ಮೈಸೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೀಡಿರುವ ಸಾಲವನ್ನು ವಾಪಸ್ ಪಡೆಯಲು ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು (ಜ.29) ಜಿಲ್ಲಾ ಪಂಚಾಯತ್ ಅರಸು ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಜೊತೆ ಮಾತನಾಡಿದ ಅವರು, ಸಾಲ ವಸೂಲಾತಿ ಮಾಡಲು ಆರ್ಬಿಐ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲನೆ ಮಾಡಬೇಕು.
ಸಾಲ ನೀಡುವಾಗ ಯಾವುದೇ ಪೂರ್ವಪರ ನೋಡದೇ ಜನರಿಗೆ ಅನೇಕ ಮೈಕ್ರೋ ಪೈನಾನ್ಸ್ಗಳು ಸಾಲ ನೀಡಿವೆ. ಅವರ ಆರ್ಥಿಕ ಸ್ಥಿತಿಗತಿಗಳನ್ನು ನೋಡದೇ ಫೈನಾನ್ಸ್ಗಳು ತಮ್ಮ ಸಾಮರ್ಥ್ಯ ವಿಸ್ತರಿಸಿಕೊಳ್ಳಲು ಆರ್ಬಿಐ ಗೈಡ್ಲೈನ್ ಉಲ್ಲಂಘಿಸಿ ಸಾಲ ನೀಡಿರುವುದು ಗಮನಕ್ಕೆ ಬಂದಿದೆ. ಗೈಡ್ಲೈನ್ ಉಲ್ಲಂಘಿಸಿರುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯಾವುದಾದರೂ ಮೈಕ್ರೋ ಫೈನಾನ್ಸ್ ಕಂಪನಿಗಳು ಬಲವಂತವಾಗಿ ಸಾಲ ವಸೂಲಿ ಮಾಡಲು ಜನರಿಗೆ ಒತ್ತಡ ಏರಿದರೆ, ಹಿಂಸೆ ನೀಡಿದರೆ ಮೈಸೂರು ಜಿಲ್ಲಾ ನಿಂಯಂತ್ರಣಾ ಕೊಠಡಿ 1077 ಅಥವಾ 0821-2423800ಗೆ ಕರೆಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ಸಾಲ ನೀಡಿದ ಕಂಪನಿಗಳು ಏಜೆಂಟ್ರ ಮೂಲಕ ಜನರಿಗೆ ಕಿರುಕುಳ ನೀಡುತ್ತಿದ್ದರೆ ಹಾಗೂ ಯಾವುದೇ ಕಂಪನಿಗಳು ಗರಿಷ್ಠ ಮೀತಿಯ ಸಾಲ ನೀಡಿರುವುದು ಕಂಡುಬಂದರೆ ಆ ಸಂಸ್ಥೆಯ ಮ್ಯಾನೆಜರ್ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ್ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಯ ಮುಖ್ಯಸ್ಥರು ಹಾಜರಿದ್ದರು.