ಮೈಸೂರು ಮೂಲದ ಜಯಪ್ರಕಾಶ್ ಅಲಿಯಾಸ್ ಜೆಪಿ ಅಭಿನಯದ ‘ಭಗೀರಥ’ ಚಿತ್ರವು ಫೆಬ್ರವರಿ 07ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರವು ಇದೀಗ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರವು ಬೆಂಗಳೂರಿನ ಸಪ್ನ ಮುಂತಾದ ಕಡೆ 100 ದಿನ ಪ್ರದರ್ಶನವಾಗಿದೆ ಎಂಬ ಪೋಸ್ಟರ್ಗಳು ಕೆಲವು ಕಡೆ ರಾರಾಜಿಸುತ್ತಿವೆ.
ಕನ್ನಡದಲ್ಲಿ ಒಂದು ಚಿತ್ರ 100 ದಿನ ಪ್ರದರ್ಶನ ಕಂಡು ಎಷ್ಟು ಕಾಲವಾಯಿತೋ ಗೊತ್ತಿಲ್ಲ. ಕೆಲವು ಚಿತ್ರಗಳು ಒಂದು ವಾರ ಪೂರೈಸುವುದೇ ಕಷ್ಟವಾಗಿರುವಾಗ, ‘ಭಗೀರಥ’ ಚಿತ್ರವು 100 ದಿನ ಪ್ರದರ್ಶನ ಕಂಡಿದ್ದು ವಿಶೇಷ. ಅದರ ಜೊತೆಗೆ ಚಿತ್ರವು ಎಷ್ಟು ಗಳಿಕೆ ಮಾಡಿದೆ, ಎಲ್ಲೆಲ್ಲಿ ಎಷ್ಟು ಪ್ರದರ್ಶನ ಕಂಡಿದೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
‘ಭಗೀರಥ’ ಚಿತ್ರವನ್ನು ನಿರ್ದೇಶಿಸಿರುವವರು ರಾಮ್ ಜನಾರ್ಧನ್. ‘ಬಾಯ್ಫ್ರೆಂಡ್’ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ಅವರು, ಆ ನಂತರ ‘ಅಂಜದಿರು’ ಮತ್ತು ‘ಸ್ವಯಂಕೃಷಿ’ ಎಂಬ ಇನ್ನೆರಡು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಇದೀಗ ‘ಭಗೀರತ’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಯಾವುದಕ್ಕೂ ಹೆದರದ ಮತ್ತು ಅಪಾರ ಇಚ್ಛಾಶಕ್ತಿ ಇರುವ ಮನುಷ್ಯನ ಪಾತ್ರದಲ್ಲಿ ಜೆಪಿ ನಟಿಸಿದ್ದಾರೆ. ನಾಯಕಿಯನ್ನು ಉಳಿಸಲು ನಾಯಕನ ‘ಭಗೀರಥ’ ಪ್ರಯತ್ನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ. ಭೈರಪ್ಪ ಹಾಗೂ ಕೆ. ರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
‘ಭಗೀರಥ’ ಚಿತ್ರದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿದೆ.





