ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯರು ಆ ಸಮಾಜ, ಸಂತತಿಯಿಂದ ರೂಪುಗೊಂಡ ಮನಸ್ಥಿತಿಯವರೇ ಆಗಿರುತ್ತಾರೆ. ಹೀಗೆ ತರಬೇತಿಗೊಂಡವರಲ್ಲಿ ಕೆಲವರು ಸಮಾಜ–ಸಂಸ್ಕೃತಿಯ ಆಜ್ಞಾಪಾಲಕರಾಗಿರುತ್ತಾರೆ. ಮತ್ತೆ ಕೆಲವರು ತಾವು ಪಡೆದ ಶಿಕ್ಷಣದಿಂದಲೋ, ವಿವೇಕದಿಂದಲೋ, ಮನುಷ್ಯತ್ವದಿಂದಲೋ ಸಮಾಜದಲ್ಲಿನ ಒಳಿತು–ಕೆಡುಕುಗಳನ್ನು ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಂಡು ಜೀವಪರವಾಗಿ ಬದುಕುತ್ತಲೇ ಮಾನವೀಯ ಸಮಾಜವನ್ನು ಕಟ್ಟಲು ಬಯಸುತ್ತಾರೆ. ಈ ಹಾದಿಯಲ್ಲಿ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಚಿರಸ್ಥಾಯಿ.
ಜಾತಿ ಶ್ರೇಣೀಕೃತ ಭಾರತದಲ್ಲಿ ಶಿಕ್ಷಣದಿಂದ ಮಾತ್ರ ಎಲ್ಲ ಬದಲಾವಣೆಗಳನ್ನೂ ಜಾರಿಗೆ ತರಲು ಸಾಧ್ಯ ಎಂಬುದನ್ನು ನಾಲ್ವಡಿಯವರು ಅರಿತುಕೊಂಡಿದ್ದರು. ಅದಕ್ಕಾಗಿ ದೇಶದಲ್ಲೇ ಪ್ರಥಮವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಮೊದಲ ಘಟಿಕೋತ್ಸವದಲ್ಲಿ ಮಾತನಾಡುತ್ತಾ: ‘ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ, ಈ ವಿಶ್ವವಿದ್ಯಾನಿಲಯ ಇರುವುದು ಈ ದೇಶದ ಅಕ್ಷರ ವಂಚಿತ ಸಮುದಾಯಗಳಿಗೆ’ ಎಂಬುದು ನಾಲ್ವಡಿಯವರ ನುಡಿಯಾಗಿತ್ತು.
ಮೈಸೂರಿನಲ್ಲಿ ‘ಪಂಚಮ ಬೋರ್ಡಿಂಗ್ ಹೋಂ’ ಸಂಸ್ಥೆ, ಬುಡಕಟ್ಟು, ಅರಣ್ಯವಾಸಿಗಳಿಗೆ ಶಾಲೆ, ಅಸ್ಪೃಶ್ಯರಿಗಾಗಿ ಹುಸ್ಕೂರು ಹಾಗೂ ನರಸೀಪುರದಲ್ಲಿ ಶಾಲೆ, 1902– ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯ ಶಾಲೆ, 1903– ಮೈಸೂರಿನಲ್ಲಿ ತಾಂತ್ರಿಕ ಶಾಲೆ, 1911ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭಿಸಿದ್ದು ಕೂಡ ನಾಲ್ವಡಿ ಅವರೇ.
1913ರಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೊಳಿಸಿದರು. ಈ ಕಾಯ್ದೆ ಪ್ರಕಾರ 7ರಿಂದ 12 ವರ್ಷ ವಯಸ್ಸಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ನೇಮಕ ಮಾಡುವುದು ನಿಷೇಧವಾಯಿತು. ದೇಶದ ಪ್ರಥಮ ವೈದ್ಯಕೀಯ ಶಾಲೆ ತೆರೆದರು. ಇದೇ ಶಾಲೆ 1924ರಲ್ಲಿ ‘ಮೆಡಿಕಲ್ ಕಾಲೇಜ್’ ಆಗಿ ಪರಿವರ್ತನೆಗೊಂಡಿತು.
ಒಡೆಯರ್ ಅವರು 1918ರಲ್ಲಿ ಶಾಲಾ ಪ್ರವೇಶದಲ್ಲಿ ಜಾತಿಪದ್ಧತಿ ಯನ್ನು ನಿರ್ಮೂಲನೆ ಮಾಡಿ ಪಂಚಮರ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ತೆರೆದದ್ದು ವರ್ಣಸಂಕರಕ್ಕೆ ಮುನ್ನುಡಿ ಎನ್ನಬಹುದು. ಪಂಚಮರ ಮಕ್ಕಳಿಗೆ ಶಾಲೆಗೆ ಶುಲ್ಕರಹಿತ ಪ್ರವೇಶ ನೀಡಿದರು. ಕುರುಡು, ಮೂಕ ಮಕ್ಕಳಿಗೆ ಶಾಲೆಗಳನ್ನು ತೆರೆಯುವ ಮೂಲಕ ಕಣ್ಣಿಲ್ಲದವರಿಗೆ ದಿಕ್ಕಾಗಿದ್ದವರು, ಬಾಯಿಲ್ಲದವರಿಗೆ ಧ್ವನಿಯಾದವರು ಒಡೆಯರ್.
