ಬರುವ ಮಾರ್ಚ್ 3ರ ಶುಕ್ರವಾರ, ಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಕಾಲಿಡಲಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದತ್ತ ಎಲ್ಲರೂ ಹೊರಳಿ ನೋಡುವಂತೆ ಮಾಡುವ ಚಿತ್ರಗಳು ತಯಾರಾದವು ಎನ್ನುವ ಹೆಗ್ಗಳಿಕೆಯೊಂದಿಗೆ 90ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡ ಚಿತ್ರರಂಗ, ಉಳಿದ ಭಾರತೀಯ ಭಾಷಾ ಚಿತ್ರರಂಗಗಳಂತೆ ಇದೆಯೇ ಎನ್ನುವ ಪ್ರಶ್ನೆ ಕೆಲವರಿಗಾದರೂ ಕಾಡತೊಡಗಿದೆ. ಅದು ಉದ್ಯಮದ ದೃಷ್ಟಿಯಿಂದಾಗಬಹುದು, ಸದಭಿರುಚಿಯ ಚಿತ್ರಗಳ ದೃಷ್ಟಿಯಿಂದಾಗಬಹುದು, ಪರಸ್ಪರ ವೈಯಕ್ತಿಕ ಸಂಬಂಧಗಳದ್ದಾಗಬಹುದು.
ಮೊನ್ನೆ ಹಿರಿಯ ನಿರ್ದೇಶಕರಾದ ದೊರೆ–ಭಗವಾನ್ ಜೋಡಿಯ ಭಗವಾನ್ ಬೆಂಗಳೂರಿನಲ್ಲಿ ನಿಧನರಾದರು. ಅಂತಿಮ ದರ್ಶನಕ್ಕೆ ಅವರ ಮನೆಯಲ್ಲಿ ಮಾತ್ರವಲ್ಲದೆ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿಯೂ ವಾಣಿಜ್ಯ ಮಂಡಳಿ ವ್ಯವಸ್ಥೆ ಮಾಡಿತ್ತು. ರಾಜಕುಮಾರ್ ಕುಟುಂಬದ ಸದಸ್ಯರು ಮತ್ತಿತರ ಕೆಲವರು ಅವರ ಮನೆಯಲ್ಲಿ ಅಂತಿಮ ದರ್ಶನ ಪಡೆದರು. ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ನಟರಲ್ಲಿ ಅವರ ‘ಬಯಲುದಾರಿ’ ಮೊದಲ್ಗೊಂಡು ಹಲವು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟ ಅನಂತನಾಗ್, ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಅವರು ಪ್ರಾಂಶುಪಾಲರಾಗಿದ್ದ ವೇಳೆ ವಿದ್ಯಾರ್ಥಿಯಾಗಿ, ಈಗ ದೊಡ್ಡ ಹೆಸರಾಗಿರುವ ನಟ ಗಣೇಶ್ ಪ್ರಮುಖರು. ನಿರ್ದೇಶಕರಲ್ಲಿ ನಾಗಾಭರಣ, ಟಿ.ಎನ್.ಸೀತಾರಾಮ್, ನಂಜುಂ ಡೇಗೌಡ, ಕೋಡ್ಲು ರಾಮಕೃಷ್ಣ ಮತ್ತಿತರರಿದ್ದರು. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಿದ್ದರು. ಉಳಿದವರು ತಮ್ಮ ಸಾಮಾಜಿಕ ಜಾಲತಾಣಗಳಿಂದ ಶ್ರದ್ಧಾಂಜಲಿ ಅರ್ಪಿಸಿದ್ದರು.
