ಮೋದಿಯವರು 2016ರ ಅಂತ್ಯದಲ್ಲಿ ದೇಶದ ಮೇಲೆ ಹಠಾತ್ತನೆ ಆರ್ಥಿಕ ಭೂಕಂಪವೊಂದನ್ನು ಹೇರಿ ಮಜಾ ನೋಡಿದರು. ಈ ಕ್ರಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಿಂದೆ ಜಗ್ಗಿತೇ ವಿನಾ ಮುಂದಕ್ಕೆ ಒಯ್ಯಲಿಲ್ಲ. ಬೆಟ್ಟ ಅಗೆಯಲಾಯಿತು, ಆದರೆ ಇಲಿಯೂ ಸಿಗಲಿಲ್ಲ ಎಂಬ ಕಹಿಸತ್ಯ ಜನಮನಕ್ಕೆ ನಿಧಾನವಾಗಿಯಾದರೂ ಇಳಿಯಿತು.
ನೋಟು ರದ್ದು ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಪೀಠದ ತೀರ್ಪು ಕಳೆದ ಜನವರಿಯಲ್ಲಿ ಹೊರಬಿದ್ದಿತ್ತು. ಬಹುಮತದ ತೀರ್ಪು ನೋಟು ರದ್ದು ಕ್ರಮವನ್ನು ಎತ್ತಿ ಹಿಡಿದಿತ್ತು.
ಮುಂಬರುವ ವರ್ಷಗಳಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನೋಟು ರದ್ದು ಕ್ರಮವನ್ನು ಅಕ್ರಮ ಎಂದು ಭಿನ್ನಮತದ ತೀರ್ಪು ನೀಡಿದ್ದರು. ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು.
ಒಂದು ಸಾವಿರ ರೂಪಾಯಿ ನೋಟನ್ನು ರದ್ದು ಮಾಡಿ 2000 ರೂ. ನೋಟನ್ನು ಮಾಡಿದ್ದೇ ದೊಡ್ಡ ತಪ್ಪು. ಕಪ್ಪುಹಣ ಸಂಗ್ರಹಿಸುವವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಯಿತು. 2000 ರೂಪಾಯಿ ನೋಟನ್ನು ಮುದ್ರಿಸಿದ್ದೂ ತಪ್ಪು. ಇಂದು ಅದನ್ನು ರದ್ದು ಮಾಡಿದ್ದೂ ತಪ್ಪು. ದೇಶದ ಕರೆನ್ಸಿಯೊಂದಿಗೆ ಹುಡುಗಾಟ ಆಡಲಾಗುತ್ತಿದೆ.
‘ನೋಟು ರದ್ದು ಯಶಸ್ವಿಯಾದರೆ ಮೋದಿಯವರು ಹೀರೋ ಇಲ್ಲವಾದರೆ ಝೀರೋ’ ಎಂಬುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರ ನಾಯಕರು ನುಡಿದಿದ್ದ ಭವಿಷ್ಯವಾಣಿ.
ನೋಟು ರದ್ದಿನ ಸಂಕಟ ಐವತ್ತು ದಿನಗಳ ನಂತರ ಶಮನಗೊಳ್ಳದೆ ಹೋದರೆ ಜೀವಂತ ಸುಡುವ ಶಿಕ್ಷೆಗೆ ತಮ್ಮನ್ನು ಗುರಿ ಮಾಡಿ ಎಂದಿದ್ದರು ಪ್ರಧಾನಮಂತ್ರಿ. ನೋಟು ರದ್ದು ಕ್ರಮ ಸೃಷ್ಟಿಸಿದ ಅಲ್ಲೋಲ ಕಲ್ಲೋಲಗಳು, ಬುಡಮೇಲು ಮಾಡಿದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಧ್ವಸ್ತಗೊಳಿಸಿದ ಕೋಟ್ಯಂತರ ಜನರ ಬದುಕುಗಳು, ಸಾವು ನೋವುಗಳನ್ನು ಇತಿಹಾಸ ದಾಖಲು ಮಾಡಿದೆ. ಆದರೆ ವೀರಾವೇಶದ ಘೋಷಣೆಯನ್ನು ಮಾಡಿದ್ದ ಮೋದಿ ಅವರ ಕೂದಲೂ ಕೊಂಕಲಿಲ್ಲ.
