ಮೈಸೂರು: ಬಿಜೆಪಿ ಶಾಸಕ ಮುನಿರತ್ನ ದೊಡ್ಡ ಕಳ್ಳ, ಅವನೊಬ್ಬ ಟೆರರಿಸ್ಟ್ ಎಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಬೆಳವಣಿಗೆಗಳು ಸಮಾಜಕ್ಕೆ ದೊಡ್ಡ ಮಾರಕ. ಯಾರೇ ಆಗಲಿ ಈ ಕೆಲಸ ಮಾಡಬಾರದು. ಹನಿಟ್ರ್ಯಾಪ್ ಮೂಲಕ ವಿರೋಧಿಗಳನ್ನು ಹಡಗಿಸಬಹುದು ಎನ್ನುವುದು ಸುಳ್ಳು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಎಂದಿದ್ದಾರೆ ಎಂದರು.
ಇನ್ನು ಹನಿಟ್ರ್ಯಾಪ್ ಪ್ರಮುಖ ರೂವಾರಿ ಡಿ.ಕೆ.ಶಿವಕುಮಾರ್ ಎಂದು ಶಾಸಕ ಮುನಿರತ್ನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮುನಿರತ್ನ ಒಬ್ಬ ದೊಡ್ಡ ಕಳ್ಳ, ಅವನೊಬ್ಬ ಟೆರರಿಸ್ಟ್. ಅವನಿಗೆ ನಮ್ಮ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡೋದಕ್ಕೆ ನೈತಿಕತೆ ಇಲ್ಲ. ಅವನು ಡಿ.ಕೆ.ಶಿವಕುಮಾರ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾನೆ. ಹಾಗಾದರೆ ನಾವು ಅಮಿತ್ ಶಾ ಬಗ್ಗೆನೂ ಹೇಳ್ತಿವಿ, ಮೋದಿ ಬಗ್ಗೆನೂ ಹೇಳ್ತಿವಿ. ಅವರು ಈ ರೀತಿ ಷಡ್ಯಂತ್ರ ಮಾಡ್ತಿದ್ರು ಅಂತ ಒಪ್ಪಿಕೊಳ್ತೀರಾ? ಎಂದು ಪ್ರಶ್ನೆ ಮಾಡಿ ಮುನಿರತ್ನ ವಿರುದ್ಧ ಕಿಡಿಕಾರಿದರು.





