ಭಾರತ್ ಸಂಚಾರ ನಿಗಮ ನಿಯಮಿತ ೨೦೨೪-೨೫ನೇ ಸಾಲಿನ ೩ನೇ ತ್ರೈಮಾಸಿಕದಲ್ಲಿ ೨೬೨ ಕೋಟಿ ರೂ. ಲಾಭಗಳಿಸಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಸಾಧನೆಯೇ ಸರಿ.
ಬಿಎಸ್ಎನ್ಎಲ್ ೧೭ ವರ್ಷಗಳ ನಂತರ ಲಾಭ ಗಳಿಸುವತ್ತ ಮುಖ ಮಾಡಿರುವುದು ಸಂತೋಷದ ವಿಚಾರ. ಬಿಎಸ್ಎನ್ಎಲ್ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಖಾಸಗಿ ದೂರ ಸಂಪರ್ಕ ಸಂಸ್ಥೆಗಳೊಂದಿಗೆ ಪೈಪೋಟಿ ನೀಡಲಾಗದೆ ನಿರಂತರವಾಗಿ ನಷ್ಟವನ್ನೇ ಅನುಭವಿಸಿದ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಮುಚ್ಚಿ ಹೋಗಬಹುದು, ನೌಕರರು ಕೆಲಸ ಕಳೆದುಕೊಳ್ಳಬಹುದು ಎಂಬ ಆತಂಕವಿತ್ತು. ಈ ಆತಂಕದಿಂದಲೇ ಸಾವಿರಾರು ನೌಕರರು ಸ್ವಯಂ ನಿವೃತ್ತಿಯನ್ನೂ ಪಡೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಕೆಲ ದೇಶೀಯ ಹಾಗೂ ವಿದೇಶಿ ಟೆಲಿಕಾಂ ಕಂಪೆನಿಗಳು ಬಿಎಸ್ಎನ್ಎಲ್ನ ನೆರವಿಗೆ ಧಾವಿಸಿದ ಪರಿಣಾಮ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದ್ದರಿಂದ ಬಿಎಸ್ಎನ್ಎಲ್ ಮರುಹುಟ್ಟು ಪಡೆಯುವಂತಾಯಿತು. ಬಿಎಸ್ಎನ್ಎಲ್ ಈಗ ಲಾಭ ಗಳಿಸುವತ್ತ ಮುನ್ನುಗ್ಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಕಂಪೆನಿಯನ್ನು ಕಟ್ಟಿಬೆಳೆಸಿದ ಸಿಬ್ಬಂದಿಗಳಿಗೆ ಅಭಿನಂದನೆಗಳು. -ಕೆ. ವಿ. ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು





