Mysore
22
overcast clouds

Social Media

ಸೋಮವಾರ, 23 ಫೆಬ್ರವರಿ 2026
Light
Dark

‘ಯುದ್ಧಕಾಂಡ’ದ ಮೊದಲ ಐದು ಟಿಕೆಟ್‍ ಖರೀದಿಸಿದ ರವಿಚಂದ್ರನ್‍

ಅಜೇಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ನಟ-ನಿರ್ದೇಶಕ ರವಿಚಂದ್ರನ್‍ ಅವರು ಚಿತ್ರದ ಐದು ಗೋಲ್ಡ್ ಕ್ಲಾಸ್‍ ಟಿಕೆಟ್‍ಗಳನ್ನು ಖರೀದಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಭಾನುವಾರ ಬೆಳಿಗ್ಗೆ ರವಿಚಂದ್ರನ್‍, ‘ಯುದ್ಧಕಾಂಡ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಶಂಖ ಊದುವ ಮೂಲಕ ಟ್ರೇಲರ್‍ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ‘ನಾನು ಬರುವಾಗ ಅಜೇಯ್‍ ಅವರ ಒಂದಿಷ್ಟು ಸಂದರ್ಶನಗಳನ್ನು ನೋಡಿಕೊಂಡು ಬಂದೆ. ಈ ಚಿತ್ರಕ್ಕಾಗಿ ಸಾಕಷ್ಟು ಸಾಲ ಮಾಡಿದ್ದೇನೆ ಎಂದು ಅಜೇಯ್‍ ಹಲವು ಬಾರಿ ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ನನಗೆ ನನ್ನ ಸಾಲದ ನೆನಪಾಯಿತು. ಸಾಲ ಮಾಡೋದಕ್ಕೆ ತಾಕತ್ತು ಬೇಡ. ಸಾಲ ತೀರಿಸೋಕೆ ತಾಖತ್ತು ಬೇಕು. ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಗೊತ್ತಿಲ್ಲ. ನನಗೆ 100 ಡ್ಯಾನ್ಸರ್ಸ್ ಬೇಕು, 100 ಫೈಟರ್ಸ್ ಬೇಕು ಎಂದು ಹೇಳಿಬಿಡುತ್ತಿದ್ದೆ. ಅಪ್ಪ ಎಲ್ಲಿಂದ ಹಣ ತರುತ್ತಿದ್ದರು ಅಂತ ನಾನು ಯೋಚನೆ ಮಾಡುತ್ತಿರಲಿಲ್ಲ. ಅವರು ಇಲ್ಲದಿದ್ದಾಗ ನನಗೆ ಕಷ್ಟ ಗೊತ್ತಾಯಿತು. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೇವೆ ಅನ್ನೋದಷ್ಟೇ ಮುಖ್ಯ’ ಎಂದರು.

‘ಯುದ್ಧಕಾಂಡ’ ಚಿತ್ರವನ್ನು ನೋಡುವುದಾಗಿ ಹೇಳಿದ ರವಿಚಂದ್ರನ್, ‘ನಿಮ್ಮ ಚಿತ್ರತಂಡ ನೋಡಿದರೆ, ನಿಮ್ಮಲ್ಲಿ ಶ್ರದ್ಧೆ ಕಾಣುತ್ತಿದೆ. ನಿಮ್ಮ ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ನೀವು ಇಷ್ಟೆಲ್ಲಾ ಮಾಡಿ ಸಿನಿಮಾ ಮಾಡಿರುವಾಗ ನಾನು ಏನು ಕೊಡೋಕೆ ಸಾಧ್ಯ? ನಾನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಸಿನಿಮಾ ನೋಡಿ ಫೋನ್‍ ಮಾಡುತ್ತೇನೆ’ ಎಂದು ತಕ್ಷಣವೇ ಜೇಬಿನಿಂದ ದುಡ್ಡು ತೆಗೆದು ಅಜೇಯ್‍ಗೆ ಕೊಟ್ಟು, ಚಿತ್ರದ ಐದು ಗೋಲ್ಡ್ ಕ್ಲಾಸ್‍ ಟಿಕೆಟ್‍ ಕಾದಿರಿಸಿದರು.

‘ಯುದ್ಧಕಾಂಡ’ ಚಿತ್ರಕ್ಕೆ ಪವನ್‍ ಭಟ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಜೇಯ್‍ ರಾವ್‍, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್‍. ನಾಗಾಭರಣ ಮುಂತಾದವರು ನಟಿಸಿದ್ದಾರೆ. ಕಾರ್ತಿಕ್‍ ಶರ್ಮ ಛಾಯಾಗ್ರಹಣ ಮತ್ತು ಹೇಮಂತ್‍ ಜೋಯಿಸ್‍ ಅವರ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!