ಮಂಡ್ಯ ಜಿಲ್ಲೆಯ ವಿ. ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ವಿವಿ ಸ್ಥಾಪನೆಯಾದರೆ ಮಂಡ್ಯ ಸೇರಿದಂತೆ ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿನ ರೈತರಿಗೆ ಅನುಕೂಲವಾಗಲಿದೆ.
ಕೃಷಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಒಳಗೊಂಡಂತೆ ಮಂಡ್ಯದ ವಿ. ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬ ಪ್ರಸ್ತಾಪವನ್ನು ಮಾಜಿ ಉಪಸಭಾಪತಿ ಮರಿತಿಬ್ಬೇಗೌಡರವರು ಹಲವಾರು ಬಾರಿ ವಿಧಾನಪರಿಷತ್ನಲ್ಲಿ ಪ್ರಸ್ತಾಪಿಸುತ್ತಲೇ ಇದ್ದರು. ಅವರ ಬೇಡಿಕೆ ಈಗ ಈಡೇರಿದಂತಾಗಿದೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಆಗುವುದರಿಂದ ರೈತರ ಅನೇಕ ಸಮಸ್ಯೆಗಳಿಗೆ ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಒಂದೇ ಮೂಲದಿಂದ ಪರಿಹಾರ ದೊರಕುತ್ತದೆ. ಪ್ರಸ್ತುತ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಮೈಸೂರು ತೋಟಗಾರಿಕೆ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು, ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದರೆ ಮೈಸೂರು ವಿಭಾಗದಲ್ಲಿನ ಕೃಷಿಗೆ ಸಂಬಂಧಪಟ್ಟ ಎಲ್ಲ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ವಿಸ್ತರಣಾ ಘಟಕಗಳು ಹಾಗೂ ಕಾಲೇಜುಗಳು ಅದರ ಅಧೀನಕ್ಕೆ ಬರುತ್ತವೆ. ಇದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ರೈತರಿಗೂ ಹೆಚ್ಚಿನ ಅನು ಕೂಲವಾಗಲಿದೆ.
ಬೆಸಗರಹಳ್ಳಿ ರವಿ ಪ್ರಸಾದ್ , ಮೈಸೂರು