ಸರ್ಕಾರಿ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾನೂನಿನ ಮೂಲಕವೇ ಜಾರಿಗೊಳಿಸಿದರು. 1902ರಲ್ಲಿ ಸೇವಾ ಇಲಾಖೆಗಳ ಉದ್ಯೋಗದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಸಮುದಾಯಗಳಿಗೆ ಪ್ರಾತಿನಿಧ್ಯ ಇಲ್ಲದ್ದನ್ನು ಕಂಡು ಶಿರಸ್ತೆದಾರ್ ಮತ್ತು ಅಮಲ್ದಾರರ ಹುದ್ದೆಗಳ ನೇಮಕಾತಿಯಲ್ಲಿ ಬ್ರಾಹ್ಮಣೇತರರ ನೇಮಕಾತಿಗೆ ಕಡಿಮೆ ಅರ್ಹತೆಗಳನ್ನು ನಿಗದಿ ಮಾಡಿದರು. ಅದಕ್ಕಾಗಿ ಮಿಲ್ಲರ್ ಕಮಿಷನ್ ನೇಮಿಸಿ, ಎಲ್ಲ ಸಮುದಾಯಗಳಿಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಿದರು.
ಈ ಸಂದರ್ಭದಲ್ಲಿ ದಿವಾನರಾದ ವಿಶ್ವೇಶ್ವರಯ್ಯ ಅವರು ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆ ಹಾಳಾ ಗುತ್ತದೆ ಎಂದು ವಾದಿಸಿದರು. ಈ ಕಾರಣಕ್ಕಾಗಿ ತಮ್ಮ ದಿವಾನ ಹುದ್ದೆಗೆ ರಾಜೀನಾಮೆ ನೀಡಿದರು. ನಾಲ್ವಡಿಯವರು ಧೃತಿಗೆಡದೆ 1917ರಲ್ಲಿ ‘ಪ್ರಜಾಮಿತ್ರ ಮಂಡಲಿ’ಯನ್ನು ಸ್ಥಾಪಿಸಿ ದಮನಿತ ಸಮುದಾಯಗಳಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಿದರು. 1921ರಲ್ಲಿ ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೂ ಶೇ.75ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ನಾಲ್ವಡಿಯವರು ಹಿಂದುಳಿದ, ಅಸ್ಪೃಶ್ಯ ಸಮುದಾಯಗಳಲ್ಲೇ ದಕ್ಷತೆಯನ್ನು ಬೆಳೆಸಿ, ಸಮರ್ಥವಾಗಿ ಆಡಳಿತವನ್ನು ರೂಪಿಸಬಹುದು ಎಂಬುದನ್ನು ಕ್ರಿಯೆಯ ಮೂಲಕ ತೋರಿಸಿಕೊಟ್ಟರು.
ಅಸ್ಪೃಶ್ಯ, ಹಿಂದುಳಿದ ಜಾತಿಗಳು ಆರ್ಥಿಕವಾಗಿ ಸುಧಾರಣೆಗೊಂಡಾಗ ಮಾತ್ರ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಮನಗಂಡು, 1905ರಲ್ಲಿ ಸಹಕಾರ ಸೊಸೈಟಿಗಳ ಕಾಯ್ದೆ ಜಾರಿಗೊಳಿಸಿ ಸಾಲ ಸೌಲಭ್ಯ ಕಲ್ಪಿಸಿದರು. ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಭೂ ಅಭಿವೃದ್ಧಿ ಬ್ಯಾಂಕ್… ಹೀಗೆ ಅನೇಕ ಸಹಕಾರ ಬ್ಯಾಂಕ್ಗಳನ್ನು ಬಡವರ ಏಳ್ಗೆಗಾಗಿ ಪ್ರಾರಂಭಿಸಿದರು. ಈ ರೈತರನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿ ದ್ದನ್ನು ಕಂಡು 1928ರಲ್ಲಿ ‘ಕೃಷಿ ಸಾಲ ಮನ್ನಾ ಕಾಯ್ದೆ’ ಜಾರಿಗೆ ತಂದರು. ಈ ಕಾನೂನಿನಿಂದ ನಿರ್ಗತಿಕರ ಭೂಮಿಯ ಒಡೆತನ ಉಳಿಯುವಂತೆ ಮಾಡಿದರು. ಬಡ ರೈತರ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕನ್ನಂಬಾಡಿ (ಕೆಆರ್ಎಸ್), ಮಾರೀಕಣಿವೆ, ಅಂಜನಾಪುರ ಜಲಾಶಯ, ಭೀಮನಹಳ್ಳಿ ಜಲಾಶಯ, ಮಾರ್ಕೋನ ಹಳ್ಳಿ ಜಲಾಶಯ, ಗೋಪಾಲಪುರದ ಜಲಾಶಯ, ನೆಲ್ಲೀಗೆರೆ ಜಲಾಶಯ ಮುಂತಾದವು ಗಳಿಗೆ ಅಣೆಕಟ್ಟೆಯನ್ನು ಕಟ್ಟಿಸಿದರು.
ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾಣ ವೆಚ್ಚ ಅಂದಾಜು 2 ಕೋಟಿ 73 ಲಕ್ಷ ರೂ.ಗಳಷ್ಟು. ಹಣದ ಕೊರತೆಯಾಗಿತ್ತು. ಆಗ ತಮ್ಮ ತಾಯಿಯವರ ಸಲಹೆಯಂತೆ ಒಡೆಯರ್ ತಮ್ಮದೇ ಆದ ಖಾಸಗಿ ಭಂಡಾರದಿಂದ 4 ಮೂಟೆ ರತ್ನಾಭರಣಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಿದ ಉದಾಹರಣೆ ಇದೆ. ರಾಜ ಪರಂಪರೆಯಲ್ಲಿ ಹುಟ್ಟಿದ ನಾಲ್ವಡಿಯವರು ಜನರ ಬದುಕಿಗೆ ಜೀವನದಿಯಾದ ಸಾಕಷ್ಟು ಕಥನಗಳಿವೆ.
ಕೈಗಾರಿಕಾ ಅಭಿವೃದ್ಧಿಯಿಂದ ನಾಡಿನ ಪ್ರಗತಿ ಸಾಧ್ಯ ಎಂಬುದನ್ನು ಅರ್ಥಮಾಡಿಕೊಂಡ ಒಡೆಯರ್ ಅವರು ಭದ್ರಾವತಿಯಲ್ಲಿ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1934ರಲ್ಲಿ ಮಂಡ್ಯದಲ್ಲಿ ಸಕ್ಕರೆ ಕಂಪೆನಿ, 1936ರಲ್ಲಿ ಮೈಸೂರು ಪೇಪರ್ ಮಿಲ್ಸ್, ಮಂಗಳೂರಿನ ಹೆಂಚು ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಸೇರಿ ಹಲವಾರು ಕಾರ್ಖಾನೆಗಳ ಹುಟ್ಟಿಗೆ ಕಾರಣರಾದರು.
ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ನಾಡು–ನುಡಿಗೆ ಉಸಿರಾದರು. ಸಮಾಜಮುಖಿ ಕಾನೂನುಗಳನ್ನು ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿಯಾಗಿ ರೂಪಿಸಿದ ನಾಲ್ವಡಿಯವರನ್ನು ವಿದೇಶಿಯ ವಿದ್ವಾಂಸರುಗಳು, ಶಿಕ್ಷಣ ತಜ್ಞರು ಹಾಗೂ ಇತಿಹಾಸಕಾರರು ‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿರುವುದು ಸೂಕ್ತವಾಗಿದೆ. ಇವರ ಎಲ್ಲ ಸಾಧನೆಗಳನ್ನೂ ಗಮನಿಸಿದ ಇಂಗ್ಲೆಂಡ್ನ ಗ್ರಾಫಿಕ್ ಎಂಬ ಪತ್ರಿಕೆ 1906ನೇ ಮಾರ್ಚ್ 10ರ ಸಂಚಿಕೆಯಲ್ಲಿ; “ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ಯಾವ ಭಾರತೀಯ ಸಂಸ್ಥಾನಕ್ಕೂ ಅರ್ಹತೆ ಇಲ್ಲ” ಎಂದು ಪ್ರಶಂಸಿಸಿದೆ. ಈ ದೇಶದ ನಿಜ ಚರಿತ್ರೆಯನ್ನು ತಡವಾಗಿ ಅರ್ಥೈಸಿಕೊಂಡ ಮಹಾತ್ಮ ಗಾಂಧಿಜಿಯವರು ನಾಲ್ವಡಿಯವರನ್ನು ‘ರಾಜರ್ಷಿ’ ಎಂದು ಕರೆದದ್ದು ಅರ್ಥಪೂರ್ಣವಾಗಿದೆ.
(ಲೇಖಕರು, ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಶರಾವತಿ ಪ್ರಥಮ ದರ್ಜೆ ಕಾಲೇಜು, ಕೋಣಂದೂರು, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ)