ದೇಶದಲ್ಲಿ ಕೇಂದ್ರ ಸರ್ಕಾರದ ‘ಅನ್ನಪೂರ್ಣ ಯೋಜನೆ’ಯಡಿ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ತಲಾ ೧೦ ಕೆ. ಜಿ. ಅಕ್ಕಿ ನೀಡಲಾಗುತ್ತಿದ್ದು, ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಹಿರಿಯ ನಾಗರಿಕರ ಮಾಹಿತಿ ನೀಡದ ಪರಿಣಾಮ ಕರ್ನಾಟಕದಲ್ಲಿ ಈ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದ್ದಾರೆ.
‘ಅನ್ನಪೂರ್ಣ ಯೋಜನೆ’ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಾಗಿದೆ. ಕರ್ನಾಟಕದಲ್ಲಿರುವ ಹಿರಿಯ ನಾಗರಿಕರ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದರೆ ಈ ಯೋಜನೆ ಕರ್ನಾಟಕದಲ್ಲಿಯೂ ಜಾರಿಯಾಗಿ ಹಲವರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಾರೆ.
ಇನ್ನು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತಲಾ ೧೦ ಕೆ. ಜಿ. ಅಕ್ಕಿ ನೀಡುವ ಭರವಸೆ ನೀಡಿತ್ತು. ಆದರೆ ಕೇಂದ್ರದಿಂದ ಅಕ್ಕಿ ಪೂರೈಕೆಯಾಗದ ಪರಿಣಾಮ ೧೦ ಕೆ. ಜಿ. ಅಕ್ಕಿಯ ಬದಲು ೫ ಕೆ. ಜಿ. ಅಕ್ಕಿ ನೀಡುತ್ತಿದ್ದು, ಉಳಿದ ೫ ಕೆ. ಜಿ. ಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಸದ್ಯ ರಾಜ್ಯದಲ್ಲಿ ತಲಾ ೧೦ ಕೆ. ಜಿ. ಅಕ್ಕಿ ಪೂರೈಕೆ ಮಾಡಲು ೪೮ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯವಿದ್ದು, ರಾಜ್ಯದಲ್ಲಿಯೇ ೫೦ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆಯಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜನರಿಗೆ ಉಚಿತವಾಗಿ ಅಕ್ಕಿ ನೀಡುವ ಇಚ್ಛಾಶಕ್ತಿ ಇದ್ದರೆ ನೇರವಾಗಿ ರೈತರಿಂದಲೇ ಅಕ್ಕಿ ಖರೀದಿಸಿ ಪೂರೈಕೆ ಮಾಡಬಹುದಲ್ಲವೇ? -ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.