Mysore
25
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಬಂಡೀಪುರ ಸಫಾರಿ ಪರ-ವಿರೋಧ ಜಟಾಪಟಿ ; ರೈತರು, ಸಫಾರಿ ಬೆಂಬಲಿತರು ಪೊಲೀಸರ ವಶಕ್ಕೆ.

ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.

ಬಂಡೀಪುರದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಆವರಣದಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ರವಿ ಕಿರಣ್ ನೇತೃತ್ವದಲ್ಲಿ ಜಮಾಯಿಸಿದ 40 ಕ್ಕೂ ಅಧಿಕ ರೈತರು ವನ್ಯಜೀವಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಫಾರಿ ಬೇಡ ಎಂದು ಘೋಷಣೆ ಕೂಗಿದರು. ಇದರ ಬೆನ್ನಲ್ಲೇ ಸಫಾರಿಯಿಂದ ಪ್ರವಾಸಿಗರು ಬರಲಿದ್ದು ರೆಸಾರ್ಟ್, ಹೋಂ ಸ್ಟೇ ಹಾಗೂ ಸ್ಥಳೀಯವಾಗಿ ಆರ್ಥಿಕ ಸ್ವಾವಲಂಬನೆಗೆ ಸಹಾಯಕವಾಗಲಿದೆ ಎಂದು ಸಫಾರಿ ಬೆಂಬಲಿತರು ಧರಣಿಗೆ ಮುಂದಾದರು.

ಪರಿಸ್ಥಿತಿಯನ್ನು ತಿಳಿಗಿಳಿಸಲು ಮುನ್ನೆಚ್ಚರಿಕೆ ಕ್ರಮವಾಗಿ 30 ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದು ಬೇಗೂರು ಪೊಲೀಸ್ ಠಾಣೆಗೆ ಹಾಗೂ 20 ಕ್ಕೂ ಅಧಿಕ ಸಫಾರಿ ಬೆಂಬಲಿತರನ್ನು ವಶಕ್ಕೆ ಪಡೆದು ತೆರಕಣಾಂಬಿ ಠಾಣೆಗೆ ಕರೆದೊಯ್ಯಲಾಯಿತು.

ಸಫಾರಿ ಪುನಾರಂಭಕ್ಕೆ ಪರ ವಿರೋಧ ವ್ಯಕ್ತವಾದ ಹಿನ್ನೆಲೆ ಚಾಮರಾಜನಗರ ಪೊಲೀಸ್ ಇಲಾಖೆ ಭಾರೀ ಬಿಗಿ ಭದ್ರತೆ ಕೈಗೊಂಡಿದ್ದರು. ಇನ್ನು, ಆದೇಶ ಕೈ ಸೇರದ ಹಿನ್ನೆಲೆ ಬಂಡೀಪುರದಲ್ಲಿ ಸಫಾರಿ ಇನ್ನೂ ಆರಂಭಗೊಂಡಿಲ್ಲ.

Tags:
error: Content is protected !!