Mysore
20
overcast clouds
Light
Dark

ಬ್ರಿಟನ್ ಪ್ರಧಾನಿಯಾಗಿ ರಿಶಿ ಸುನಕ್: ಭಾರತದಲ್ಲಿ ಅನಗತ್ಯ ಭಾವೋದ್ವೇಗ, ಭಾರತೀಯ ವಲಸಿಗರು, ಇತರ ಅಲ್ಪಸಂಖ್ಯಾತರಿಗೆ ಇನ್ನು ಅಲ್ಲಿ ಉಳಿಗಾಲವಿಲ್ಲ

ತಮಗೆ ಯಾವ ಕಾರ್ಮಿಕರ ಜೊತೆಗಾಗಲೀ, ಮಧ್ಯಮ ವರ್ಗದವರ ಜೊತೆಗಾಗಲಿ ಒಡನಾಟವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಅವರ ಬದುಕಿನ ಶೈಲಿಯ ಪ್ರತಿಬಿಂಬವಾಗಿದೆ. ಇನ್ನು ಬಡವರ, ನಿರಾಶ್ರಿತರ ಕಷ್ಟ ಅವರಿಗೆ ತಿಳಿದಿರಲು ಸಾಧ್ಯವಿಲ್ಲ. ಅವರಿಗೆ ಅದು ಬೇಕಿಲ್ಲ ಕೂಡ. ಇದನ್ನು ತಿಳಿದ ಬ್ರಿಟನ್‌ನ ಬಡವರು, ನಿರಾಶ್ರಿತರು, ವಲಸೆ ಬಂದವರು, ಅಷ್ಟೇ ಏಕೆ ಬಡ ಹಿಂದು ಅಲ್ಪಸಂಖ್ಯಾತರು ರಿಶಿ ಪ್ರಧಾನಿಯಾದುದನ್ನು ಸಂಭ್ರಮಿಸುತ್ತಿಲ್ಲ. ಕರೋನಾ ಹಾವಳಿಯ ಸಂದರ್ಭದಲ್ಲಿ ಬಡ ಮಧ್ಯಮವರ್ಗದವರ ಪ್ರದೇಶಕ್ಕೆ ಮೀಸಲಿಟ್ಟಿದ್ದ ಅಭಿವೃದ್ಧಿ ಹಣವನ್ನು ಆರ್ಥಿಕ ಸಚಿವರಾಗಿದ್ದ ರಿಶಿ ಅವರು ಶ್ರೀಮಂತರ ಪ್ರದೇಶಗಳಿಗೆ ವರ್ಗಾಯಿಸಿದ ನಿದರ್ಶನ ಅವರ ಮುಂದೆ ಇದೆ.

ಭಾರತೀಯ ಸಂಜಾತ ರಿಶಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದದ್ದು ಭಾರತೀಯರಿಗೆ ಅದರಲ್ಲಿಯೂ ಹಿಂದುಗಳಿಗೆ, ಹಿಂದೂ ಸಂಘಟನೆಗಳಿಗೆ ಹೆಚ್ಚು ಸಂತೋಷ ತಂದಿದೆ. ಭಾರತದಲ್ಲಿ ಈಗ ಹಿಂದೂ ಬಹುಸಂಖ್ಯಾತರಲ್ಲಿ ಕೆಲವರು ಹಿಂದೂ ಧರ್ಮದ ಪುನರುತ್ಥಾನಕ್ಕೆ ಆಡಳಿತ ಮತ್ತು ಆಡಳಿತ ಪಕ್ಷದ ನೆರವಿನೊಂದಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕ್ರೈಸ್ತರು ಬಹುಸಂಖ್ಯಾತರಿರುವ ಬ್ರಿಟನ್ನಲ್ಲಿ ಅಲ್ಪಸಂಖ್ಯಾತ ಹಿಂದೂವೊಬ್ಬ ಪ್ರಧಾನಿಯಾದದ್ದು ಭಾರತದ ಹಿಂದೂಗಳ ಉನ್ಮಾದಕ್ಕೆ ಕಾರಣವಾಗಿದೆ. ಹಿಂದೆ ಬ್ರಿಟಿಷರು ನಮ್ಮನ್ನಾಳಿದರು. ಈಗ ಇತಿಹಾಸದ ಚಕ್ರ ತಿರುಗಿದೆ. ಭಾರತ ಸಂಜಾತರೊಬ್ಬರು ಈಗ ಬ್ರಿಟನ್ ಪ್ರಧಾನಿಯಾಗಿದ್ದು ಬ್ರಿಟಿಷರನ್ನು ಆಳಲಿದ್ದಾರೆ ಎಂದು ಆನಂದಪಡುತ್ತಿದ್ದಾರೆ. ಹೀಗೆ ಆನಂದ ಪಡುವುದರಲ್ಲಿ ತಪ್ಪೇನೂ ಇಲ್ಲ!

