ಮೈಸೂರು: ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಲು ಸಿಎಂ ಪತ್ನಿಗೆ ಭಯವೇ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪ್ರಶ್ನೆ ಮಾಡಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು, ಸುಪ್ರೀಂಕೋರ್ಟ್ ಹಲವು ಪ್ರಕರಣದ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ. ಇಡಿ ಈ ಪ್ರಕರಣಕ್ಕೆ ಮಾತ್ರ ತರಾಟೆಗೆ ತೆಗೆದುಕೊಂಡಿಲ್ಲ. ಪಾರ್ವತಿ ಸಿದ್ದರಾಮಯ್ಯ ಇಡಿ ಮುಂದೆ ಯಾಕೆ ಹಾಜರಾಗಿ ವಿಚಾರಣೆ ಎದುರಿಸುತ್ತಿಲ್ಲ. ಇಡಿ ನೋಟಿಸ್ ಕೊಟ್ಟರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತಾರೆ. ಹಾಗಾದ್ರೆ ಲೋಕಾಯುಕ್ತ ಅಧಿಕಾರಿಗಳ ಜೊತೆ ಮೊದಲೇ ಮಾತುಕತೆ ಮಾಡಿಕೊಂಡು ವಿಚಾರಣೆಗೆ ಹಾಜರಾಗಿದ್ರಾ? ಎಂದು ಸಿಎಂ ಪತ್ನಿ ಪಾರ್ವತಿಗೆ ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ವತಿ ಸಿದ್ದರಾಮಯ್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಲು ಸಿಎಂ ಪತ್ನಿಗೆ ಭಯವೇಕೆ? ಇಡೀ ಮುಡಾ ಪ್ರಕರಣವನ್ನ ಸುಪ್ರೀಂಕೋರ್ಟ್ ರದ್ದುಗೊಳಿಸಿಲ್ಲ. ಇಡಿ ನೋಟಿಸ್ ಕೊಟ್ಟಿರುವುದು ತಪ್ಪು ಅನ್ನುವುದಾದರೇ ತನಿಖೆ ಸಂಸ್ಥೆಗಳು ವಿಚಾರಣೆ ಮಾಡುವುದೇ ತಪ್ಪಾ.? ಆರೋಪಿಗಳ ಮನಸ್ಥಿತಿ ಹೇಗಿದೆ ಎಂಬುದು ಇಲ್ಲೇ ಗೊತ್ತಾಗಲಿದೆ. ಇನ್ನು ಮುಂದೆ ಕಾನೂನಾತ್ಮಕವಾದ ಹೋರಾಟ ಮುಂದುವರೆಯುತ್ತದೆ. ನನ್ನ ಹೋರಾಟ ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ. ಸ್ನೇಹಮಯಿ ಕೃಷ್ಣನ ಬಳಿ ಸಾಕಷ್ಟು ದಾಖಲೆಗಳು ಇದೆ ಅನ್ನೋ ಕಾರಣಕ್ಕೆ ವಿಚಾರಣೆಗೆ ಬರುತ್ತಿಲ್ಲ. ಈ ವಿಚಾರ ಇಡೀ ದೇಶದ ಜನರಿಗೆ ಗೊತ್ತಿದೆ. ತನಿಖಾ ಸಂಸ್ಥೆಗಳು ಯಾವ ರೀತಿ ತನಿಖೆ ಮಾಡಬೇಕು ಎಂಬುದನ್ನು ನ್ಯಾಯಾಲಯ ತಿಳಿಸಲಿ ಎಂದು ಆಗ್ರಹಿಸಿದರು.





