Mysore
28
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ನಟನೆ, ಬರವಣಿಗೆ ಆಯ್ತು; ಈಗ ನಿರ್ದೇಶದತ್ತ ರಂಜನಿ ರಾಘವನ್‍

ಕಳೆದ ವರ್ಷದ ಆರಂಭದಲ್ಲೇ, ತಮ್ಮ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರು ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್‍. ಆದರೆ, ಆ ಕನಸೇನು ಎಂಬುದನ್ನು ಅವರು ಹೇಳಿರಲಿಲ್ಲ. ಅದರ ಕುರಿತು ಮಾತನಾಡುವುದಕ್ಕೆ ಕೊನೆಗೂ ಸಮಯ ಬಂದಿದೆ. ವಿಷಯವೇನೆಂದರೆ, ರಂಜನಿ ಇದೀಗ ನಿರ್ದೇಶಕಿಯಾಗುತ್ತಿದ್ದಾರೆ. ಅವರ ನಿರ್ದೇಶನದ ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಕುರಿತು ಮಾತನಾಡಿರುವ ರಂಜನಿ, ‘ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಕಳೆದಿವೆ. ಈ ಕಥೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕಥೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಮತ್ತು ಪ್ರೋತ್ಸಾಹದಿಂದ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ’ ಎಂದು ಹೇಳಿಕೊಂಡಿದ್ದಾರೆ.

‘ಸಂಗೀತ ಜ್ಞಾನಿ’ ಇಳಯರಾಜ ಈ ಚಿತ್ರದ ಭಾಗವಾಗಿರುವುದರ ಕುರಿತು ಮಾತನಾಡುವ ಅವರು, ‘2023ರ ಸೆಪ್ಟೆಂಬರ್‍ 13ರಂದು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದರೆ ಅದೇ ದೊಡ್ಡದು ಅಂತ ಅಂದುಕೊಂಡಿದ್ದೆ. ಈ ಚಿತ್ರದ ಕುರಿತು ಅವರನ್ನು ಮಾತನಾಡಿಸಿದಾಗ, ಅವರು ‘ಕನ್ನಡದಲ್ಲೇ ಕಥೆ ಹೇಳಮ್ಮ, ನನಗೆ ಕನ್ನಡ ಚೆನ್ನಾಗಿ ಬರುತ್ತೆ. ಕೊಲ್ಲೂರು ಮೂಕಾಂಬಿಕೆ ನನ್ನವ್ವ …’ ಎಂದು ಮಾತು ಶುರು ಮಾಡಿದರು. ಮೂರೇ ದಿನಗಳಲ್ಲಿ ಕಥೆ ಇಷ್ಟವಾಗಿದೆ ಎಂದು ನಮ್ಮ ಸಿನಿಮಾದ ಭಾಗವಾದರು’ ಎನ್ನುತ್ತಾರೆ ರಂಜನಿ.

ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಎಂದು ಅರ್ಥ ಮಾಡಿಕೊಂಡಿರುವ ರಂಜನಿ, ‘ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಶುರುವಾಗಿದೆ.

ಕಳೆದ ವರ್ಷ ‘ನೈಟ್‍ ಕರ್ಫ್ಯೂ’ ಮತ್ತು ‘ಕಾಂಗರೂ’ ಚಿತ್ರಗಳಲ್ಲಿ ನಟಿಸಿದ್ದ ರಂಜನಿ ಅಭಿನಯದ ಯಾವೊಂದು ಚಿತ್ರ ಸಹ ಆ ನಂತರ ಬಿಡುಗಡೆ ಆಗಲಿಲ್ಲ. ‘ಸತ್ಯಂ’ ಮತ್ತು ‘ಸ್ವಪ್ನ ಮಂಟಪ’ ಎಂಬ ಎರಡು ಚಿತ್ರಗಳಲ್ಲಿ ಅವರು ನಟಿಸಿದ್ದಾರಾದರೂ, ಆ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ.

Tags:
error: Content is protected !!