Mysore
25
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಸಿನಿಮಾಗೆ ಬಜೆಟ್ ಮುಖ್ಯ ಅಲ್ಲ ಕಥೆ ಮುಖ್ಯ: ಶಿವಣ್ಣ

‘ಒಂದು ಚಿತ್ರಕ್ಕೆ ಕಥೆ ಮುಖ್ಯವೇ ಹೊರತು ಬಜೆಟ್‍ ಅಲ್ಲ. ಕಥೆಯಲ್ಲಿ ಏನು ಹೇಳೋಕೆ ಹೊರಟಿದ್ದೀವಿ ಅನ್ನೋದು ಮುಖ‍್ಯವೇ ಹೊರತು ಖರ್ಚು ಮಾಡೋದು ಮುಖ್ಯ ಅಲ್ಲ’ ಎಂದು ಶಿವರಾಜಕುಮಾರ್‍ ಹೇಳಿದ್ದಾರೆ.

‘ಕೆಂಡಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗಿಯೂ ನಟಿಸಿರುವ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್, ಇತ್ತೀಚೆಗೆ ಲುಲು ಮಾಲ್‍ನಲ್ಲಿ ಬಿಡುಗಡೆಯಾಗಿದೆ. ಶಿವರಾಜಕುಮಾರ್ ‍ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿನಯ್‍ ರಾಜಕುಮಾರ್‍, ಟಿ.ಎಸ್. ನಾಗಾಭರಣ, ಪೂರ್ಣಿಮಾ ರಾಮ್‍ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡದವರು ಶಿವರಾಜಕುಮಾರ್‍ ಅವರಿಗೆ ಬೆಳ್ಳಿ ಗದೆಯನ್ನು ಉಡುಗೊರೆಯನ್ನಾಗಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್‍, ‘ಟ್ರೇಲರ್‍ ಬಹಳ ಚೆನ್ನಾಗಿದೆ. ನಿರೀಕ್ಷೆಗೂ ಮೀರಿ ಬೇರೆ ಲೆವೆಲ್‍ನಲ್ಲಿದೆ. ವಿಕ್ಕಿ, ’ಕಡ್ಡಿಪುಡಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಚಿಕ್ಕ ಪಾತ್ರವನ್ನೂ ಮಾಡಿದ್ದರು. ನಂತರ ‘ಕೆಂಡಸಂಪಿಗೆ’ ಚಿತ್ರದಲ್ಲಿ ನಟಿಸಿದ್ದರು. ಆಮೇಲೆ ‘ಕಾಲೇಜ್‍ ಕುಮಾರ್’ ಚಿತ್ರದಲ್ಲಿ ನಟಿಸಿದ್ದರು. ಈಗ ‘ಕಾಲಾಪತ್ಥರ್’ ಮಾಡಿದ್ದಾರೆ. ಮೂರೂ ಚಿತ್ರದಲ್ಲಿ ‘ಕೆ’ ಎನ್ನುವ ಅಕ್ಷರವನ್ನು ಬಿಟ್ಟಿಲ್ಲ. ‘ಕಾಲಾ ಪತ್ಥರ್‍’ ನನ್ನ ಮೆಚ್ಚಿನ ಟೈಟಲ್‍. ನಾನು ಅಮಿತಾಬ್‍ ಬಚ್ಚನ್ ಅವರ ಅಭಿಮಾನಿ. ಇದೇ ಹೆಸರಿನ ಅವರ ಸಿನಿಮಾ ಬಂದಿತ್ತು. ಆ ಲೆವೆಲ್‍ಗೆ ಈ ಚಿತ್ರ ಗೆಲ್ಲಲಿ’ ಎಂದು ಹಾರೈಸಿದರು.

ಇನ್ನು, ದೊಡ್ಡ ಬಜೆಟ್, ಸಣ್ಣ ಬಜೆಟ್‍ ಎಂಬುದೆಲ್ಲಾ ಏನೂ ಇಲ್ಲ ಎಂದ ಶಿವರಾಜಕುಮಾರ್, ‘ಈ ಜಗತ್ತಿನಲ್ಲಿ ಚಿಕ್ಕ ಸಿನಿಮಾ ಅಂತಿಲ್ಲ. ಸಣ್ಣ ಬಜೆಟ್‍ನ ಸಿನಿಮಾ ಸಹ ಸಿನಿಮಾನೇ. ನೂರಾರು ಕೋಟಿ ಹಾಕಿ ಮಾಡಿದರೆ ಮಾತ್ರ ಅದು ಸಿನಿಮಾನಾ? ಖಂಡಿತಾ ಸುಳ್ಳು. ನಾವು ‘ಜನುಮದ ಜೋಡಿ’ ಮಾಡುವಾಗ 60 ಲಕ್ಷದಲ್ಲಿ ಮಾಡಿದ್ದೆವು. ಅದು ಅಷ್ಟರ ಮಟ್ಟಿಗೆ ಹಿಟ್‍ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಏನು ಹೇಳೋಕೆ ಹೊರಟಿದ್ದೀವಿ ಅನ್ನೋದು ಮುಖ‍್ಯವೇ ಹೊರತು, ಖರ್ಚು ಮಾಡೋದು ಮುಖ್ಯ ಅಲ್ಲ’ ಎಂದು ಹೇಳಿದರು.

‘ಕಾಲಾಪತ್ಥರ್’ ಚಿತ್ರವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಕ್ಕಿ ಮತ್ತು ಧನ್ಯಾ ರಾಮ್‍ಕುಮಾರ್‍ ಜೊತೆಗೆ ಟಿ.ಎಸ್. ನಾಗಾಭರಣ, ಅಚ್ಯುತ್‍ ಕುಮಾರ್‍, ರಾಜೇಶ್‍ ನಟರಂಗ ಮುಂತಾದವರು ನಟಿಸಿದ್ದು, ಸಂದೀಪ್‍ ಕುಮಾರ್‍ ಅವರ ಛಾಯಾಗ್ರಹಣವಿದೆ. ಅನೂಪ್‍ ಸೀಳಿನ್‍ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!