ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಇರುವೆ ಕಚ್ಚಿ ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಮತ್ತು ಮಕ್ಕಳ ವೈದ್ಯ ಡಾ.ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ವೈದ್ಯರು, ಮಗು ಸಾವಿಗೆ ಇರುವೆ ಕಚ್ಚಿರುವುದು ಕಾರಣವಲ್ಲ. ಮಗು ಅವಧಿ ಪೂರ್ವ ಜನನವಾಗಿತ್ತು. ಹುಟ್ಟಿದಾಗ 1 ಕೆಜಿ 40 ಗ್ರಾಂ ಇದ್ದಕ್ಕಾಗಿ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮಗುವಿನ ಮುಖಕ್ಕೆ ಐಸಿಯುನಲ್ಲಿ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಆ ಪಟ್ಟಿಯಿಂದ ಮುಖದ ಮೇಲೆ ಗಾಯಗಳಾಗಿದೆ. ಹಾರ್ಟ್ ಬೀಟ್ ಕಡಿಮೆ ಆದಮೇಲೆ ಎದೆಯನ್ನು ಒತ್ತಲಾಗಿತ್ತು. ಅದರ ಮಾರ್ಕ್ಗಳು ಎದೆಯ ಮೇಲಿದೆ. ಗ್ಲೂಕೋಸ್ ಬಳಿ ಒಂದೇ ಒಂದು ಇರುವೆ ಇತ್ತು. ಅದನ್ನ ನೋಡಿದ ಪೋಷಕರು ಇರುವೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ ಇರುವೆ ಕಚ್ಚಿವೆ, ಮಗು ಸಾವಾಗಿದೆ ಎನ್ನುವುದು ಸುಳ್ಳು. ಅವಧಿ ಪೂರ್ವ ಜನನದ ಮಕ್ಕಳು ಬದುಕುಳಿಯುವುದು ತುಂಬಾ ಕಷ್ಟ. ಈಗಲೂ ಆಸ್ಪತ್ರೆಯಲ್ಲಿ 40 ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿವೆ. ಪೋಷಕರ ಆರೋಪ ಸತ್ಯಕ್ಕೆ ದೂರವಾದದ್ದು. ಪೋಷಕರು ಮಗು ಸಾವಿನ ದುಃಖದಲ್ಲಿದ್ದಾರೆ. ಈಗಾಗಿ ಆಸ್ಪತ್ರೆ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪೋಷಕರ ಆರೋಪವನ್ನು ತಿರಸ್ಕರಿಸಿದ್ದಾರೆ.