ಬ್ರಿಟನ್ನಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೂ ರಿಶಿ ಸುನಕ್ ಪ್ರಧಾನಿಯಾದದ್ದು ಭಾವೋದ್ರೇಕಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣವೂ ಇದೆ. ಬ್ರಿಟನ್‌ನಲ್ಲಿ ಮುಸ್ಲಿಮ್, ಅದರಲ್ಲಿಯೂ ಪಾಕಿಸ್ತಾನದ ಮುಸ್ಲಿಮರು ಮತ್ತು ಭಾರತದ ಹಿಂದೂಗಳ ಮಧ್ಯೆ ಇದ್ದ ವಿರಸ ಬೀದಿಗೆ ಬಂದಿದೆ. ಇತ್ತೀಚೆಗೆ ಲೈಸೆಸ್ಟರ್ ನಗರದಲ್ಲಿ ಎರಡೂ ಜನಾಂಗದ ಜನರು ಬೀದಿಗಳಿದು ಘರ್ಷಣೆಗೆ ನಿಂತದ್ದು ಮರೆಯುವಂತಿಲ್ಲ. ರಿಶಿ ಭಾರತೀಯ ಸಂಜಾತರು, ಅವರು ಹಿಂದು ಎಂದು ಬಿಂಬಿಸುವ ಮೂಲಕ ಪಾಕಿಸ್ತಾನಿ ಮುಸ್ಲಿಮರಿಗೆ ಎಚ್ಚರಿಕೆ ನೀಡುವುದು ಹಿಂದೂಗಳ ಉದ್ದೇಶವಾಗಿದೆ. ರಿಶಿ ಸುನಕ್ ಅವರು ಕೈಗೆ ಕೆಂಪು ದಾರ ಕಟ್ಟಿರುವುದು, ದೀಪಾವಳಿ ಹಬ್ಬ ಆಚರಿಸಿರುವುದು ಮತ್ತು ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ಗೋಪೂಜೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಿ ತುಳುಕುವಂತೆ ಮಾಡಲಾಗಿದೆ. ಇದರ ಹಿಂದೆ ಬ್ರಿಟನ್‌ನ ಮತ್ತು ಭಾರತದ ಹಿಂದೂ ಸಂಘಟನೆಗಳು ಇರುವುದರಲ್ಲಿ ಅನುಮಾನವಿಲ್ಲ.

ಆದರೆ ಯಾವುದೇ ಧರ್ಮೀಯರ ಪರ ರಿಶಿ ಅವರಾಗಲೀ ಬ್ರಿಟಿಷ್ ಜನರಾಗಲೀ ನಿಲ್ಲುವ ಸಾಧ್ಯತೆ ಇಲ್ಲ. ರಿಶಿ ಅವರು ಹಿಂದು ಎಂದು ಬೀದಿಕಾಳಗಕ್ಕೆ ಇಳಿದರೆ ಅದರಿಂದ ತೊಂದರೆಗೆ ಒಳಗಾಗುವವರು ಹಿಂದೂಗಳೇ ಎನ್ನುವುದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು. ಬೇರೆ ದೇಶದವರು ತಮ್ಮ ದೇಶದಲ್ಲಿ ಬೀದಿ ಕಾಳಗಕ್ಕೆ ಇಳಿಯುವುದನ್ನು ಬ್ರಿಟನ್ ಆಡಳಿತಗಾರರು ಸಹಿಸಲಾರರು.

