Mysore
18
scattered clouds

Social Media

ಗುರುವಾರ, 12 ಫೆಬ್ರವರಿ 2026
Light
Dark

‘ಖದೀಮ’ನ ಲವ್‍ ಸ್ಟೋರಿ; ಜಿಮ್‍ ತರಬೇತುದಾರ ಹೀರೋ ಆದಾಗ

ಕಳೆದ ವರ್ಷ ‘ಅಪ್ಪಾ ಐ ಲವ್‍ ಯು’ ಚಿತ್ರದಲ್ಲಿ ಸಂಜಯ್‍ ಎಂಬ ಜಿಮ್‍ ಟ್ರೈನರ್‍, ನಾಯಕನಾಗಿ ಅಭಿನಯಿಸಿದ್ದರು. ಈ ಶುಕ್ರವಾರ (ಏಪ್ರಿಲ್‍ 18) ಬಿಡುಗಡೆಯಾಗುತ್ತಿರುವ ‘ಖದೀಮ’ ಎಂಬ ಹೊಸ ಚಿತ್ರದಲ್ಲೂ ಚಂದನ್‍ ಎಂಬ ಜಿಮ್‍ ಟ್ರೈನರ್‍ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

‘ಖದೀಮ’ ಚಿತ್ರವನ್ನು ಶಿವೇಶು ಪ್ರೊಡಕ್ಷನ್ ಅಡಿಯಲ್ಲಿ ಅನಿವಾಸಿ ಭಾರತೀಯ ಟಿ. ಸಿವಕುಮಾರನ್ ನಿರ್ಮಿಸುತ್ತಿದ್ದು, ಯಶಸ್ವಿನಿ ಆರ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಯಿ ಪ್ರದೀಪ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಚಂದನ್, ನಾಯಕಿಯಾಗಿ ಅನುಷಾ ಕೃಷ್ಣ ಅಭಿನಯಸಿದ್ದಾರೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಾಯಿ ಪ್ರದೀಪ್‍, ‘ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದ ಯುವಕನೊಬ್ಬ ಪ್ರೀತಿಯಲ್ಲಿ ಬಿದ್ದಾಗ, ಆತನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಮುಂದೆ ಅವನ ಜೀವನದಲ್ಲಿ ಏನೆಲ್ಲಾ ಆಗುತ್ತದೆ, ಅವನಿಂದ ಸಮಾಜಕ್ಕೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಇಲ್ಲಿಯವರೆಗೂ ಮಚ್ಚು, ಲಾಂಗ್‌ಗಳ ಸದ್ದು ಪರದೆ ಮೇಲೆ ಆರ್ಭಟಿಸಿತ್ತು. ನಮ್ಮ ಸಿನಿಮಾದಲ್ಲಿ ಇದೆಲ್ಲಾವನ್ನು ಪಕ್ಕಕ್ಕೆ ಇಟ್ಟು, ಪ್ರೀತಿಯ ಅಂಶವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೇ ಪ್ರದೇಶದಲ್ಲಿ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು’ ಎಂದರು.

ಜಿಮ್ ತರಭೇತಿದಾರನಾಗಿದ್ದ ಚಂದನ್‍ಗೆ ಗೆಳೆಯರು ಹೀರೋ ಆಗು ಅಂತ ಹುರಿದುಂಬಿಸಿದರಂತೆ. ‘ಆಗ ಮೊದಲು ನಿರ್ಮಾಪಕರನ್ನು ಹಿಡಿದೆ. ಅದೇ ಮೊದಲ ಸಾಧನೆ ಎನ್ನಬಹುದು. ನಟನೆಯ ಅನುಭವ ಇಲ್ಲದಿದ್ದರೂ, ದೇವರ ದಯೆಯಿಂದ ಸೆಟ್‌ನಲ್ಲಿ ನಿರ್ದೇಶಕರು ಹೇಳಿಕೊಟ್ಟಂತೆ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಅವರೇ ನನಗೆ ಗುರುಗಳು’ ಎಂದರು.

ನಿಜ ಜೀವನದಲ್ಲಿ ರಂಗಕರ್ಮಿಯಾಗಿರುವ ನಾಯಕಿ ಅನುಷಾ ಕೃಷ್ಣ ಚಿತ್ರದಲ್ಲೂ ಅದೇ ಪಾತ್ರವನ್ನು ಮಾಡಿದ್ದಾರಂತೆ. ಚಿತ್ರದಲ್ಲಿ ಚಂದನ್‍ ಮತ್ತು ಅನುಷಾ ಜೊತೆಗೆ ಶೋಭರಾಜ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ವಿ. ಮನೋಹರ್, ಯಶ್‌ ಶೆಟ್ಟಿ, ಮಿಮಿಕ್ರಿ ದಯಾನಂದ್, ಶಿವಕುಮಾರ್‌ ಆರಾಧ್ಯ ಮುಂತಾದವರು ನಟಿಸಿದ್ದಾರೆ.

‘ಖದೀಮ’ ಚಿತ್ರಕ್ಕೆ ನಾಗಾರ್ಜುನ ಅವರ ಛಾಯಾಗ್ರಣ, ಶಶಾಂಕ್‍ ಶೇಷಗಿರಿ ಸಂಗೀತವಿದೆ. ಸಂಗೀತದ ಜೊತೆಗೆ ಶಶಾಂಕ್‍ ಒಂದು ಹಾಡನ್ನು ಹಾಡುವುದರ ಜೊತೆಗೆ, ಚಿತ್ರದಲ್ಲೊಂದು ಚಿಕ್ಕ ಪಾತ್ರವನ್ನೂ ಮಾಡಿದ್ದಾರಂತೆ.

Tags:
error: Content is protected !!