ಭಗವಾನ್ ಅವರ ಜನ್ಮದಿನ ಮತ್ತು ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆಯ ಕುರಿತಂತೆ ಅಲ್ಲಿ ಗೊಂದಲ ಇತ್ತು. ಅವರು ಹುಟ್ಟಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಎಂದು ಅವರ ಮಗ ಅಲ್ಲಿ ಹೇಳಿದರೆ, ಜುಲೈ 5ರಂದು ಅವರ ಜನ್ಮದಿನ ಎಂದು ಮತ್ತೊಂದು ದಾಖಲೆ. ಇನ್ನು ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು ಎಂದು ಅವರೇ ಹೇಳಿಕೊಂಡಿದ್ದರು! ಅದು ಅವರು ಪಾಲ್ಗೊಂಡ ಚಿತ್ರಗಳ ಸಂಖ್ಯೆ. ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ, ನಂತರ ನಿರ್ದೇಶಕರಾಗಿ ಅವರು ತೊಡಗಿಸಿಕೊಂಡ ಚಿತ್ರಗಳವು. ಅದೇಕೋ ಏನೋ ಅವರ ಕೊನೆಯ ದಿನಗಳಲ್ಲಿ ತಮ್ಮ ನಿರ್ದೇಶನದ ಚಿತ್ರಗಳ ಮೈಲಿಗಲ್ಲು ಎಂದು ಅಷ್ಟೂ ಚಿತ್ರಗಳ ಹೆಸರನ್ನು ಸೇರಿಸಿಬಿಟ್ಟಿದ್ದರು. ಅವರು ಎ.ಸಿ.ನರಸಿಂಹ ಮೂರ್ತಿಯವರ ಜೊತೆ ಸೇರಿ ನಿರ್ದೇಶಿಸಿದ ‘ಸಂಧ್ಯಾರಾಗ’ ಚಿತ್ರ ಮೊದಲ್ಗೊಂಡು, ತಮ್ಮ 87ನೇ ವಯಸ್ಸಿನಲ್ಲಿ ನಿರ್ದೇಶಿಸಿದ ‘ಆಡುವ ಬೊಂಬೆ’ ಚಿತ್ರದವರೆಗೆ 33 ಚಿತ್ರಗಳಿವೆ. ಎರಡು ಚಿತ್ರಗಳು ಎ.ಸಿ.ನರಸಿಂಹಮೂರ್ತಿ ಅವರ ಜೊತೆಗೆ, 27 ಚಿತ್ರಗಳು ದೊರೆ ಅವರ ಜೊತೆ, ಎರಡು ಚಿತ್ರಗಳನ್ನು ಒಂಟಿಯಾಗಿ, ಎರಡು ಪರಭಾಷೆಯ ಚಿತ್ರಗಳು ಸೇರಿ ಒಟ್ಟು 33 ಚಿತ್ರಗಳಿವೆ. ಸದಭಿರುಚಿಯ ಚಿತ್ರಗಳನ್ನು ನೀಡಿರುವ ನಿರ್ಮಾಪಕ/ನಿರ್ದೇಶಕರ ಮುಂದಿನ ಸಾಲಿನಲ್ಲಿ ಅವರೂ ಸೇರುತ್ತಾರೆ.
ಹ್ಞಾಂ, ಕಳೆದ ವರ್ಷ ತಯಾರಾದ ಚಿತ್ರಗಳಲ್ಲಿ ‘ಕಾಂತಾರ’, ‘ಕೆಜಿಎಫ್ ಚಾಪ್ಟರ್ 2’, ʼ777 ಚಾರ್ಲಿ’, ‘ಗಂಧದ ಗುಡಿ’ ಮುಂತಾದ ಚಿತ್ರಗಳು ಅವುಗಳದೇ ದಾಖಲೆಯ ಕಾರಣದಿಂದ ಕನ್ನಡ ಚಿತ್ರರಂಗದತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದವು. ಸುಮಾರು ನಾನೂರರವರೆಗೆ ಚಿತ್ರಗಳು ಕಳೆದ ವರ್ಷ ಪ್ರಮಾಣಪತ್ರ ಪಡೆದಿವೆ. ಇವುಗಳಲ್ಲಿ ಡಬ್ ಆದವೂ ಸೇರಿವೆ ಎನ್ನಿ. ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ 231. ಆರು ತುಳು ಚಿತ್ರಗಳೂ ತೆರೆಕಂಡಿವೆ. ಇವುಗಳಲ್ಲಿ ಸೋತ ಚಿತ್ರಗಳದೇ ಕಾರುಬಾರು.
