ಬೇಸಿಗೆಯ ಸುಡು ಬಿಸಿಲು ಮತ್ತು ಅಸಹನೀಯ ಧಗೆಯಿಂದಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಅನಿವಾರ್ಯ ವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಂಪೆನಿಗಳು ಬಹು ಮುಖ್ಯವಾಗಿ ಮಾವಿನ ಹಣ್ಣಿನ ರಸದ ಹೆಸರಿನಲ್ಲಿ ಮಾರಕ ರಾಸಾಯನಿಕಗಳನ್ನು ಜನರಿಗೆ ಕುಡಿಸುತ್ತಿವೆ . ಈ ಪಾನೀಯಗಳಲ್ಲಿ ಮಾವಿನ ಹಣ್ಣಿನ ಬದಲು ಟರ್ಟ್ರಾಜಿನ್ ನಂತಹ ಕೃತಕ ಬಣ್ಣ ಹಾಗೂ ಹೈ ಫ್ರಕ್ಟೋಸ್ ಕಾರ್ನ್ ಸಿರಪ್ ಬಳಸಲಾಗುತ್ತಿದೆ. ಇದು ಯಕೃತ್ತಿನ ಕಾಯಿಲೆ ಹಾಗೂ ಮಕ್ಕಳಲ್ಲಿ ಗಂಭೀರ ಪರಿಣಾಮ ಉಂಟುಮಾಡುತ್ತವೆ ಎಂಬ ಮಾಹಿತಿಗಳಿವೆ. ಇನ್ನು ತಯಾರಿಕಾ ಘಟಕಗಳ ಅಶುಚಿತ್ವ ಮತ್ತು ಕಲುಷಿತ ನೀರಿನ ಬಳಕೆಯು ಟೈಫಾಯ್ಡ್ ಹಾಗೂ ಕಾಲರಾದಂತಹ ರೋಗಗಳಿಗೆ ದಾರಿಯಾಗಿದೆ. ಅಂಕಿ ಅಂಶಗಳ ಪ್ರಕಾರ ಇಂತಹ ಪಾನೀಯಗಳಲ್ಲಿ ಶೇ.99ರಷ್ಟು ಹಣ್ಣಿನ ಅಂಶವೇ ಇರುವುದಿಲ್ಲ. ಸರ್ಕಾರವು ಆಹಾರ ಸುರಕ್ಷತಾ ತಪಾಸಣೆಯನ್ನು ತೀವ್ರಗೊಳಿಸಬೇಕು ಮತ್ತು ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
– ಡಾ. ಎಚ್. ಕೆ. ವಿಜಯಕುಮಾರ್, ಬೆಂಗಳೂರು





