Mysore
24
broken clouds

Social Media

ಶನಿವಾರ, 02 ಮೇ 2026
Light
Dark

ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನೂತನ ಯುನಿಟಿ ಮಾಲ್‌ ನಿರ್ಮಾಣ: ಸಂಸದ ಯದುವೀರ್‌ ಒಡೆಯರ್‌ ಸ್ಥಳ ಪರಿಶೀಲನೆ

ಮೈಸೂರು: ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನೂತನ ಯುನಿಟಿ ಮಾಲ್‌ ನಿರ್ಮಾಣ ಆಗಲಿರುವ ಹಿನ್ನೆಲೆಯಲ್ಲಿ ಇಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸ್ಥಳ ಪರಿಶೀಲನೆ ನಡೆಸಿದರು.

ಕೇಂದ್ರ ಸರ್ಕಾರದ ಯೋಜನೆಯಡಿ 193 ಕೋಟಿ ರೂ ವೆಚ್ಚದಲ್ಲಿ ಯುನಿಟಿ ಮಾಲ್‌ ನಿರ್ಮಾಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದ ಯದುವೀರ್‌ ಒಡೆಯರ್‌ ಸ್ಥಳ ಪರಿಶೀಲನೆ ನಡೆಸಿದರು. ಯದುವೀರ್‌ ಅವರಿಗೆ ಶಾಸಕ ಶ್ರೀವತ್ಸ ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ಸಂಸದರು, ಮೈಸೂರಿನ ವಸ್ತುಪ್ರದೇಶದ ಆವರಣದ ಮಾಲ್‌ನಲ್ಲಿ 99 ಮಳಿಗೆಗಳು ಇರುತ್ತದೆ. ಮೈಸೂರಿನ ಪರಂಪರೆ ಸಾರುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ಅಂಗಡಿಗಳನ್ನು ಕೂಡ ಇಲ್ಲಿ ತೆರೆಯಲು ನಿರ್ಧಾರ ಮಾಡಲಾಗಿದೆ.

ಲೋಕಲ್ ಪ್ರಾಡಕ್ಟ್‌ಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ಜಾಗ ನೀಡಿದೆ. ಕೇಂದ್ರ ಸರ್ಕಾರ ಸಂಪೂರ್ಣ ಹಣ ನೀಡುತ್ತದೆ. ಆರುವರೆ ಎಕರೆ ಜಾಗದಲ್ಲಿ ಈ ಮಾಲ್ ನಿರ್ಮಾಣ ಆಗಲಿದ್ದು, ಪಾರ್ಕಿಂಗ್ ಸೇರಿ ಎಲ್ಲವೂ ಕೂಡ ಇಲ್ಲೆ ಆಗುತ್ತದೆ ಎಂದು ಹೇಳಿದರು.

ಇನ್ನು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಸಲುವಾಗಿ ಮಾಲ್ ನಿರ್ಮಾಣ ಮಾಡುತ್ತಿದ್ದೇವೆ. ಹೆಚ್ಚಿನ ಜನ ಮುಂದಿನ ದಿನಗಳಲ್ಲಿ ಇಲ್ಲಿ ಬರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಇಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುತ್ತೇವೆ. ವಾರಾಂತ್ಯದಲ್ಲಿ ಸಂತೆಗಳನ್ನು ಕೂಡ ಆಯೋಜಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

Tags:
error: Content is protected !!