Mysore
20
scattered clouds

Social Media

ಗುರುವಾರ, 16 ಜನವರಿ 2025
Light
Dark

ನಾಲ್ಕು ದಿಕ್ಕಿನಿಂದ : 25 ಸೋಮವಾರ 2022

ಪೌರಕಾರ್ಮಿಕ ಗುಬ್ಬಿಯ ಮೇಲೆ ಮೋದಿ ಪೋಸ್ಟರ್ ಬ್ರಹ್ಮಾಸ್ತ್ರ!

ಪೌರಕಾರ್ಮಿಕ ಬಾಬ್ಬಿ ಅವರು ಎಂದಿನಂತೆ ಉತ್ತರಪ್ರದೇಶದ ಮಥುರಾ ಬೀದಿಯಲ್ಲಿ ಬಿದ್ದಿದ್ದ ಕಸವನ್ನು ತಳ್ಳುಗಾಡಿಗೆ ತುಂಬುತ್ತಿದ್ದರು. ಅವರು ತುಂಬುವಾಗ ಕಸದೊಳಗೆ ಪ್ರಧಾನಿ ಮೋದಿ ಅವರ ಹರಿದುಬಿದ್ದ ಕೆಲವು ಪೋಸ್ಟರ್‌ಗಳೂ ಇದ್ದವಂತೆ!. ಅದು ಬಾಬ್ಬಿ ಅವರಿಗೆ ಗೊತ್ತಿರಲಿಲ್ಲ. ಅಷ್ಟಕ್ಕೂ ಕಸದೊಳಗೆ ಬಿದ್ದ ಪೋಸ್ಟರ್‌ನಲ್ಲಿ ಯಾರ ಚಿತ್ರ ಇದೆ ಎಂದು ಎತ್ತಿ ನೋಡಲಾದೀತೆ? ಆದರೆ, ಅಲ್ಲಿದ್ದ ಯಾರೋ ವ್ಯಕ್ತಿಯೊಬ್ಬ ಇದನ್ನು ವಿಡಿಯೋ ಮಾಡಿ ಸೋಷಿಯಲ್ ಮಿಡೀಯಾದಲ್ಲಿ ಹರಿಬಿಟ್ಟ. ವೈರಲ್ಲಾಯಿತು. ಕೇಳಬೇಕೆ? ಮೋದಿ ಭಕ್ತರು ಹರಿಹಾಯ್ದರು. ಪರಿಸ್ಥಿತಿ ಎಲ್ಲಿವರೆಗೆ ಹೋಯಿತೆಂದರೆ, ಗುತ್ತಿಗೆ ಆಧಾರದಲ್ಲಿದ್ದ ಬಾಬ್ಬಿ ಅವರನ್ನು ಅಮಾನತು ಮಾಡಲಾಯಿತು. ಬಾಬ್ಬಿ, ತಾವು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ , ತಪ್ಪಾಯಿತು ಎಂದರೂ ಕೇಳದೆ ಅಮಾನತು ಮಾಡಲಾಯಿತು. ಅಮಾನತು ಮಾಡಿದ ನಿರ್ಧಾರವು ಅತ್ಯಂತ ಮೂರ್ಖತನದ್ದು ಎಂಬರ್ಥದಲ್ಲಿ ಟೀಕೆಗಳು ವ್ಯಕ್ತವಾದವು. ಟೀಕೆ ವ್ಯಕ್ತವಾಗುತ್ತಿದ್ದಂತೆ ಬಾಬ್ಬಿ ಅವರ ಅಮಾನತು ರದ್ದು ಮಾಡಲಾಗಿದೆ. ಹಿರಿಯ ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಅವರು ಟೈಮ್ಸ್ ಆಫ್ ಇಂಡಿಯಾದ ತಮ್ಮ ‘ಸ್ವಾಮಿನಾಮಿಕ್ಸ್’ ಅಂಕಣದಲ್ಲಿ ಈ ಘಟನೆಯನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ. ಆಸಕ್ತರು ಓದಬಹುದು!


