ನಾಗಭೂಷಣ್ ಅಭಿನಯದ ‘ಟಗರು ಪಲ್ಯ’ ಬಿಡುಗಡೆಯಾಗಿ ಒಂದೂವರೆ ವರ್ಷಗಳಾಗಿವೆ. ಚಿತ್ರ ಯಶಸ್ವಿಯಾದರೂ ನಾಗಭೂಷಣ್, ‘ವಿದ್ಯಾಪತಿ’ ಎಂಬ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ಮಿಕ್ಕಂತೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಇಷ್ಟಕ್ಕೂ ನಾಗಭೂಷಣ್ ಯಾಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ? ಈ ಪ್ರಶ್ನೆ ಮುಂದಿಟ್ಟರೆ, ನನ್ನ ಜೊತೆಗೆ ಸಿನಿಮಾ ಮಾಡಲು ಯಾರು ಬರ್ತಾರೆ? ಎಂದು ಪ್ರಶ್ನಿಸುತ್ತಾರೆ.
‘ವಿದ್ಯಾಪತಿ’ ಚಿತ್ರವು ಏಪ್ರಿಲ್.10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಾಗಭೂಷಣ್, ‘ನಾನು ಚಿತ್ರರಂಗಕ್ಕೆ ಹೀರೋ ಆಗಬೇಕು ಎಂದು ಬಂದವನು ಅಲ್ಲ. ಒಳ್ಳೆಯ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಹೋಗಬೇಕು ಎಂದುಕೊಂಡಿದ್ದೆ. ಇದು ನನಗೆ ಜೀವನದಲ್ಲಿ ಸಿಕ್ಕ ಬೋನಸ್. ನನ್ನ ನಂಬಿ ನಿರ್ದೇಶಕರು ‘ವಿದ್ಯಾಪತಿ’ ಚಿತ್ರ ಕೊಟ್ಟರು. ನೀವು ಡಾಲಿ ಪಿಕ್ಚರ್ಸ್ ಬಿಟ್ಟು ಬೇರೆ ಕಡೆ ಯಾಕೆ ಸಿನಿಮಾ ಮಾಡಲ್ಲ ಎಂದು ಕೆಲವರು ಕೇಳುತ್ತಾರೆ. ಆದರೆ, ನನಗೆ ಸಿನಿಮಾ ಮಾಡಲು ಯಾರು ಮುಂದೆ ಬರುತ್ತಾರೆ? ಅದನ್ನು ನನ್ನ ಗೆಳೆಯ ಧನಂಜಯ್ ಮಾಡಿದ್ದಾನೆ’ ಎಂದು ಭಾವುಕರಾದರು.
ಧ್ರುವ ಸರ್ಜಾ ಮಾತನಾಡಿ, ‘ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ನಮ್ಮ ಪೀಳಿಗೆಯ ರವಿಚಂದ್ರನ್ ಅವರು ಹೊಸಬರನ್ನು ಮುಂದಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಸು ಮತ್ತು ವ್ಯಕ್ತಿತ್ವ ಇರುವ ವ್ಯಕ್ತಿ. ಅವರಿಗೆ ಒಳ್ಳೆಯದಾಗಬೇಕು’ ಎಂದರು.
’ವಿದ್ಯಾಪತಿ’ ಫ್ಯಾಮಿಲಿ ನೋಡುವ ಸಿನಿಮಾ ಎನ್ನುವ ಧನಂಜಯ್, ‘ಕುಟುಂಬ ಸಮೇತರಾಗಿ ಮಕ್ಕಳ ಜೊತೆ ಬಂದು ಎಲ್ಲರೂ ಚಿತ್ರ ನೋಡಬಹುದು. ಪ್ರೇಕ್ಷಕರು ಕೈ ಹಿಡಿಯುವುದು ಮುಖ್ಯ. ಅವರ ಪ್ರೀತಿ ಯಾವಾಗಲೂ ಇರಲಿ. ಧ್ರುವ ಮೊದಲ ಸಿನಿಮಾದಿಂದಲೇ ಸೂಪರ್ ಸ್ಟಾರ್. ‘ಪೊಗರು’ ಚಿತ್ರದಲ್ಲಿ ಜೊತೆಯಲ್ಲಿ ಕೆಲಸ ಮಾಡಿದ್ದೆ. ಅವರು ಬಂದು ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ’ ಎಂದರು.
‘ವಿದ್ಯಾಪತಿ’ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.





