Mysore
23
broken clouds

Social Media

ಶನಿವಾರ, 28 ಫೆಬ್ರವರಿ 2026
Light
Dark

‘ಬಿಳಿಚುಕ್ಕಿ ಹಳ್ಳಿಹಕ್ಕಿ’ಗೆ ಶ್ರೀಮುರಳಿ ಬೆಂಬಲ

ಶ್ರೀಮುರಳಿ ಕಳೆದೆರಡು ವಾರಗಳಿಂದ ಸುದ್ದಿಯಲ್ಲಿದ್ದಾರೆ. ಮೊದಲು ಅವರ ‘ಪರಾಕ್‍’ ಚಿತ್ರದ ಮುಹೂರ್ತವಾಯಿತು. ಕಳೆದ ವಾರ ‘ಉಗ್ರಾಯುಧಮ್‍’ ಚಿತ್ರಕ್ಕೆ ಚಾಲನೆ ಸಿಕ್ಕಿತು. ಈ ವಾರ ಅವರು ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಕ್ಟೋಬರ್.24ರಂದು ಬಿಡುಗಡೆಯಾಗುತ್ತಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರವನ್ನು ಅವರು ಅರ್ಪಿಸುತ್ತಿದ್ದಾರೆ.

ಈ ಹಿಂದೆ, ‘ಮಹಿರಾ’ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್‍ ಗೌಡ ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ಹೊಸ ಚಿತ್ರ ‘ಬಿಳಿಚುಕ್ಕಿ ಹಳ್ಳಿಹಕ್ಕಿ. ಈ ಚಿತ್ರವನ್ನು ಅರ್ಪಿಸುವುದರ ಜೊತೆಗೆ, ಇತ್ತೀಚೆಗೆ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ ಶ್ರೀಮುರಳಿ.

ಇದನ್ನು ಓದಿ: ನಿಜಜೀವನದ ಪ್ರೇಮಿಗಳಿಂದ ಬಿಡುಗಡೆಯಾಯ್ತು ‘ಜೈ’ ಚಿತ್ರದ ಪ್ರೇಮಗೀತೆ

ಈ ಚಿತ್ರವನ್ನು ಅರ್ಪಿಸುತ್ತಿರುವ ಹಿಂದಿನ ಕಾರಣವನ್ನು ಹೇಳಿದ ಶ್ರೀಮುರಳಿ, ‘ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ತೊನ್ನು (ವಿಟಿಲಿಗೋ) ಸಮಸ್ಯೆಯ ಸುತ್ತ ರೂಪುಗೊಂಡಿರೋ ಚಿತ್ರವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿದ್ದಾರೆ. ಚಿತ್ರ ನೋಡಿ ಇಷ್ಟವಾದ ಕಾರಣ ಈ ಚಿತ್ರವನ್ನು ಅರ್ಪಿಸುವುದಕ್ಕೆ ಮುಂದಾಗಿದ್ದೇನೆ. ಶಾಲಾ ದಿನಗಳಲ್ಲಿ ನನ್ನ ಸ್ನೇಹಿತನೊಬ್ಬ ವಿಟಿಲಿಗೋ ಸಮಸ್ಯೆಯಿಂದ ಬಳಲುತ್ತಿದ್ದ. ವಿಟಿಲಿಗೋವನ್ನು ಸಮಸ್ಯೆ ಅಂದುಕೊಳ್ಳದೇ, ಜೀವನವನ್ನು ಮುನ್ನಡೆಸಬೇಕು’ ಎಂದರು.

ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಅಂದಾಕ್ಷಣ ಮನೋರಂಜನೆ ಇರುವುದಿಲ್ಲ ಅಂದುಕೊಳ್ಳಬೇಕಿಲ್ಲ ಅಂತಾರೆ ನಿರ್ದೇಶಕ ಮಹೇಶ್‍ ಗೌಡ. ‘ಇದೊಂದು ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾ. ಎಂಥಾ ಗಹನವಾದ ಕಥೆಯನ್ನಾದರೂ ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪೋದು ಕಷ್ಟ. ಹಾಗಿರೋದರಿಂದಲೇ ದುಗುಡವನ್ನೂ ಕೂಡಾ ತೆಳು ಹಾಸ್ಯದ ಮೂಲಕ ದಾಟಿಸುತ್ತಲೇ ಸಾಮಾಜಿಕ ಸಂದೇಶ ನೀಡಲಾಗಿದೆ. ಕುಟುಂಬ ಸಮೇತ ಕೂತು ನೋಡುವಂತಹ ಚಿತ್ರ ಇದು’ ಎಂದರು.

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ಸಿ.ಹೆಚ್‌.ಎಂ ಛಾಯಾಗ್ರಹಣ ಮತ್ತು ರಿಯೋ ಆಂಟನಿ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!