Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಅಪ್ಪನ ಆಸೆ ಈಡೇರಿಸಲು 101 ಜನರಿಗೆ ಕಾಶಿ ಯಾತ್ರೆ ಮಾಡುತ್ತಿರುವ ಜಿಮ್ ರವಿ

Jim Ravi is making a Kashi Yatra for 101 people to fulfill his father's wish

ಕನ್ನಡದ ಹಲವು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ‘ಪುರುಷೋತ್ತಮ’ ಚಿತ್ರದ ಹೀರೋ ಮತ್ತು ನಿರ್ಮಾಪಕರಾದ ಕೋಲಾರ ಮೂಲದ ಎ.ಕೆ‌.ರವಿ ಅಲಿಯಾಸ್‍ ಜಿಮ್ ರವಿ ಈಗ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿಯಾಗಿರುವ ರವಿ, ಒಂದು ಮಾದರಿಯ ಕೆಲಸವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ.

ಇಂದು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ಅವರು ಕಾಶಿಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸುಮಾರು 101 ಜನರ ತಂಡ ಇಂದು ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಪಯಣ ಮಾಡಲಿದ್ದು, ಅಲ್ಲಿಂದ ಪ್ರಯಾಗರಾಜ್, ಕಾಶಿಗೆ ಹೋಗಲಿದ್ದಾರೆ. ಒಟ್ಟು ಮೂರು ದಿನಗಳ ಯಾತ್ರೆ ಇದು. ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ‌. ಇಡೀ ತಂಡದ ಸಂಪೂರ್ಣ ವೆಚ್ಚವನ್ನು ಜಿಮ್‍ ರವಿ ಭರಿಸಲಿದ್ದಾರೆ.

ಈ ಕುರಿತು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ನನ್ನ ತಾಯಿ ನನಗೆ ತುಂಬಾ ಆದರ್ಶ. ಜೀವನದ ಪಾಠ ಕಲಿಸಿದ ಮಹಾತಾಯಿ‌ ಅವರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ‌ಪರವಾಗಿಲ್ಲ, ಕಷ್ಟದಲ್ಲಿ ಅವರ ಜೊತೆಗಿರು, ಹಿರಿಯರ ಮುಂದೆ ಕೈ ಕಟ್ಟಿ ನಿಲ್ಲು‌ ಅಂತ‌ ಅಮ್ಮ ಹೇಳಿಕೊಟ್ಟಿದ್ದರು. ಅಮ್ಮನ ನಿಧನದ ಕೆಲವು ತಿಂಗಳ ನಂತರ ಅಪ್ಪ, ನನ್ನ ಹತ್ತಿರ ಬಂದು, ಕಾಶಿ‌ಯಾತ್ರೆಗೆ ಕರೆದುಕೊಂಡು ಹೋಗು ಎಂದರು.

ನನ್ನ ಹತ್ತಿರ ಆಗ ಅಷ್ಟು ದುಡ್ಡು ಇರಲಿಲ್ಲ. ಅಪ್ಪನಿಗೆ ಏರು ದ್ವನಿಯಲ್ಲಿ ಈಗ ಅದೆಲಾ ಆಗಲ್ಲ ಅಂದು ಬಿಟ್ಟಿದ್ದೆ. ಅದಾದ ಕೆಲವು ತಿಂಗಳ ನಂತರ ಮತ್ತೆ ಕೇಳಿದರು. ನಾನು ಅವರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಸಮಾಧಾನ ಮಾಡಿದೆ.‌ ಕೆಲವು ದಿನಗಳ ನಂತರ ಗೆಳೆಯರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೇಟ್ ಬುಕ್ ಮಾಡಿದೆ.‌ ಆ ವಿಷಯ ಅಪ್ಪನಿಗೆ ಫೋನ್ ಮಾಡು ಹೇಳಿ, ಅವರು ಖುಷಿಯಾದರು.

ಆದರೆ, ವಿಧಿ ಆಟ ಬೇರೆ ಇತ್ತು. ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪನ್ನು ನಮ್ಮನ್ನು ಬಿಟ್ಟು ಹೋಗಿಬಿಟ್ಟರು. ಅವರ ಕಾಶಿಯಾತ್ರೆಯ ಆಸೆ ಅವರ ಜೊತೆಗೆ ಹೋಯಿತು. ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ ಕೆಲವು ಅಶಕ್ತರಿಗೆ ನಮ್ಮ ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು ಎಂದು ಅಂದೇ ತೀರ್ಮಾನ ಮಾಡಿದೆ’ ಎಂದರು.

ಅದಕ್ಕಾಗಿ 14 ವರ್ಷಗಳ ಕಾಲ ಹಣ ಕೂಡಿಟ್ಟಿರುವುದಾಗಿ ಹೇಳಿದ ಅವರು, ‘ನಮ್ಮ ಅಪ್ಪ ನಿಧನರಾಗಿ 14 ವರ್ಷಗಳಾಯಿತು. ಅಂದಿನಿಂದ ಇಂದಿನವರೆಗೂ ಅದಕೋಸ್ಕರ ಹುಂಡಿ ಇಟ್ಟು ದುಡ್ಡು ಕೂಡಿ ಹಾಕುತ್ತಿದ್ದೆ. ಯಾವುದೇ ದುಂದು ವೆಚ್ವ‌‌ ಮಾಡದೇ 10, 20 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳವರೆಗೂ ಹುಂಡಿಯಲ್ಲಿ ಹಾಕುತ್ತಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ಈಗ ಅಶಕ್ತರನ್ನು ಕರೆದುಕೊಂಡು ಹೊರಟಿದ್ದೇನೆ’ ಎಂದರು.

Tags:
error: Content is protected !!