ಅಂದಿನ ಹುಚ್ಚಾಟವನ್ನು ಮುಚ್ಚಲು ಇದೀಗ ಮತ್ತೊಂದು ಹುಚ್ಚಾಟವನ್ನು ಹೂಡಲಾಗಿದೆ. ತಾವೇ ತಂದಿದ್ದ 2000 ರೂ. ನೋಟನ್ನು ಮೋದಿ ರದ್ದು ಮಾಡಿದ್ದಾರೆ. ಆದರೆ ಅಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಮೋದಿಯವರು ಇಂದು ತಮಗೇನೂ ಸಂಬಂಧವಿಲ್ಲ ಎಂಬಂತೆ ದೂರದ ವಿದೇಶ ಪ್ರವಾಸದಲ್ಲಿದ್ದಾರೆ.
ನೋಟು ರದ್ದು ಕ್ರಮದಿಂದ ಕಪ್ಪುಹಣ ತೊಲಗುತ್ತದೆ ಎಂದಿದ್ದರು; ತೊಲಗಲಿಲ್ಲ. ನಗದು ವ್ಯವಹಾರ ತಗ್ಗಿ ಡಿಜಿಟಲ್ ಹಣಕಾಸು ವ್ಯವಹಾರ ಹೆಚ್ಚುತ್ತದೆ ಎನ್ನಲಾಗಿತ್ತು. ಅದೂ ಆಗಲಿಲ್ಲ. 17.74 ಲಕ್ಷ ಕೋಟಿ ರೂ. ನಗದು 2016ರ ನವೆಂಬರ್ನಲ್ಲಿ ನೋಟು ರದ್ದಿನ ಹೊತ್ತಿನಲ್ಲಿ ಚಲಾವಣೆಯಲ್ಲಿತ್ತು. ಇದೀಗ ಈ ಮೊತ್ತ 37 ಲಕ್ಷ ಕೋಟಿ ರೂ.ಗಳಾಗಿದೆ. ಅರ್ಥಾತ್ ಎರಡು ಪಟ್ಟಿಗಿಂತ ಹೆಚ್ಚು!
ಭಯೋತ್ಪಾದನೆಯ ಹತ್ಯೆಗಳು ನಿಂತಿಲ್ಲ. ಎಂದಿನಂತೆಯೇ ಜರುಗಿವೆ.
ಮೋದಿಯವರ ಹುಚ್ಚಾಟವನ್ನು ಆಗಲೂ ಮಾಸ್ಟರ್ ಸ್ಟ್ರೋಕ್ ಎಂದು ಗೋದಿ ಮೀಡಿಯಾ ಕೊಂಡಾಡಿತು. ಈಗಲೂ ಮಾಸ್ಟರ್ ಸ್ಟ್ರೋಕ್ ಎಂದು ಬಾಲಬಡಿಯುತ್ತಿದೆ. ಎರಡು ಸಾವಿರ ರೂಪಾಯಿಯ ನೋಟಿನಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗಿದ್ದು, ಭೂಮಿಯಲ್ಲಿ ಹೂತಿಟ್ಟರೂ ಪತ್ತೆಯಾಗುತ್ತದೆ ಎಂದು ಬುರುಡೆ ಬಿಟ್ಟಿತ್ತು. ಆಗಲೂ ಕಾಳಧನ–ನಕಲಿ ನೋಟು–ಭಯೋತ್ಪಾದನೆಯ ಸೊಂಟ ಮುರಿಯಲು ಸಾವಿರ ರೂಪಾಯಿ ನೋಟು ರದ್ದು ಮಾಡಿ ಎರಡು ಸಾವಿರ ರೂಪಾಯಿ ನೋಟನ್ನು ಚಲಾವಣೆಗೆ ತರಲಾಗಿತ್ತು. ಈಗಲೂ ಇವೇ ಮೂರು ವಿಷಯಗಳ ಸೊಂಟ ಮುರಿಯಲು 2000 ರೂಪಾಯಿಯ ನೋಟನ್ನು ರದ್ದು ಮಾಡಲಾಗುತ್ತಿದೆ ಎಂದು ಮತ್ತೊಮ್ಮೆ ಬುರುಡೆ ಬಿಡಲಾಗುತ್ತಿದೆ. ಹಾಗಿದ್ದರೆ ಈ ಆರು ವರ್ಷಗಳಲ್ಲಿ ಈ ಮೂರು ಸಮಸ್ಯೆಗಳ ಸೊಂಟ ಏಕೆ ಮುರಿಯಲಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು?
