Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಇನ್ನು ಮುಂದೆ ಯಾರಿಗೂ ಕಾಯಲ್ಲ: ಧ್ರುವ ಸರ್ಜಾ ನಿರ್ಧಾರ

ಧ್ರುವ ಸರ್ಜಾ ಅಭಿನಯದ ‘ಕ್ರಿಮಿನಲ್‍’ ಚಿತ್ರದ ಮುಹೂರ್ತ ಕಳೆದ ವಾರ ನಡೆದಿದೆ. ಸದ್ಯದಲ್ಲೇ ಚಿತ್ರೀಕರಣ ಸಹ ಶುರುವಾಗಲಿದೆ. ಧ್ರುವ ಸರ್ಜಾ ಚಿತ್ರ ಪ್ರಾರಂಭವಾಗುವುದು ಗೊತ್ತು. ಆದರೆ, ಯಾವಾಗ ಮುಕ್ತಾಯ ಹೇಳುವುದು ಕಷ್ಟ. ಏಕೆಂದರೆ, ಧ್ರುವ ಸರ್ಜಾ ಚಿತ್ರಗಳ ವಿಷಯದಲ್ಲಿ ಯಾವುದೂ ಹೇಳುವುದು ಕಷ್ಟ. ಉದಾಹರಣೆ, ‘ಕೆಡಿ – ದಿ ಡೆವಿಲ್‍’. ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ ಬಿಡುಗಡೆ ಯಾವಾಗ ಎಂದು ಇನ್ನೂ ಗೊತ್ತಿಲ್ಲ. ‘ಮಾರ್ಟಿನ್‍’ ಚಿತ್ರ ಸಹ ಸಾಕಷ್ಟು ಬದಲಾಗಿ, ತಡವಾಗಿ ಕೊನೆಗೆ ಬಿಡುಗಡೆಯಾಗಿ ಮರೆಯಾಯಿತು.

ಆದರೆ, ‘ಕ್ರಿಮಿನಲ್‍’ ಚಿತ್ರ ಹಾಗಾಗುವುದಿಲ್ಲ, ಮಾರ್ಚ್‍ ತಿಂಗಳಲ್ಲಿ ಚಿತ್ರೀಕರಣ ಮುಗಿಯುತ್ತದೆ ಎಂದು ಧ್ರುವ ಹೇಳುತ್ತಾರೆ. ಈ ಕುರಿತು ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಮುಂದಿನ ತಿಂಗಳಿನಿಂದ ಚಿತ್ರೀಕರಣ ಶುರುವಾಗುತ್ತದೆ. ಇನ್ನು ಮುಂದೆ ಹಾಗೆ. ಒಂದು ಚಿತ್ರ ಬಿಡುಗಡೆ ಆಗುವುದಕ್ಕೆ ಮೊದಲು, ಇನ್ನೊಂದು ಚಿತ್ರ ಪ್ರಾರಂಭವಾಗುತ್ತದೆ. ಜೀವನ ದೊಡ್ಡದೊಡ್ಡ ಪಾಠಗಳನ್ನು ಕಲಿಸಿದೆ. ಇನ್ನು, ನಾನು ಯಾರಿಗೂ ಕಾಯುವುದಕ್ಕೆ ಹೋಗುವುದಿಲ್ಲ. ಕಥೆ ಆಯ್ತು, ಸಿನಿಮಾ ಆಯ್ತು, ಕೆಲಸ ಆಯ್ತು ಅಂತ ಇರುತ್ತೇನೆ’ ಎನ್ನುತ್ತಾರೆ ಧ್ರುವ.

