ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುಡುವ ಸ್ಮಶಾನದಲ್ಲಿ ಚಾವಣಿ ಹಾಳಾಗಿದ್ದು, ಮಳೆ ಬಂದರೆ ಸುಡುವ ಸ್ಥಳದಲ್ಲಿ ನೀರು ಸುರಿದು ರಾಡಿಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರನ್ನು ಕೇಳಿದರೆ ಟೆಂಡರ್ ಆಗಬೇಕು, ವರ್ಕ್ ಆರ್ಡರ್ ಸಿಗಬೇಕು ಎಂದು ಸಬೂಬು ಹೇಳುತ್ತಾರೆ. ಮಹಾನಗರ ಪಾಲಿಕೆಯವರು ಸ್ಮಶಾನ ಅಭಿವೃದ್ಧಿಗೆಂದು ಪ್ರತಿಮನೆಯಿಂದ ವಾರ್ಷಿಕ ೧೫೦ರೂ. ಗಳನ್ನು ಸಂದಾಯ ಮಾಡಿಸಿಕೊಳ್ಳುತ್ತಾರೆ. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ೫೦೦ ರೂ . ಶುಲ್ಕವನ್ನೂ ನಿಗದಿಪಡಿಸಿದ್ದಾರೆ. ಆದರೆ ಸ್ಮಶಾನದಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಯನ್ನು ಒದಗಿಸದಿದ್ದರೆ ಏನು ಪ್ರಯೋಜನ? ಈ ಕೂಡಲೇ ನಗರಪಾಲಿಕೆ ಆಯುಕ್ತರು, ಜನನ ಮರಣ ವಿಭಾಗದ ಅಧಿಕಾರಿಗಳು ಸ್ಮಶಾನಕ್ಕೆ ಭೇಟಿಕೊಟ್ಟು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ.
-ಅಜಯ್ ಶಾಸ್ತ್ರಿ, ಮೈಸೂರು