2023ರಲ್ಲಿ ಚಿತ್ರಗಳ ಬಿಡುಗಡೆಯ ಭರಾಟೆ. ಇಂದು ಬಿಡುಗಡೆ ಆಗುವ ಹನ್ನೊಂದು ಚಿತ್ರಗಳೂ ಸೇರಿದಂತೆ, ಎರಡು ತಿಂಗಳಲ್ಲಿ 48 ಚಿತ್ರಗಳು ತೆರೆಗೆ ಬಂದಂತಾಯಿತು. ಇವುಗಳಲ್ಲಿ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ, ಉಳಿದವುಗಳಲ್ಲಿ ಹೆಚ್ಚಿನವು ಒಂದೆರಡು ಪ್ರದರ್ಶನಗಳೂ ಆಗಿಲ್ಲ. ಕೆಲವು ಚಿತ್ರಗಳ ಪ್ರಚಾರ ಮತ್ತು ಜಾಹೀರಾತುಗಳ ದುಡ್ಡೂ ಗಳಿಕೆಯಾಗಿಲ್ಲ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲ ಕಡೆ ಕನ್ನಡ ಚಿತ್ರಗಳಿಗೆ ಅವಕಾಶ ಸಿಗುತ್ತಿಲ್ಲ. ಸಿಗುವ ಪರದೆಗಳಲ್ಲಿನ ಪ್ರದರ್ಶನ ವೇಳೆ ಕನ್ನಡ ಪ್ರೇಕ್ಷಕರಿಗೆ ಅನುಕೂಲಕರವಾಗಿರುವುದಿಲ್ಲ ಎನ್ನುವ ದೂರೂ ಇದೆ. ಇಂತಹ ವಿಷಯಗಳತ್ತ ಗಮನ ಕೊಡುವವರು ಯಾರು? ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಸೆಲ್ಯುಲಾಯಿಡ್ ದಿನಗಳಲ್ಲಿ ಯಾವುದೇ ಚಿತ್ರದ ಬಿಡುಗಡೆಗೆ ಮಿತಿ ಇರುತ್ತಿತ್ತು. ಎಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕೋ ಅಷ್ಟು ಪ್ರಿಂಟ್ಗಳು ಬೇಕಾಗಿದ್ದವು. ಈಗ ಒಂದೆಡೆಯಿಂದ ಎಲ್ಲ ಚಿತ್ರಮಂದಿರಗಳಿಗೂ ಸಂಪರ್ಕಿಸಿ ಒದಗಿಸುವ ವ್ಯವಸ್ಥೆ ಇದೆ.
ತಾರಾ ವರ್ಚಸ್ಸಿನ ನಟರ ಚಿತ್ರಗಳಿಗೆ, ಇಲ್ಲವೇ ಹೆಸರಾಂತ ನಿರ್ಮಾಣ ಸಂಸ್ಥೆ, ನಿರ್ಮಾಪಕರ ಚಿತ್ರಗಳಿಗೆ ಚಿತ್ರಮಂದಿರಗಳ ಲಭ್ಯತೆ ಕಷ್ಟಸಾಧ್ಯವೇನೂ ಅಲ್ಲ. ಆದರೆ ಸಣ್ಣಪುಟ್ಟ ಚಿತ್ರಗಳ ಮಂದಿಗೆ ಚಿತ್ರಮಂದಿರಗಳನ್ನು ಹೊಂದಿಸುವುದು ಕಷ್ಟಸಾಧ್ಯ. ಚಿತ್ರನಿರ್ಮಾಣವೇನೋ ಸುಲಭ, ಆದರೆ ಬಿಡುಗಡೆ ಕಷ್ಟ; ನಿರ್ಮಾಣಕ್ಕೆ ಹಾಕಿದ ಬಂಡವಾಳಕ್ಕಿಂತ ಹೆಚ್ಚು ಪ್ರಚಾರಕ್ಕೆ ಹೂಡಬೇಕಾದ ಪರಿಸ್ಥಿತಿ ಇದೆ. ಈ ಡಿಜಿಟಲ್ ದಿನಗಳಲ್ಲಿ ಪ್ರಚಾರದ ಮೂಲಕವೇ, ತಮ್ಮ ಚಿತ್ರಗಳಿಗೆ ಪ್ರೇಕ್ಷಕರನ್ನು ಸೆಳೆಯಬೇಕಾದ ಅನಿವಾರ್ಯತೆ ಇದೆ. ಕೇವಲ ಸಾಂಪ್ರದಾಯಿಕ ಪ್ರಚಾರ ಈಗ ಸಾಕಾಗುವುದಿಲ್ಲ.
