Mysore
16
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ನಿರುದ್ಯೋಗ ನಿವಾರಣೆಗೆ ಒತ್ತಾಸೆಯಾಗಿ ನಿಲ್ಲಲಿ ಉದ್ಯೋಗ ಮೇಳ

ವರ್ಷದಿಂದ ವರ್ಷಕ್ಕೆ ಪದವಿ ಮುಗಿಸಿ ಸ್ನಾತಕ-ಸ್ನಾತಕೋತ್ತರ ಪದವೀಧರರು ಹೊರಬರುತ್ತಿದ್ದಂತೆ ಉದ್ಯೋಗದ ಬೇಡಿಕೆಯೂ ಹೆಚ್ಚಾಗುತ್ತಿದೆ. ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಪದವಿ ಮುಗಿಸಿ ಹೊರಬರುವ ಅಭ್ಯರ್ಥಿಗಳಲ್ಲಿ ಶೇ.೩೦ರಷ್ಟು ಮಂದಿಗೆ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರಕದೆ ಇರುವುದೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಯುವನಿಧಿ ಹೆಸರಿನಲ್ಲಿ ರೂ. ೩,೦೦೦ ಪ್ರೋತ್ಸಾಹಧನ ನೀಡುತ್ತಿದೆ. ಜೊತೆಗೆ ನಿರುದ್ಯೋಗವನ್ನು ನಿವಾರಣೆ ಮಾಡಲು ಹೊಸ ಹೊಸ ಯೋಜನೆಗಳನ್ನು ರೂಪಿಸುವ ಅವಶ್ಯವಿದೆ.

ರಾಜ್ಯ ಸರ್ಕಾರ ಪ್ರಾರಂಭಿಸಿರುವ ಉದ್ಯೋಗ ಮೇಳವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ್ದರೂ, ಮೇಳದಲ್ಲಿ ಪದವೀಧರರ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದರೂ, ಈತನಕ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ರಾಜ್ಯ ಸರ್ಕಾರ ತನ್ನ ಮಿತಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಒತ್ತು ನೀಡುತ್ತಿದೆ. ಬೆಂಗಳೂರು, ಬೆಳಗಾವಿ, ಕಲಬುರ್ಗಿ ವಿಭಾಗಗಳಲ್ಲಿ ಉದ್ಯೋಗ ಮೇಳ ನಡೆಸಿದ್ದ ರಾಜ್ಯ ಸರ್ಕಾರ ಮೈಸೂರು ವಿಭಾಗದಲ್ಲಿಯೂ ಅಚ್ಚುಕಟ್ಟಾಗಿ ಉದ್ಯೋಗ ಮೇಳ ನಡೆಸಿ ಯಶಸ್ವಿಯಾಗಿದೆ.

ಇದನ್ನು ಓದಿ: ಅಧಿಕಾರ ಹಂಚಿಕೆ: ಸೂಕ್ತ ಸಂದೇಶ ರವಾನಿಸಿದ ಎಚ್‌ಸಿಎಂ

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಪಾಲಿಕೆ ಸಹಯೋಗದಲ್ಲಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ೧೩೫ ಕಂಪೆನಿಗಳು ಹಾಗೂ ೮೬ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಕಂಪೆನಿಗಳು ಸೇರಿದಂತೆ ೨೨೧ಕ್ಕೂ ಹೆಚ್ಚು ಕಂಪೆನಿಗಳು ಹೆಸರು ನೋಂದಾಯಿಸಿಕೊಂಡಿದ್ದವು. ಯುವನಿಧಿ ಯೋಜನೆಯಡಿ ಈಗಾಗಲೇ ನೋಂದಣಿಯಾಗಿದ್ದ ಮೈಸೂರು ವಿಭಾಗದ ೪೩,೫೭೭ ಫಲಾನುಭವಿಗಳ ಜತೆಗೆ, ಇತರೆ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗ ನೀಡಲು ಅವಕಾಶ ಹೊಂದಿರುವ ಉದ್ಯೋಗದಾತರೊಂದಿಗೆ ನೇರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು.

ಅದರಲ್ಲೂ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಮೊದಲಾದ ಜಿಲ್ಲೆಗಳಿಂದ ಮೇಳಕ್ಕೆ ೪೫,೦೦೦ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಆ ಪೈಕಿ ೧೫ ಸಾವಿರ ಅಭ್ಯರ್ಥಿಗಳು ಪೂರ್ಣಪ್ರಮಾಣದ ದಾಖಲೆಗಳ ಸಮೇತ ನೋಂದಣಿ ಮಾಡಿಕೊಂಡಿದ್ದರು.