ಬ್ರಿಟನ್ ದೇಶ ಆರ್ಥಿಕವಾಗಿ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಪರಿಸ್ಥಿತಿ ಸುಧಾರಿಸುವಂಥವರೊಬ್ಬರು ಅವರಿಗೆ ಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಅರ್ಥ ಸಚಿವರಾಗಿದ್ದ ರಿಶಿ ಸುನಕ್ ಅವರು ಕರೋನಾ ಹೊಡೆತವನ್ನು ತಕ್ಕಮಟ್ಟಿಗೆ ನಿಭಾಯಿಸಿ ಹೆಸರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಸದ್ಯದ ಆರ್ಥಿಕ ಸಂಕಷ್ಟದಿಂದ ದೇಶವನ್ನು ಹೊರತರಬಹುದು ಎಂಬ ಕನ್ಸರ್ವೇಟಿವ್ ಪಕ್ಷದ ಬಹುಪಾಲು ಸಂಸತ್ ಸದಸ್ಯರ ಅಭಿಮತದ ಪರಿಣಾಮವಾಗಿ ಈ ಬೆಳವಣಿಗೆಯಾಗಿದೆ. ರಿಶಿ ಅವರು ಬ್ರಿಟನ್ ಹಿತಾಸಕ್ತಿಗೆ ವಿರುದ್ಧವಾದ ಏನನ್ನೂ ಮಾಡುವುದಿಲ್ಲ ಎಂಬ ವಿಶ್ವಾಸ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯರಲ್ಲಿ ಇದ್ದುದರಿಂದಲೇ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ.

ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವ ರಿಶಿ ಅವರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಮಾಡಿ, ಹಣವನ್ನು ವಿವಿಧ ಯೋಜನೆಗಳಲ್ಲಿ ಹೂಡಿ ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ರಿಶಿ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ(ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು) ಅವರ ಒಟ್ಟು ಆಸ್ತಿ ಮೌಲ್ಯ ೭೩೦ ಮಿಲಿಯನ್ ಪೌಂಡ್‌ಗಳು. ರಾಣಿ ಎರಡನೆಯ ಎಲಿಜಬತ್ ನಿಧನರಾಗುವ ಮುನ್ನ ಅವರ ಆಸ್ತಿಪಾಸ್ತಿ ಮತ್ತು ಅವರ ಬಳಿ ಇರುವ ಹಣದ ಒಟ್ಟು ಮೌಲ್ಯವನ್ನು ಲೆಕ್ಕಹಾಕಲಾಗಿತ್ತು. ರಾಣಿಯ ಒಟ್ಟು ಆಸ್ತಿಪಾಸ್ತಿಯ ಮೌಲ್ಯ ೩೭೦ ಮಿಲಿಯನ್ ಪೌಂಡ್‌ಗಳೆಂದು ಗುರುತಿಸಲಾಗಿತ್ತು. ಅಂದರೆ ರಿಶಿ ಮತ್ತು ಅಕ್ಷತಾ ಅವರ ಆಸ್ತಿ ಪಾಸ್ತಿಯ ಮೌಲ್ಯ ರಾಣಿಯ ಆಸ್ತಿಯ ದುಪ್ಪಟ್ಟು ಇತ್ತು. ಸಹಜವಾಗಿಯೇ ಅವರು ಬ್ರಿಟನ್ನಲ್ಲಿ ಗುರುತಿಸಿಕೊಂಡಿರುವುದು ಕೋಟ್ಯಧಿಪತಿಗಳ ಜೊತೆ. ಅವರ ಜೀವನ ಶೈಲಿ ಕೂಡಾ ಶ್ರೀಮಂತರದ್ದೇ.

ತಮಗೆ ಯಾವ ಕಾರ್ಮಿಕರ ಜೊತೆಗಾಗಲೀ, ಮಧ್ಯಮ ವರ್ಗದವರ ಜೊತೆಗಾಗಲಿ ಒಡನಾಟವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಅವರ ಬದುಕಿನ ಶೈಲಿಯ ಪ್ರತಿಬಿಂಬವಾಗಿದೆ. ಇನ್ನು ಬಡವರ, ನಿರಾಶ್ರಿತರ ಕಷ್ಟ ಅವರಿಗೆ ತಿಳಿದಿರಲು ಸಾಧ್ಯವಿಲ್ಲ. ಅವರಿಗೆ ಅದು ಬೇಕಿಲ್ಲ ಕೂಡ. ಇದನ್ನು ತಿಳಿದ ಬ್ರಿಟನ್‌ನ ಬಡವರು, ನಿರಾಶ್ರಿತರು, ವಲಸೆ ಬಂದವರು, ಅಷ್ಟೇ ಏಕೆ ಬಡ ಹಿಂದು ಅಲ್ಪಸಂಖ್ಯಾತರು ರಿಶಿ ಪ್ರಧಾನಿಯಾದುದನ್ನು ಸಂಭ್ರಮಿಸುತ್ತಿಲ್ಲ. ಕರೋನಾ ಹಾವಳಿಯ ಸಂದರ್ಭದಲ್ಲಿ ಬಡ ಮಧ್ಯಮವರ್ಗದವರ ಪ್ರದೇಶಕ್ಕೆ ಮೀಸಲಿಟ್ಟಿದ್ದ ಅಭಿವೃದ್ಧಿ ಹಣವನ್ನು ಆರ್ಥಿಕ ಸಚಿವರಾಗಿದ್ದ ರಿಶಿ ಅವರು ಶ್ರೀಮಂತರ ಪ್ರದೇಶಗಳಿಗೆ ವರ್ಗಾಯಿಸಿದ ನಿದರ್ಶನ ಅವರ ಮುಂದೆ ಇದೆ.