ಹಿಂದಿನ ದಿನಗಳಂತೆ ಕೇವಲ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, ಒಟಿಟಿ ತಾಣಗಳಲ್ಲಿ, ಉಪಗ್ರಹ ವಾಹಿನಿಗಳ ಮೂಲಕ, ಜಾಲತಾಣಗಳಲ್ಲಿ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇದೆ. ಹಾಗಾಗಿ ಚಿತ್ರಮಂದಿರಗಳನ್ನು ಮಾತ್ರ ನೆಚ್ಚಿಕೊಂಡು ಪ್ರೇಕ್ಷಕರು ಇಲ್ಲ ಎನ್ನುವುದು ಕೂಡಾ ಹೌದು. ಚಿತ್ರಮಂದಿರಗಳ, ವಿಶೇಷವಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರವೇಶ ದರ ಪ್ರೇಕ್ಷಕರನ್ನು ಅಲ್ಲಿಂದ ದೂರ ಮಾಡತೊಡಗಿದೆ ಎನ್ನುವ ಆಕ್ಷೇಪದಲ್ಲಿ ಹುರುಳಿಲ್ಲದೆ ಇಲ್ಲ. ನಿರ್ಮಾಪಕರು/ ವಿತರಕರು ಮನಸೋ ಇಚ್ಛೆ ಪ್ರವೇಶ ದರ ನಿಗದಿಪಡಿಸುವುದರಿಂದ ಸಾಮಾನ್ಯ ಪ್ರೇಕ್ಷಕನಿಗೆ ವಾರಕ್ಕೆ ಒಂದು ಚಿತ್ರ ನೋಡುವುದೂ ಸಾಧ್ಯವಾಗದೆ ಹೋಗಬಹುದು.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಇರುವಂತೆ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರವೇಶ ಶುಲ್ಕಕ್ಕೆ ನಿಯಂತ್ರಣ ಹೇರಬೇಕು, ಮರಾಠಿ ಚಿತ್ರಗಳಿಗೆ ಮಹಾರಾಷ್ಟ್ರದಲ್ಲಿ ಇರುವಂತೆ ಪ್ರತಿದಿನ ಕಡ್ಡಾಯವಾಗಿ ಎರಡು ಕನ್ನಡ ಚಿತ್ರಗಳ ಪ್ರದರ್ಶನದ ಆದೇಶ ನೀಡಬೇಕು ಇವೇ ಮುಂತಾಗಿ ಸರ್ಕಾರದ ಮುಂದೆ ಬೇಡಿಕೆಯನ್ನು ಇಡಲಾಗಿದೆ. ಕಳೆದ ವಾರ ಮಂಡಿಸಲಾದ ೨೦೨೩–೨೪ರ ಮುಂಗಡ ಪತ್ರದಲ್ಲಿ ಚಿತ್ರರಂಗಕ್ಕೆ ಅಂತಹ ಕೊಡುಗೆ ಏನೂ ಇರಲಿಲ್ಲ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಮುಂದಿನ ತಿಂಗಳು 23ರಿಂದ 30ರವರೆಗೆ ಎಂದು ದಿನಾಂಕ ನಿಗದಿಪಡಿಸಲಾಗಿದೆ. ತೀರಾ ಕಡಿಮೆ ಅವಧಿಯಲ್ಲಿ ಇದರ ಸಿದ್ಧತೆ ಆಗಬೇಕಾಗಿದೆ. ಸ್ಪರ್ಧಾ ವಿಭಾಗದ ಚಿತ್ರಗಳ ಆಯ್ಕೆಯ ಹೊರತಾಗಿ, ಇತರ ವಿಭಾಗಗಳ ಚಿತ್ರಗಳ ಆಯ್ಕೆ ಅಷ್ಟೇನೂ ಕಷ್ಟಕರವಲ್ಲ ಎನ್ನಲಾಗಿದೆ.
ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರೋದ್ಯಮಕ್ಕೆ ರಾಜ್ಯ ಸರ್ಕಾರ ನೀಡುವುದಾಗಿ ಹೇಳಿರುವ ನೆರವು, ಸೌಲಭ್ಯ, ಉತ್ತೇಜನಗಳನ್ನು ನೀಡದೆ ವರ್ಷಗಳಾಗಿವೆ. 2018ರ ಪ್ರಶಸ್ತಿ ಪ್ರದಾನ, 2019, 2020ರ ಪ್ರಶಸ್ತಿ ಆಯ್ಕೆ ಆಗಬೇಕಾಗಿದೆ. 2021ರ ಸಾಲಿಗೆ ಪ್ರಶಸ್ತಿ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2019, 2020ರ ಸಾಲಿಗೆ ಸಹಾಯಧನಕ್ಕೆ ಚಿತ್ರಗಳ ಆಯ್ಕೆ ಆಗಬೇಕಾಗಿದೆ. 2022ರ ಸಾಲು ಮುಂದಿದೆ!
ಕನ್ನಡ ಚಿತ್ರರಂಗ 90ರ ವೇಳೆಗೆ, ಸರ್ಕಾರ ಇವೆಲ್ಲವನ್ನೂ ಗಮನಿಸಲು ಸಾಧ್ಯವಾಗುವ ಸ್ಥಿತಿಯಲ್ಲಿ ಇದ್ದಂತಿಲ್ಲ. ಅದರ ಗಮನವೆಲ್ಲ ಚುನಾವಣೆಯ ಕಡೆಗೆ. ಚಿತ್ರೋದ್ಯಮದಲ್ಲಿರುವ ಸಂಘಟನೆಗಳು ಈ ಕುರಿತಂತೆ ಗಮನ ಹರಿಸಬಹುದೇ ಎಂದರೆ, ಅಲ್ಲೂ ಮೂಡುತ್ತಿದೆ ಒಡಕಲು ಬಿಂಬ. ನಿರ್ದೇಶಕರ ಸಂಘ ಮತ್ತಿನ್ನೇನೋ ತಕರಾರು ಎದುರಿಸುತ್ತಿರುವಂತಿದೆ. ನಿರ್ಮಾಪಕರ ಸಂಘದ ಹೆಚ್ಚಿನ ಗಮನ ತನ್ನ ಸ್ವಂತ ಕಟ್ಟಡದ ಕಡೆಗಿದೆ. ವಾಣಿಜ್ಯ ಮಂಡಳಿಯಲ್ಲಿ ಸನ್ಮಾನ, ಸಂಭ್ರಮಗಳದೇ ಕಾರುಬಾರು. ಅದರಾಚೆ ಗಮನ ಕೊಡಲಿದೆಯೇ ಕಾದು ನೋಡಬೇಕು. ಎಲ್ಲ ಕಡೆ ಒಡೆದು ಆಳುವ, ಬಾಳುವ ದಿನಗಳು..!