Mysore
28
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಪ್ರೋತ್ಸಾಹ ಸಿಕ್ಕರೆ ಸಾಧನೆ ಮಾಡಲು ಸಾಧ್ಯ : ಕಲಾಶ್ರೀ ಕುಮಾರ್‌

kalashree kumar

ಮೈಸೂರು: ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದಲ್ಲಿ ಗುರುಗಳ ಹಾಗೂ ಕುಟುಂಬಸ್ಥರ ಪ್ರೋತ್ಸಾಹ ಅತ್ಯಗತ್ಯ ಎಂದು ಕಲಾಶ್ರೀ ಡಾ.ಕೆ.ಕುಮಾರ್ ಹೇಳಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಿಂಗಳ ಸಾಧಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ನಾನು ಕಿಂಚಿತ್ತು ಸಾಧನೆ ಮಾಡಿದ್ದೇನೆ ಎಂದರೆ, ಅದು ನನ್ನ ಗುರುಗಳು, ಶಿಕ್ಷಕರು, ಪತ್ನಿ ಹಾಗೂ ಅನೇಕರ ಪ್ರೀತಿ, ಹಾರೈಕೆ ಕಾರಣ ಎಂದರು.

ನಾನು ಭರತನಾಟ್ಯ ಕಲಿಯಲು ಮುಂದಾದಾಗ ನನ್ನ ಪೋಷಕರಿಗೆ ಅದು ಸಹ್ಯವಾಗಲಿಲ್ಲ. ಅವರಿಂದ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಈ ಅಸಹ್ಯವನ್ನು ಬಿಟ್ಟು ಬಿಡು ಎನುತ್ತಿದ್ದರು. ಸಂಬಂಧಗಳು ನನ್ನನ್ನು ಹಾಸ್ಯದೃಷ್ಟಿಯಲ್ಲಿ ನೋಡುತ್ತಿದ್ದರು ಎಂದು ಹೇಳಿದರು.

ಆದರೂ ಅವುಗಳೆಲ್ಲವನ್ನೂ ಮೆಟ್ಟಿನಿಂತ ನಾನು ನನ್ನ ಗುರುಗಳಾದ ನಂದಿನಿ ಹಾಗೂ ಸಂಗೀತಗಾರರಾಗಿದ್ದ ಶಿಕ್ಷಕ ಮಹದೇಪ್ಪ ಅವರ ಒತ್ತಾಸೆಯಿಂದ ಈ ಕ್ಷೇತ್ರದಲ್ಲಿ ಅಲ್ಪಮಟ್ಟಿಗಿನ ಸಾಧನೆ ಮಾಡುವಂತಾಯಿತು ಎಂದು ಹೇಳಿದರು.

ನಂತರ ನನ್ನನ್ನು ವಿವಾಹವಾದ ಮಾಲತಿ ಅವರು ವೈದ್ಯರಾಗಿದ್ದರೂ ಕೂಡ ನನ್ನಲ್ಲಿದ್ದ ಕಲೆಯನ್ನು ಪ್ರೋತ್ಸಾಹಿಸಿದರು. ನನ್ನ ಅಕ್ಕ, ಅಕ್ಕನ ಮಕ್ಕಳು, ನನ್ನ ಮಕ್ಕಳು ನನ್ನಲ್ಲಿದ್ದ ಕಲೆಯನ್ನು ಪ್ರೋತ್ಸಾಹಿಸಿ ನನ್ನ ಬೆಳವಣಿಗೆಗೆ ಕಾರಣರಾದರು ಎಂದರು.

ಆರ್ಟ್ ಗ್ಯಾಲರಿ ಸಂಸ್ಥಾಪಕ ಅಧ್ಯಕ್ಷ ಎಲ್.ಶಿವಲಿಂಗಪ್ಪ ಮಾತನಾಡಿ, ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ೨೦ಕ್ಕೂ ಹೆಚ್ಚು ಮಂದಿ ಪಿಎಚ್.ಡಿ ಪಡೆದಿದ್ದಾರೆ. ತಮ್ಮ ಮನೆಯ ಒಂದು ಭಾಗವನ್ನು ಕಲೆಮನೆ ಹೆಸರಿನಲ್ಲಿ ಕಲಾ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಕೆ.ಜೆ.ನಾರಾಯಣ ಕಿಕ್ಕೇರಿ, ಸಂಸ್ಥೆಯ ಕಾರ್ಯದರ್ಶಿ ಡಾ.ಜಮುನಾ ರಾಣಿ ಮಿರ್ಲೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಮಾಲತಿ ಕುಮಾರ್ ಹಾಜರಿದ್ದರು.

Tags:
error: Content is protected !!