ಮೈಸೂರು- ೮,೯೯೮, ಬೆಂಗಳೂರು ನಗರ- ೧,೭೭೦, ಮಂಡ್ಯ- ೮೬೭ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ೮,೮೯೪ ಪುರುಷರು, ೫,೯೨೩ ಮಹಿಳೆಯರು, ಇತರೆ ೮ ಮಂದಿ ಸೇರಿ ಒಟ್ಟು ೧೪,೮೨೫ ಅಭ್ಯರ್ಥಿಗಳು ದಾಖಲೆಗಳ ಸಹಿತ ಮೇಳದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಿಇ-೩,೦೮೫, ಐಟಿಐ-೧,೮೩೮, ಬಿಕಾಂ-೧,೪೮೧, ಎಸ್‌ಎಸ್‌ಎಲ್‌ಸಿ, ಪಿಯುಸಿ-೧,೪೨೧, ಬಿಎಸ್ಸಿ-೭೭೦, ಡಿಪ್ಲೊಮಾ-೧,೧೩೦, ಎಂಎಸ್ಸಿ-೩೩೫, ಬಿಬಿಎ- ೩೧೦, ಎಂಬಿಎ- ೬೮೦, ಎಂಸಿಎ- ೨೧೯, ಬಿಸಿಎ-೩೪೧, ಇತರೆ ಸ್ನಾತಕೋತ್ತರ ಪದವಿ- ೨,೩೧೨, ಸ್ನಾತಕ ಪದವಿ-೫೯೨ ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಸಂದರ್ಶನಕ್ಕೆ ಹಾಜರಾಗಿದ್ದರು.

ಉದ್ಯೋಗ ಮೇಳದಲ್ಲಿ ೧೩೫ ಕಂಪೆನಿಗಳು ಹಾಗೂ ೧೦೦ಕ್ಕೂ ಹೆಚ್ಚು ಮಾನವ ಸಂಪನ್ಮೂಲಕ್ಕೆ ಸಂಬಂಽಸಿದ ಕಂಪೆನಿಗಳು, ಸಂಸ್ಥೆಗಳು ದಿನವಿಡೀ ಸಂದರ್ಶನ ನಡೆಸಿದ್ದರು. ಹಲವು ಕಂಪೆನಿಗಳು ಒಟ್ಟು ೧,೩೪೬ ಅರ್ಹರನ್ನು ನೇಮಕ ಮಾಡಿಕೊಂಡಿವೆ. ೩,೩೦೩ ಮಂದಿಯ ಹೆಸರನ್ನು ವಿವಿಧ ಕಂಪೆನಿಗಳವರು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಗುರುತಿಸಿಕೊಂಡು ತೆರಳಿದ್ದಾರೆ.

ಇದನ್ನು ಓದಿ: ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಪ್ರವಾಸಿಗರ ದಂಡು

ಉದ್ಯೋಗ ಮೇಳಗಳಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸಬೇಕಾಗಿದೆ. ಪದವಿ ಪಡೆದವರು, ಇಂಜಿನಿಯರಿಂಗ್ ಪದವೀಧರರು ಸರ್ಕಾರಿ ಉದ್ಯೋಗ ಅಥವಾ ಐಟಿ -ಬಿಟಿ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಲು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಕಂಪೆನಿಗಳನ್ನು ಆಹ್ವಾನಿಸಲು ಸರ್ಕಾರ ಆದ್ಯತೆ ನೀಡಬೇಕು.

ಖಾಸಗಿ ಬ್ಯಾಂಕ್‌ಗಳಲ್ಲಿ ನೌಕರಿ ಸಿಕ್ಕಿದರೂ ಉಳಿತಾಯ ಖಾತೆ ಮಾಡಿಸುವುದು,  ಠೇವಣಿದಾರರನ್ನು ಹುಡುಕು ವುದು, ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳು ವವರ ಬಗ್ಗೆ ಟಾರ್ಗೆಟ್ ನೀಡುವ ಕಾರಣ ಕೆಲವರು ಹಿಂದೇಟು ಹಾಕುತ್ತಾರೆ. ರಾಜ್ಯ ಸರ್ಕಾರ ಪದವಿ ಪಡೆದವರಿಗೆ ಸರ್ಕಾರಿ ಉದ್ಯೋಗವನ್ನೇ ಕೊಡಬೇಕೆಂದು ಅಪೇಕ್ಷಿಸುವುದೂ ಸರಿಯಲ್ಲ. ಆದರೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುವ ಜತೆಗೆ, ಖಾಸಗಿ ಕಂಪೆನಿಗಳಲ್ಲಿ ಅವರವರ ಅರ್ಹತೆಯ ಆಧಾರದ ಮೇಲೆ ನೌಕರಿ ಸಿಗುವಂತೆ ನೋಡಿಕೊಳ್ಳಲು ಮುಂದಾಗಬೇಕಾಗಿದೆ.

ಉದ್ಯೋಗ ಮೇಳ ಮಾಡುತ್ತೇವೆಂದು ಹೇಳಿ ತೋರ್ಪಡಿಕೆಗೆ ಒಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸಿ, ಉಳಿದವರಿಗೆ ಕಂಪೆನಿಗಳು ಹೇಳಿದ ಕೆಲಸ ಮಾಡಿ ಎನ್ನುವಂತಾಗಬಾರದು. ಆದ್ದರಿಂದ ಸರ್ಕಾರ ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳ ಆಯೋಜಿಸುವುದಲ್ಲದೆ, ನೋಂದಣಿ ಮಾಡಿಕೊಂಡವರ ಅರ್ಹತೆಗೆ ತಕ್ಕಂತೆ ಕೆಲಸ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಸೂಕ್ತವಾಗಿದೆ.

” ರಾಜ್ಯ ಸರ್ಕಾರ ಪ್ರಾರಂಭಿಸಿರುವ ಉದ್ಯೋಗ ಮೇಳವನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿದ್ದರೂ, ಮೇಳದಲ್ಲಿ ಪದವೀಧರರ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುವಂತೆ ನೋಡಿ ಕೊಳ್ಳುವುದು ಅತ್ಯಗತ್ಯ”

Tags:
error: Content is protected !!