2016ರಲ್ಲಿ ನೋಟು ರದ್ದು ಮಾಡಿ, ಹೊಸ ನೋಟು ಮುದ್ರಿಸಲು ಮಾಡಲಾದ ವೆಚ್ಚ 13 ಸಾವಿರ ಕೋಟಿ ರೂಪಾಯಿಗಳು. ಈ ವೆಚ್ಚ ವ್ಯರ್ಥವಾಯಿತಲ್ಲ. ರದ್ದು ಮಾಡಬೇಕಿದ್ದರೆ ಮುದ್ರಣ ಏಕೆ ಮಾಡಬೇಕಿತ್ತು?
ಎರಡು ಸಾವಿರ ರೂಪಾಯಿ ನೋಟುಗಳ ವಿನಿಮಯಕ್ಕೆ ದೇಶದ ಜನತೆ ಪುನಾ ಬ್ಯಾಂಕುಗಳ ಮುಂದೆ ಸಾಲು ಹಚ್ಚಿ ನಿಲ್ಲಬೇಕಿದೆ. ಅಂದು ಈ ಸಾಲುಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಸತ್ತರು. ವಿದೇಶಗಳಲ್ಲಿ ಭಾಷಣ ಮಾಡಿ ಮೋದಿ ಮಜಾ ತೆಗೆದುಕೊಂಡರು. ಈಗಲೂ ಮಜಾ ತೆಗೆದುಕೊಳ್ಳಲಿದ್ದಾರೆ. ಭಕ್ತರು ಹೊಗಳುತ್ತಾರೆ. ಜನಸಾಮಾನ್ಯರು ಹಣೆ ಚಚ್ಚಿಕೊಳ್ಳಬೇಕು.
ದೇಶವನ್ನು ಕಾಡುವ ನಿಜ ಸಮಸ್ಯೆಗಳಿಂದ ಕೇಂದ್ರ ಸರ್ಕಾರದ ತಪ್ಪು ನೀತಿ ನಿರ್ಧಾರಗಳು, ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳು ಸತತ ಪ್ರಯೋಗ ಆಗುತ್ತಲೇ ಇರುತ್ತವೆ.
2000 ರೂಪಾಯಿಯ ನೋಟು ರದ್ದು ಕ್ರಮ ಕೂಡ ಜನತೆಯ ಚರ್ಚೆಯ ದಿಕ್ಕನ್ನು ಬದಲಿಸುವ ಅದೇ ಹಳೆಯ ತಂತ್ರವೇ?
ಕರ್ನಾಟಕದಲ್ಲಿ ಬಿಜೆಪಿಯ ಭಾರೀ ಪರಾಭವ. ಕಾಶ್ಮೀರದಲ್ಲಿ ಜಿ 20 ಶೃಂಗ ಸಮ್ಮೇಳನಕ್ಕೆ ಚೀನಾದ ಬಹಿಷ್ಕಾರ, ಸುಪ್ರೀಂ ಕೋರ್ಟ್ ಜೊತೆ ಬೀದಿ ಜಗಳಕ್ಕೆ ನಿಂತಿದ್ದ ಕಾನೂನು ಮಂತ್ರಿ ಕಿರಣ್ ರಿಜಿಜು ಅವರ ಖಾತೆ ಬದಲಾವಣೆ, ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ದಿಲ್ಲಿಯ ಅಧಿಕಾರಶಾಹಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ಉಳಿಸಿಕೊಳ್ಳಲು ಸುಗ್ರೀವಾಜ್ಞೆ ಜಾರಿ ಮುಂತಾದ ವೈಫಲ್ಯಗಳು– ಇರುಸುಮುರುಸುಗಳು– ಹಿನ್ನಡೆಗಳನ್ನು ಜನ ಮಾನಸದ ಚರ್ಚೆಯಿಂದ ಹೊರಗಿಡುವ ತಂತ್ರವೇ?
2016-17ರಲ್ಲಿ ಹೊಸದಾಗಿ ಮುದ್ರಿಸಿದ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ. ಐನೂರರ ನೋಟುಗಳೂ ಕಣ್ಮರೆಯಾಗಿವೆ. ಅವುಗಳ ಮೌಲ್ಯ ಏಳೆಂಟು ಲಕ್ಷ ಕೋಟಿ ರೂಪಾಯಿಗಳು. ಹಾಗಾದರೆ ಮುಂಬರುವ ದಿನಗಳಲ್ಲಿ ಐನೂರು ರೂಪಾಯಿಯ ನೋಟನ್ನೂ ರದ್ದು ಮಾಡಲಾಗುವುದೇ?