ರಿಶಿ ಅವರ ಧೋರಣೆಗಳು ಕನ್ಸರ್ವೇಟಿವ್ ಪಕ್ಷದ ನಿಲುವುಗಳಿಗೆ ಹೊಂದಿಕೆಯಾಗುತ್ತವೆ. ಅವರ ಜೀವನ ಮತ್ತು ಕಾರ್ಯ ಶೈಲಿಗೆ ಪಕ್ಷ ತಕ್ಕನಾಗಿದೆ. ಸಂಪ್ರದಾಯವಾದಿಯಾಗಿರುವ ಕನ್ಸರ್ವೇಟಿವ್ ಪಕ್ಷ ಮೂಲಭೂತವಾಗಿ ಬ್ರಿಟನ್ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ. ವಸಾಹತುಶಾಹಿ ವ್ಯಸನ ಮತ್ತು ಗರ್ವದಿಂದ ವೃದ್ಧ ಬ್ರಿಟಿಷ್ ಕುಟುಂಬಗಳು ಇನ್ನೂ ಹೊರಬಂದಿಲ್ಲ. ಬ್ರಿಟಿಷ್ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿನಿಧಿಸುವ ಈ ಪಕ್ಷ – ಬ್ರಿಟನ್ ದೇಶ, ಬ್ರಿಟನ್ ಜನರಿಗಾಗಿ ಮಾತ್ರ ಎಂಬ ನೀತಿಯನ್ನು ಹಿಂದೆ ಹೊಂದಿತ್ತು.

ಆದರೆ ದೇಶದಲ್ಲಿ ಸಾಕಷ್ಟು ಮಂದಿ ವಲಸಿಗರು ಇರುವುದರಿಂದ ಚುನಾವಣೆಯಲ್ಲಿ ಅವರ ಮತ ಮುಖ್ಯವಾಗಿರುವುದರಿಂದ ಅನಿವಾರ್ಯವಾಗಿ ರಾಜಕಾರಣಿಗಳು ಆ ನೀತಿಯನ್ನು ಕೈಬಿಡಬೇಕಾಗಿ ಬಂತು. ಆದರೆ ಪಕ್ಷ ವಲಸಿಗರ ವಿರೋಧಿಯಾಗಿಯೇ ಬೆಳೆದು ಬಂದಿದೆ. ರಿಶಿ ಅವರ ಕುಟುಂಬ ವಲಸಿಗರದ್ದೇ ಆದರೂ ಆಳುವ ವರ್ಗದ ವಲಸೆಯನ್ನು ವಿರೋಧಿಸುವ ನೀತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ವಲಸೆಯನ್ನು ತಡೆಯಲೇ ಬೇಕು ಎಂಬ ನಿಲುವು ರಿಶಿ ಅವರದ್ದು. ಕನ್ಸರ್ವೇಟಿವ್ ಪಕ್ಷದ ನೀತಿಯೂ ಇದೇ ಆಗಿದೆ. ಹಿಂದಿನ ಪ್ರಧಾನಿ ಅವಧಿಯಲ್ಲಿ ಭಾರತ ಮೂಲದವರಾದ ಸುವೆಲ್ಲಾ ಬ್ರವರ್‌ಮ್ಯಾನ್ ಗೃಹಸಚಿವೆಯಾಗಿದ್ದರು. ಅವರು ವಲಸೆ ವಿಚಾರದಲ್ಲಿ ಕಠಿಣ ನಿಲುವು ಉಳ್ಳವರಾಗಿದ್ದರು. ಕಾನೂನು ಬದ್ಧವಲ್ಲದ ಯಾವುದೇ ವಲಸೆಗೆ ಅವಕಾಶ ಇರಬಾರದೆಂದು ವಾದಿಸುತ್ತಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