Mysore
31
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಕೊನೆಗೂ ಬರುತ್ತಿದ್ದಾನೆ ‘ವಾಮನ’; ಏಪ್ರಿಲ್‍.10ಕ್ಕೆ ಚಿತ್ರ ಬಿಡುಗಡೆ

ಧನ್ವೀರ್‍ ಗೌಡ ಅಭಿನಯದ ‘ವಾಮನ’ ಚಿತ್ರವು 2023ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಅಂದುಕೊಂಡಂತೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಅದಾದ ಮೇಲೆ ಧನ್ವೀರ್‍ ಅಭಿನಯದ ‘ಕೈವ’ ಚಿತ್ರ ಬಿಡುಗಡೆಯಾದರೂ ‘ವಾಮನ’ ಮಾತ್ರ ಬರಲಿಲ್ಲ. ನಾಯಕ ಮತ್ತು ನಿರ್ಮಾಪಕರ ನಡುವಿನ ಮುನಿಸಿನಿಂದ ಚಿತ್ರ ಬಿಡುಗಡೆಯಾಗುವುದೇ ಸಂಶಯ ಎಂಬ ಮಾತುಗಳು ಕೇಳಿ ಬಂದಿದ್ದವು.

ಹೀಗಿರುವಾಗಲೇ, ಒಂದೂವರೆ ವರ್ಷಗಳ ನಂತರ ಕೊನೆಗೂ ‘ವಾಮನ’ ಬಿಡುಗಡೆಯಾವುದಕ್ಕೆ ಸಿದ್ಧನಾಗಿದ್ದಾನೆ. ಚಿತ್ರವನ್ನು ಏಪ್ರಿಲ್‍.10ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ತಾಯಿ ಸೆಂಟಿಮೆಂಟ್‍ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ‘ಕಂದ ಕನಸ ರೂಪ …’ ಎಂಬ ತಾಯಿ – ಮಗನ ಬಾಂಧವ್ಯದ ಕುರಿತಾದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ‘ಕಾಂತಾರ’ ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು A2 music ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಂಕರ್ ರಾಮನ್, ‘ನನಗೆ ‘ಕೈ ತುತ್ತು ಕೊಟ್ಟವಳೆ …’ ಹಾಗೂ ‘ಬೇಡುವೆನು ವರವನು …’ ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಹಾಡನ್ನು ಬರೆದುಕೊಟ್ಟಿದ್ದಾರೆ. ತಾಯಿ ತನ್ನ ಬವಣೆಗಳನ್ನು ಮಗನ ಮುಂದೆ ಹೇಳಿಕೊಳ್ಳುವ ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.

ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದರೂ, ಮುನಿಸು ಮರೆಯಾದಂತೆ ಕಾಣಲಿಲ್ಲ. ಸಮಾರಂಭದಲ್ಲಿ ಹಾಜರಿದ್ದರೂ ನಿರ್ಮಾಪಕ ಚೇತನ್‍ ಗೌಡ ಮತ್ತು ನಾಯಕ ಧನ್ವೀರ್‍ ಗೌಡ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಇಷ್ಟಕ್ಕೂ ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ವ್ಯಾಪಾರದ ವಿಷಯವಾಗಿ ಚಿತ್ರ ಸ್ವಲ್ಪ ತಡವಾಯಿತು’ ಎಂದು ನಿರ್ಮಾಪಕರು ಹೇಳಿದ್ದಾರೆ.

‘ವಾಮನ’ ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಜೊತೆಗೆ ತಾರಾ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್‍ ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!