Mysore
21
overcast clouds
Light
Dark

ಕುಮಾರ್‌ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದ ಶಿವಣ್ಣ ಅಭಿಮಾನಿಗಳು

ಬೆಂಗಳೂರು: 18ನೇ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಸೋಲು ಕಂಡಿದ್ದ ಸ್ಯಾಂಡಲ್‌ವುಡ್‌ ದೊಡ್ಮನೆ ಸೊಸೆ ಗೀತಾ ಶಿವರಾಜ್‌ ಕುಮಾರ್‌ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಕುಮಾರ ಬಂಗಾರಪ್ಪ ವಿರುದ್ಧ ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ನಾಯಕ ಕುಮಾರ್‌ ಬಂಗಾರಪ್ಪ ಅವರ ಸದಾಶಿವ ನಗರದ ಮನೆಗೆ ಶಿವರಾಜ್‌ ಕುಮಾರ್‌ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಕುಮಾರ್‌ ಬಂಗಾರಪ್ಪ ಅವರ ಪೋಸ್ಟ್‌ನಲ್ಲಿ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದಾರೆ. ಅವರನ್ನು ಹೊರಗೆ ಕರೆಸಿ ಬಹಿರಂಗ ಕ್ಷಮೆ ಕೇಳಿಸಬೇಕು ಎಂದು ಶಿವಣ್ಣ ಅಭಿಮಾನಿಗಳು ಒತ್ತಾಯಿಸಿದರು. ಕುಮಾರ್‌ ಬಂಗಾರಪ್ಪ ಮನೆಗೆ ನುಗ್ಗಿ ದಾಂದಲೆ ನಡೆಸಿದ ಕಾರಣಕ್ಕಾಗಿ ಪೊಲೀಸರು ಕೆಲವರನ್ನು ಬಂಧಿಸಿದರು.

ಕುಮಾರ್‌ ಬಂಗಾರಪ್ಪ ಪೋಸ್ಟ್‌ನಲ್ಲೇನಿದೆ?

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋತ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಮಧು ಬಂಗಾರಪ್ಪರನ್ನು ಅಣಕಿಸುವ ರೂಪದಲ್ಲಿ ನಟ ಶಿವರಾಜ್‌ ಕುಮಾರ್‌ ವಿರುದ್ಧ ವ್ಯಂಗ್ಯವಾಡಿದ್ದರು. “ಶಿವರಾಜ್‌ ಕುಮಾರ್‌ ನಿರುದ್ಯೋಗಿ ಆಗಬೇಕಾಗಿಲ್ಲ. ನಮ್ಮೂರ ಜಾತ್ರೆಯಲ್ಲಿ ಕುಣಿಯುವ ಕೆಲಸಕ್ಕೆ ಅರ್ಜಿ ಹಾಕಬಹುದು. ನನ್ನ ತಂಗಿ ಸಿನಿಮಾ ಡಾನ್‌ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗುವುದಿಲ್ಲ.

ಹೆದರಿಸುವ ಬೆದರಿಸುವ, ಹುಷಾರ್‌ ಎನ್ನುವ ಮಾತುಗಳೇನಿದ್ದರೂ ಗಂಟಲೊಳಗೇ, ನಾಲ್ಕು ಗೋಡೆಗಳ ಮಧ್ಯೆಯೇ, ತಮ್ಮ ಪಟಾಲಂ ಮುಂದೆ ಮಾತ್ರವೇ ಸೀಮಿತವಾಗಿರಬೇಕು. ದಿಕ್ಕು ಕೆಟ್ಟು ದಿಕ್ಕಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು” ಎಂದು ಬರೆದುಕೊಂಡಿದ್ದರು. ಇದು ಶಿವಣ್ಣ ಹಾಗೂ ದೊಡ್ಮನೆ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.