 

ಸ್ಮೃತಿ ಇರಾನಿ ಪುತ್ರಿಯ ಮೇಲೆ ಅಕ್ರಮ ಬಾರ್ ತೆರೆದ ಆರೋಪ!

ಗೋವಾದ ಅಸಗಾವ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಸ್ಮೃತಿ ಇರಾನಿ ಪುತ್ರಿ ತಾವು ರೆಸ್ಟೊರೆಂಟ್ ನಡೆಸುತ್ತಿರುವುದಾಗಿ ಖುದ್ಧು ತಮ್ಮ ರೆಸ್ಟೋರೆಂಟ್ ಆವರಣದಲ್ಲಿ ಖಾಸಗಿ ಟಿವಿಯ ಊಟೋಪಚಾರದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವ ಆರೋಪದ ಪ್ರಕಾರ, ಸ್ಮೃತಿ ಇರಾನಿ ಪುತ್ರಿಯು ಬಾರ್ ನಡೆಸಲು ಅಬಕಾರಿ ಇಲಾಖೆಯಿಂದ ಅಕ್ರಮವಾಗಿ ಅನುಮತಿ ಪಡೆದಿದ್ದಾರೆ. ಪಡೆದಿರುವ ಅನುಮತಿ ಕ್ರಮಬದ್ಧವಾಗಿಲ್ಲ. ಆದ್ದರಿಂದ ಸ್ಮೃತಿ ಇರಾನಿ ಅವರ ರಾಜಿನಾಮೆ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್ ಆರೋಪದಿಂದ ಕೆರಳಿ ಕೆಂಡವಾಗಿರುವ ಸಚಿವೆ ಸ್ಮೃತಿ ಇರಾನಿ ಅವರು, ಕಾಲೇಜು ಓದುತ್ತಿರುವ ನನ್ನ ಮಗಳ ಮೇಲೆ ಕಾಂಗ್ರೆಸ್‌ನ ಮಧ್ಯವಯಸ್ಸಿನ ಇಬ್ಬರು ವ್ಯಕ್ತಿಗಳು ಆರೋಪ ಮಾಡಿ ಮಗಳ ಹೆಸರಿಗೆ ಕಳಂಕ ತಂದಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧ ನಾನು ಮಾತನಾಡುತ್ತಿರುವುದಕ್ಕೆ ಸೇಡಿನ ಕ್ರಮವಾಗಿ ನನ್ನ ಮಗಳ ವಿರುದ್ಧ ಆರೋಪ ಮಾಡಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ. ಯಾರ ಮಾತು ಸತ್ಯವೋ? ಯಾರ ಮಾತು ಸುಳ್ಳೋ?


ಟಿಎಂಸಿ ಸಚಿವರ ಆಪ್ತೆಯ ಬಳಿ ಕೋಟಿ ಕೋಟಿ!

