‘ಮನದ ಕಡಲು’ ಚಿತ್ರದ ‘ಹೂ ದುಂಬಿಯ ಕಥೆಯ’ ಎಂಬ ಹಾಡನ್ನು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದರು ನಿರ್ದೇಶಕ ಯೋಗರಾಜ್ ಭಟ್. ಈಗ ಅವರು ಇನ್ನೊಂದು ಹೊಸ ಹಾಡಿನೊಂದಿಗೆ ಬಂದಿದ್ದಾರೆ. ‘ತುರ್ರಾ’ ಎಂದು ಪ್ರಾರಂಭವಾಗುವ ಈ ಹಾಡನ್ನು ಯೂಟ್ಯೂಬ್ನ ಡಿಬೀಟ್ಸ್ ಚಾನಲ್ನಲ್ಲಿ ಬಿಡುಗಡೆಯಾಗಿದೆ.
‘ತುರ್ರಾ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವಿ. ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ.
‘ತುರ್ರಾ’ ಒಂದು ಅರ್ಥವಿಲ್ಲದ ಹಾಡು. ಯೋಗರಾಜ್ ಭಟ್ ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್ನಲ್ಲಿ ಕೆಲವು ಈ ತರಹದ ಅರ್ಥವಿಲ್ಲದ ಹಾಡುಗಳು ಮೂಡಿಬಮದಿರುವುದಷ್ಟೇ ಅಲ್ಲ, ಜನಪ್ರಿಯವೂ ಆಗಿವೆ. ಆ ಅನರ್ಥದ ಹಾಡಗಳಿಗೆ ಈ ‘ತುರ್ರಾ’ ಸೇರ್ಪಡೆಯಾಗಿದೆ.
ಈ ಹಾಡಿನ ಕುರಿತು ಮಾತನಾಡುವ ಯೋಗರಾಜ್ ಭಟ್, ‘ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅಲಿಮಾ ಎಂಬ ಹುಚ್ಚ ಇದ್ದ. ಆತನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ ಆತನ ಹಿಂದೆ ಸುತ್ತುತ್ತಿದ್ದೆವು. ಆತ ‘ಬೊಂಬುವೈ ಟುರ್ರವೈ’ ಎಂಬ ಪದ ಬಳಸುತ್ತಿದ್ದ. ಆ ಪದವೇ ಈ ‘ತುರ್ರಾ’ ಹಾಡು ಬರೆಯಲು ಸ್ಪೂರ್ತಿ. ವಿ. ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ. ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದರು.
ವಿಶೇಷವೆಂದರೆ, ಚಿತ್ರ ಪ್ರಾರಂಭವಾಗಿದ್ದು, ನಿರ್ಮಾಪಕ ಇ. ಕೃಷ್ಣಪ್ಪ ಅವರ ನೆಲಮಂಗಲದ ತೋಟದಲ್ಲಿ. ಈಗ ಅಲ್ಲೇ ಮುಕ್ತಾಯವಾಗಿದೆ. ಈ ಕುರಿತು ಮಾತನಾಡುವ ಭಟ್, ‘ಚಿತ್ರ ಅರಂಭವಾಗಿದ್ದು, ಈಗ ಮುಕ್ತಾಯವಾಗಿದ್ದು ಇದೇ ಸ್ಥಳದಲ್ಲಿ. ಹಾಗಾಗಿ, ಚಿತ್ರದ ಎರಡನೇ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ’ ಎಂದರು.
ವಿ. ಹರಿಕೃಷ್ಣ ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ಒಂದೊಂದು ಪದ ಹಾಡುವಾಗಲೂ ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆಯ ಹಾಡು ಬರೆದಿದ್ದಾರೆ’ ಎಂದು ವಿ. ಹರಿಕೃಷ್ಣ ತಿಳಿಸಿದರು.
‘ಮನದ ಕಡಲು’ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಹಿರಿಯ ನಟರಾದ ದತ್ತಣ್ಣ, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.