2019ರ ನಂತರ ಎರಡು ಸಾವಿರದ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು ಆರ್.ಬಿ.ಐ. 2016ರಲ್ಲಿ ಭಾರೀ ಪ್ರಮಾಣದಲ್ಲಿ 2000 ರೂಪಾಯಿ ನೋಟುಗಳನ್ನು ಮುದ್ರಿಸಲಾಗಿತ್ತು. ನೋಟು ರದ್ದಿನ ನಂತರ ಮುದ್ರಿಸಲಾದ ಒಟ್ಟು ಕರೆನ್ಸಿಯ ಶೇ.50ರಷ್ಟು ಪ್ರಮಾಣ 2000 ರೂಪಾಯಿ ನೋಟುಗಳದೇ ಆಗಿತ್ತು. ಕಪ್ಪುಹಣ ಸಂಗ್ರಹಕ್ಕೆ ಈ ನೋಟುಗಳು ಉತ್ತೇಜನ ನೀಡುತ್ತವೆಂದು ಅರಿತು ಕಾಲಕ್ರಮೇಣ ಇವುಗಳ ಮುದ್ರಣವನ್ನು ತಗ್ಗಿಸಲಾಯಿತು. 2016-17ರಲ್ಲಿ 2000 ರೂಪಾಯಿಯ 350 ಕೋಟಿ ನೋಟುಗಳನ್ನು ಮುದ್ರಿಸಲಾಗಿತ್ತು. 2017-18ರಲ್ಲಿ 15.10 ಕೋಟಿ ನೋಟುಗಳನ್ನು, 2018-19ರಲ್ಲಿ 4.70 ಕೋಟಿ ನೋಟುಗಳನ್ನು ಮುದ್ರಿಸಲಾಯಿತು. ಹೀಗೆ 2000 ರೂಪಾಯಿಯ ಒಟ್ಟು 370ಕೋಟಿ ನೋಟುಗಳನ್ನು ಮುದ್ರಿಸಲಾಗಿದೆ.107 ಕೋಟಿ ನೋಟುಗಳನ್ನು ಸವಕಳಿ ಮುಂತಾದ ಕಾರಣಗಳಿಗಾಗಿ ಆರ್. ಬಿ.ಐ. ನಾಶಪಡಿಸಿದೆ. ಉಳಿದದ್ದು 268 ಕೋಟಿ ನೋಟುಗಳು. ಇಷ್ಟು ನೋಟುಗಳು ಇದೀಗ ಭಾರತದಾದ್ಯಂತ ಚಲಾವಣೆಯಲ್ಲಿರಬೇಕಿತ್ತು. ಈ ನೋಟುಗಳ ಒಟ್ಟು ಮೌಲ್ಯ 5.36 ಲಕ್ಷ ಕೋಟಿ ರೂಪಾಯಿ. ಆದರೆ ಆರ್. ಬಿ.ಐ. ಪ್ರಕಾರ 54 ಕೋಟಿ ನೋಟುಗಳು ಚಲಾವಣೆಯಿಂದ ಮರೆಯಾಗಿವೆ. ಹೀಗೆ ಕಣ್ಮರೆಯಾಗಿರುವ 2000 ರೂಪಾಯಿಯ 54 ಕೋಟಿ ನೋಟುಗಳ ಮೌಲ್ಯ 1.08 ಲಕ್ಷ ಕೋಟಿ ರೂಪಾಯಿಗಳು. ಈ ಮೊತ್ತ ಕಪ್ಪುಹಣದ ರೂಪ ಧರಿಸಿ ಅಡಗಿಕೊಂಡಿದೆಯೇ? ಈ ನೋಟುಗಳನ್ನು ಹೊರತರುವ ಉದ್ದೇಶದಿಂದ 2000 ರೂಪಾಯಿಯ ನೋಟುಗಳನ್ನು ರದ್ದು ಮಾಡಲಾಗಿದೆಯೇ? ಆದರೆ ಅಂತಹ ಉದ್ದೇಶಕ್ಕೆ ಯಾವುದೇ ಆಧಾರವಿಲ್ಲ.
