬುದನ್ನು ತಿಳಿಸಲು ಯಾವುದೇ ಪ್ರಭಾವವಿಲ್ಲದ ಮತ್ತು ನ್ಯಾಯಯುತ ತನಿಖೆಯನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಇಂತಹ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಕಾಪಾಡಲು ಕೂಡಲೇ ಆ ಸ್ಥಾನಕ್ಕೆ ರಾಜಿನಾಮೆ ನೀಡಿ, ಜನತೆಯ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ ಎಂದು ಹೇಳಿದ್ದಾರೆ.
ಶ್ರೀಮಂತ ಪರಂಪರೆ ಮತ್ತು ಪ್ರಗತಿಗೆ ಬದ್ಧತೆಗೆ ಹೆಸರುವಾಸಿಯಾದ ರಾಜ್ಯವಾಗಿ, ಈ ಸಮಸ್ಯೆಗಳನ್ನು ನಿರ್ಣಾಯಕವಾಗಿ ಪರಿಹರಿಸುವುದು ಕಡ್ಡಾಯವಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವು ರಾಜಕೀಯ ವಿಭಜನೆಗಳನ್ನು ಮೀರುತ್ತದೆ ಮತ್ತು ಕರ್ನಾಟಕದ ಭವಿಷ್ಯವನ್ನು ರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯ ಬಗ್ಗೆ ಮಾತನಾಡುತ್ತದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಸಮಗ್ರತೆಯಿಂದ ತನಿಖೆ ನಡಿಸುವುದು ಮತ್ತು ಯಾವುದೇ ವೈಯಕ್ತಿಯ ಅಥವಾ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲದೆ, ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.