Mysore
17
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಪತ್ನಿ ಕೊಲೆಗೆ ಪತಿಯಿಂದಲೇ ಸುಫಾರಿ..!

ಮೈಸೂರು : ಪತ್ನಿಯ ವರ್ತನೆಯಿಂದ ಬೇಸತ್ತಿದ್ದ ಪತಿ ಆಕೆಯನ್ನು ಹತ್ಯೆ ಮಾಡಲು ಯುವಕರಿಬ್ಬರಿಗೆ ಸುಫಾರಿ ನೀಡಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಆತ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಈ ನಡುವೆ ಯುವಕರಿಂದ ಹಲ್ಲೆಗೀಡಾಗಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಎಂಶ್ರೀ ನಗರದ ನಿವಾಸಿ ಮಹೇಶ್ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ನಾಗರತ್ನ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಪತಿಯೇ ಪತ್ನಿ ಕೊಲೆಗೆ ಸುಫಾರಿ ನೀಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ನಾಗರತ್ನ ಅವರ ಪತಿ ಮಹೇಶ್‌ನನ್ನು ವಶಕ್ಕೆ ಪಡೆದಿದ್ದು, ಸುಫಾರಿ ಪಡೆದಿದ್ದ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ.

ನಡೆದದ್ದಾದರೂ ಏನು?:
ಪಾನೀಪುರಿ ವ್ಯಾಪಾರಿಯಾಗಿದ್ದ ಮಹೇಶ್ ಹಾಗೂ ನಾಗರತ್ನ ಅವರಿಗೆ ೧೮ ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಮಕ್ಕಳಿರಲಿಲ್ಲ. ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ನಾಗರತ್ನ ಪತಿಯನ್ನು ಕೀಳಾಗಿ ನೋಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:-ಹೊಸ ವರ್ಷ ಸಂಭ್ರಮ | ಮಾರ್ಗಸೂಚಿ ಪ್ರಕಟ ; ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಸಾರ್ವಜನಿಕವಾಗಿ ನಿಂದಿಸುತ್ತಿದ್ದುದಲ್ಲದೆ, ನಿನ್ನ ಕೈಲಿ ಏನೂ ಆಗುವುದಿಲ್ಲ ಎಂದು ನೆಂಟರಿಷ್ಟರ ಸಮ್ಮುಖದಲ್ಲಿಯೇ ಮೂದಲಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಪತಿ ಮಹೇಶ್ ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದಾನೆ.
ನಂತರ ಪರಿಚಿತರ ಮೂಲಕ ಆತನಿಗೆ ಕೊಡಗಿನ ವಿರಾಜಪೇಟೆ ನಿವಾಸಿಗಳಾದ ಭಾಸ್ಕರ್ ಹಾಗೂ ಅಭಿ ಎಂಬವರ ಪರಿಚಯವಾಗಿದೆ. ಹೀಗಾಗಿ ಪತ್ನಿಯನ್ನು ಹತ್ಯೆ ಮಾಡುವಂತೆ ಅವರಿಗೆ ಸುಫಾರಿ ನೀಡಿದ್ದಾನೆ. ಹತ್ಯೆಯ ನಂತರ ೫ ಲಕ್ಷ ರೂ. ನೀಡುವುದಾಗಿ ಹೇಳಿದ್ದಾನೆ.

ಅದರಂತೆ ಮಂಗಳವಾರ ರಾತ್ರಿ ಮಹೇಶ್ ಮನೆಗೆ ತೆರಳಿದ ಯುವಕರು ನಾಗರತ್ನ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆ ಇದ್ದ ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸ್ಥಳೀಯರು ಮಹೇಶ್‌ಗೆ ವಿಚಾರ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಅವರು ಏನೂ ಅರಿಯದವರಂತೆ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು.

ವಿಚಾರಣೆ ಆರಂಭಿಸಿದ ಪೊಲೀಸರಿಗೆ ಮಹೇಶ್ ವರ್ತನೆ ಅನುಮಾನ ಮೂಡಿಸಿದೆ. ನಂತರ ಅವರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿದ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

Tags:
error: Content is protected !!