ಇದನ್ನು ಓದಿ: ನಟ ಧ್ರುವಸರ್ಜಾಗೆ ಬಿಗ್‌ ರಿಲೀಫ್‌ ಕೊಟ್ಟ ಬಾಂಬೆ ಹೈಕೋರ್ಟ್‌

‘ಕ್ರಿಮಿನಲ್‍’ ಚಿತ್ರದ ಚಿತ್ರೀಕರಣ ಸತತವಾಗಿ ನಡೆಯಲಿದೆ ಎನ್ನುವ ಅವರು, ‘ಚಿತ್ರ ಬೇಗ ಚಿತ್ರೀಕರಣ ಮಾಡಬೇಕು. ಮಾರ್ಚ್‍ ಒಳಗೆ ಚಿತ್ರೀಕರಣ ಮುಗಿಸಬೇಕು ಎಂಬ ಯೋಚನೆ ಇದೆ. ‘ಕೆಡಿ – ದಿ ಡೆವಿಲ್‍’ ಚಿತ್ರದ ಪ್ರಚಾರಕ್ಕೆ ಸ್ವಲ್ಪ ಸಮಯ ಬೇಕು. ಅದು ಬಿಟ್ಟರೆ ಸತತವಾಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ’ ಎನ್ನುತ್ತಾರೆ.

ನಿರ್ದೇಶಕರು ಹೊಸಬರೋ, ಹಳಬರೋ ಎಂದು ನೋಡುವುದಿಲ್ಲ, ತಮಗೆ ಕಥೆ ಮುಖ್ಯ ಎನ್ನುವ ಧ್ರುವ ಸರ್ಜಾ, ‘’ಬಹದ್ದೂರ್‍’ ಕಥೆ ಕೇಳಿದಾಗಲೂ ಚೇತನ್ ಹೊಸಬರಾಗಿದ್ದರು. ಕಥೆ ಕೇಳಿದಾಗ ಇಷ್ಟವಾಯ್ತು. ಹೊಸಬರಾಗಿರಲಿ, ಹಳಬರಾಗಿರಲೀ, ಇಷ್ಟವಾದರೆ ಖಂಡಿತಾ ಒಪ್ಪುತ್ತೇನೆ. ಈ ಚಿತ್ರದ ಕೇಳಿದಾಗ ಬಹಳ ಇಷ್ಟವಾಯ್ತು. ಏಕೆಂದರೆ, ಇದೊಂದು ನೈಜ ಘಟನೆ ಆಧರಿಸಿದ ಚಿತ್ರ. ಈ ತರಹದ ಪಾತ್ರ ಮಾಡುವುದಕ್ಕೆ ನನಗೂ ಆಸೆ ಇತ್ತು. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ ಈ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ.

ಇದುವರೆಗಿನ ಧ್ರುವ ಅಭಿನಯದ ಚಿತ್ರಗಳಿಗೆ ಹೋಲಿಸಿದರೆ, ‘ಕ್ರಿಮಿನಲ್‍’ ಚಿತ್ರದಲ್ಲಿ ಬೇರೆ ಏನಾದರೂ ವಿಶೇಷತೆ ನಿರೀಕ್ಷಿಸಬಹುದಾ? ಎಂಬ ಪ್ರಶ್ನೆಗೆ, ‘ನನ್ನ ಹಿಂದಿನ ಚಿತ್ರಗಳು ಮಾಡುವಾಗ ಟ್ರೆಂಡ್‍ ಬೇರೆ ತರಹ ಇತ್ತು. ಈಗ ಟ್ರೆಂಡ್‍ ಬೇರೆ ತರಹ ಇದೆ. ಈಗ ರಿಯಲಾಸ್ಟಿಕ್‍ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರಗಳನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಪಾತ್ರಕ್ಕೆ ಎಷ್ಟು ಅಭಿನಯಿಸಬೇಕೋ ಅಷ್ಟು ಸಾಕು. ಕಥೆಗೆ ಎಷ್ಟು ಬೇಕೋ ಅಷ್ಟು ನಟಿಸಿದರೆ ಜನರಿಗೆ ಇಷ್ಟವಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ಬೇರೆ ಪ್ರಯತ್ನವಾಗಲಿದೆ’ ಎನ್ನುತ್ತಾರೆ.

ಈ ಹಿಂದೆ ‘ಕೆರೆಬೇಟೆ’ ಚಿತ್ರ ನಿರ್ದೇಶಿಸಿದ್ದ ರಾಜ್‍ಗುರು ಈಗ ‘ಕ್ರಿಮಿನಲ್’ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದ್ದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು, ಚಂದನ್ ಶೆಟ್ಟಿ ಸಂಗೀತ, ವೈದಿ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

Tags:
error: Content is protected !!