ಉಪೇಂದ್ರ ಅಭಿನಯದಲ್ಲಿ ‘ಸೂರಪ್ಪ’ ಬಾಬು ಹೊಸ ಚಿತ್ರ ನಿರ್ಮಿಸುತ್ತಾರೆ, ಅದನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಯುಗಾದಿ ಹಬ್ಬದಂದು ಬಂದಿತ್ತು. ಇನ್ನು, ಅಕ್ಷಯ ತೃತೀಯ ದಿನದಂದು ಚಿತ್ರದ ಹೆಸರು ಘೋಷಣೆ ಆಗುತ್ತದೆ ಎಂದು ಹೇಳಲಾಗಿತ್ತು.
ಅದರಂತೆ ಚಿತ್ರದ ಘೋಷಣೆ ಇಂದು ಕೊನೆಗೂ ಆಗಿದೆ. ಚಿತ್ರಕ್ಕೆ ‘ಭಾರ್ಗವ’ ಎಂಬ ಹೆಸರು ಇಡಲಾಗಿದ್ದು, ಚಿತ್ರದ ಶೀರ್ಷಿಕೆ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದೆ. A Violent Family Man ಎಂಬ ಅಡಿಬರಹವಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ:- ಪೃಥ್ವಿ ಹೊಸ ಚಿತ್ರ ‘ಕೊತ್ತಲವಾಡಿ’; ಯಶ್ ತಾಯಿ ನಿರ್ಮಾಪಕಿ
ಕನ್ನಡ ಚಿತ್ರರಂಗಕ ಕಂಡ ಜನಪ್ರಿಯ ನಟ-ನಿರ್ದೇಶಕ ಜೋಡಿಗಳ ಪೈಕಿ ಉಪೇಂದ್ರ ಮತ್ತು ನಾಗಣ್ಣ ಅವರ ಜೋಡಿ ಸಹ ಒಂದು. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ ಜೋಡಿ ಮಾಡಿತ್ತು. ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ, ಕನಕದಾಸರ ಕುರಿತಾದ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಕೆಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಆದರೆ, ಆ ಚಿತ್ರ ಮುಂದುವರೆಯಲಿಲ್ಲ. ಈಗ ನಾಗಣ್ಣ ಮತ್ತು ಉಪೇಂದ್ರರ ಜೊತೆಯಾಟದಲ್ಲಿ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಬಾಬು.
ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಬು ನಿರ್ಮಾಣದಲ್ಲಿ ನಾಗಣ್ಣ ನಿರ್ದೇಶನದ ನಾಲ್ಕನೇ ಚಿತ್ರ ಇದು. ಇದಕ್ಕೂ ಮೊದಲು ಬಾಬು ನಿರ್ಮಾಣದ ‘ಸೂರಪ್ಪ’, ‘ಕೋಟಿಗೊಬ್ಬ’ ಮತ್ತು ‘ಬಂಧು-ಬಳಗ’ ಚಿತ್ರಗಳನ್ನು ನಾಗಣ್ಣ ನಿರ್ದೇಶನ ಮಾಡಿದ್ದರು.
‘ಭಾರ್ಗವ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.