500 ರೂಪಾಯಿಗಳ ನೋಟು ಸತತ ಮುದ್ರಣಗೊಳ್ಳುತ್ತಿದೆ. 2016ರ ನೋಟು ರದ್ದು ಕ್ರಮದ ನಂತರ 500 ರೂಪಾಯಿಯ 6475 ಕೋಟಿ ನೋಟುಗಳು ಮುದ್ರಣಗೊಂಡಿವೆ. ಸವಕಳಿ, ವಿರೂಪ ಮುಂತಾದ ಕಾರಣಗಳಿಗಾಗಿ ಆರ್.ಬಿ.ಐ. ನಾಶಪಡಿಸಿರುವ 500 ರೂಪಾಯಿ ನೋಟುಗಳ ಸಂಖ್ಯೆ 298 ಕೋಟಿ. ಉಳಿದಂತೆ ಲೆಕ್ಕದ ಪ್ರಕಾರ 6181 ಕೋಟಿ ನೋಟುಗಳು ಚಲಾವಣೆಯಲ್ಲಿ ಇರಬೇಕು. ಅಷ್ಟು ನೋಟುಗಳು ಚಲಾವಣೆಯಲ್ಲಿ ಇವೆಯೇ? ಇಲ್ಲ. 1626 ಕೋಟಿ ನೋಟುಗಳು ಚಲಾವಣೆಯಲ್ಲಿ ಇಲ್ಲ. 4555 ಕೋಟಿ ನೋಟುಗಳು ಮಾತ್ರ ಚಲಾವಣೆಯಲ್ಲಿವೆ ಎನ್ನುತ್ತದೆ ಆರ್. ಬಿ.ಐ. ಕಣ್ಮರೆಯಾಗಿರುವ ಈ ನೋಟುಗಳ ಒಟ್ಟು ಮೌಲ್ಯ 8.13 ಲಕ್ಷ ಕೋಟಿ ರೂಪಾಯಿ. 2022ರ ಡಿಸೆಂಬರ್ ತನಕ 2000 ರೂಪಾಯಿಯ 80 ಸಾವಿರ ನಕಲಿ ನೋಟುಗಳ ಪತ್ತೆಯಾಗಿದ್ದವು. ಸುಮಾರು 15 ಕೋಟಿ ರೂಪಾಯಿ ಮೌಲ್ಯ ಹಾಗೆಯೇ 500 ರೂಪಾಯಿಗಳ 1.81 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಇವುಗಳ ಮೌಲ್ಯ ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು.
ಹೀಗಾಗಿ ಕಪ್ಪುಹಣ, ನಕಲಿ ನೋಟು, ಭಯೋತ್ಪಾದನೆಯ ನಿಗ್ರಹದ ಕಾರಣಗಳನ್ನು ಈ ಸಲ ಮುಂದೆ ಮಾಡುವಂತಿಲ್ಲ. ಹಾಗಿದ್ದರೆ ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಢ ವಿಧಾನಸಭಾ ಚುನಾವಣೆಗಳು, ಆನಂತರ ತೆಲಂಗಾಣದ ವಿಧಾನಸಭೆ, 2024ರ ಲೋಕಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸೆಣೆಸಲಿರುವ ಪ್ರತಿಪಕ್ಷಗಳ ಜೇಬು ಬರಿದು ಮಾಡುವ ಹುನ್ನಾರವೇ?
ಇದ್ದೀತು. ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ತಂತ್ರವೇ ಇದ್ದೀತು.
ಜನತೆಯ ಕಿವಿಯ ಮೇಲೆ ಹೂವು ಇಡುವುದು ಅದೆಷ್ಟು ಸುಲಭವೆಂದು ಅವರು ಖಾಸಗಿಯಲ್ಲಿ ಗಹಗಹಿಸುತ್ತಿರಬಹುದು. ಆದರೆ ಎಲ್ಲವೆಲ್ಲವೂ ದಾಖಲಾಗುತ್ತದೆ ಮತ್ತು ಜನತಾ ನ್ಯಾಯಾಲಯದಲ್ಲಿ ಅದರ ಲೆಕ್ಕ ಒಪ್ಪಿಸಬೇಕಾದ ಗಳಿಗೆ ತಡವಾಗಿಯಾದರೂ ಬಂದೇ ತೀರುತ್ತದೆ.