ಪಶ್ಚಿಮ ಬಂಗಾಳದ ಕ್ಯಾಬಿನೆಟ್ ಸಚಿವ ಮತ್ತು ಟಿಎಂಸಿ ಮಹಾಪ್ರಧಾನಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಅವರನ್ನು ಬಂಧಿಸುವ ಮುನ್ನ ಸುಧೀರ್ಘ ೨೦ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಪಾರ್ಥ ಅವರ ಬಂಧನಕ್ಕೆ ಕಾರಣ, ಅವರ ಆಪ್ತೆಯಾದ ಅರ್ಪಿತಾ ಮುಖರ್ಜಿ. ಒಂದು ಕಾಲದಲ್ಲಿ ಮಾಡೆಲ್, ಉಗುರು ಕಲಾವಿದೆ, ನಟಿಯಾಗಿದ್ದ ಅರ್ಪಿತ ಅವರ ಮನೆಯಲ್ಲಿ ಸುಮಾರು ೨೦ ಕೋಟಿ ರೂಪಾಯಿ ನಗದನ್ನು ಇಡಿ ವಶಪಡಿಸಿಕೊಂಡಿದೆ. ನಗದಿನ ಜತೆಗೆ ೭೫ಲಕ್ಷ ಮೌಲ್ಯದ ಆಭರಣ ಮತ್ತು ಒಂದಷ್ಟು ವಿದೇಶಿ ಕರೆನ್ಸಿಗಳು ಸೇರಿವೆ. ಈ ನಗದು ಪಾರ್ಥ ಚಟರ್ಜಿಗೆಗೆ ಸೇರಿರಬಹುದು ಎಂಬುದು ಇಡಿ ಲೆಕ್ಕಾಚಾರ. ಈ ನಡುವೆ ಬಿಜೆಪಿ, ಪಶ್ಚಿಮಬಂಗಾಳದಲ್ಲಿ ಮತ್ತಷ್ಟು ಬಂಧನಗಳಾಗಲಿವೆ ಎಂದು ಭವಿಷ್ಯ ನಡಿದಿದೆ. ಟಿಎಂಸಿ ಮಾತ್ರ, ಥೇಟು ಸಚಿವೆ ಸ್ಮೃತಿ ಇರಾನಿ ರೀತಿಯಲ್ಲೇ ಆರೋಪವನ್ನು ಅಲ್ಲಗಳೆದಿದೆ. ಅರ್ಪಿತಾ ಮುಖರ್ಜಿಗೂ ಟಿಎಂಸಿಗೂ ಯಾವುದೇ ಸಂಬಂಧ ಇಲ್ಲ ಎಂದೂ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ. ಬಿಜೆಪಿ ಹೇಳಿರುವಂತೆ ಇಡಿ ಮತ್ತಷ್ಟು ಟಿಎಂಸಿ ನಾಯಕರನ್ನು ಬಂಧಿಸುವುದು ಖಚಿತ!


ಮೇಘಾಲಯ ಬಿಜೆಪಿ ನಾಯಕನ ತೋಟದಮನೆಯಲ್ಲಿ ವೇಶ್ಯಾವಾಟಿಕೆ

ಮೇಘಾಲಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬೆರ್ನಾರ್ಡ್ ಎನ್ ಮರಕ್ ರಿಂಪು ತುರದಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದುದನ್ನು ಪೋಲೀಸರು ಪತ್ತೆ ಹಚ್ಚಿದ್ದು, ಅಲ್ಲಿದ್ದ ೭೩ ಜನರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಬಂಧಿಸಲ್ಪಟ್ಟಿದ್ದ ನಾಲ್ವರು ಬಾಲಕರು ಮತ್ತು ಒಬ್ಬ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಪ್ ಪೊಲೀಸ್ ವಿ ಎಸ್ ರಾಥೋಡ್ ಹೇಳಿದ್ದಾರೆ. ಐವರು ಅಪ್ತಾಪ್ತರನ್ನು ಕೊಳಕಾದ ಕೋಣೆಯೊಂದರಲ್ಲಿ ಬಂಧಿಸಿಡಲಾಗಿತ್ತು. ಅವರು ಆಘಾತಕ್ಕೆ ಒಳಗಾಗಿ ಮಾತನಾಡಲು ಅಸಮರ್ಥರಾಗಿದ್ದರು, ಅವರನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶ ನೀಡಲಾಗಿದೆ. ವೆಶ್ಯಾವಾಟಿಕೆಗೆ ಅಪ್ರಾಪ್ತರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಪೊಲೀಸರ ಆರೋಪ. ಈ ಪ್ರಕರಣಕ್ಕೆ ರಾಜಕೀಯ ತಿರುವು ನೀಡಲು ಮೇಘಾಲಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬೆರ್ನಾರ್ಡ್ ಎನ್ ಮರಕ್ ರಿಂಪು ಮುಂದಾಗಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಸಾಂಗ್ಮ ಮತ್ತು ಎನ್ ಪಿಪಿ ಪಕ್ಷದ ರಾಜಕೀಯ ಸಂಚಿನಿಂದ ನನ್ನ ಮೇಲೆ ಆರೋಪ ಹೊರೆಸಲಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಬಿಜೆಪಿ ವರಿಷ್ಠ ನಾಯಕರಿಗೆ ತಿಳಿಸಿದ್ದೇನೆ ಎಂದೂ ಬೆನಾರ್ಡ್ ಹೇಳಿಕೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