ಹೊಸ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಮಂಡಿಸಿದ ಮುಂಗಡ ಪತ್ರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಿಲ್ಲೊಂದು ಕೊಡುಗೆ ನೀಡಿದ್ದಾರೆ. ಕನ್ನಡ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಅವರ ಅವಧಿಯಲ್ಲಾಯಿತು (ಈಗ ಜಿಎಸ್ಟಿ ಜಾರಿಗೆ ಬಂದ ನಂತರ ಅದಿಲ್ಲ). ಪರಭಾಷಾ ಚಿತ್ರಗಳಿಗೆ ಮೊದಲು ಇದ್ದ ಶೇ.110ನ್ನು ಶೇ.70ಕ್ಕೆ ಇಳಿಸಿ, ನಂತರ ಶೇ.40ಕ್ಕೆ ಇಳಿಸಲಾಯಿತು. ಪ್ರದರ್ಶನ ಕಂಡ ಪರಭಾಷಾ ಚಿತ್ರಗಳ ಮನರಂಜನಾ ತೆರಿಗೆ ಸರಿಯಾಗಿ ಪಾವತಿ ಆಗುತ್ತಿಲ್ಲ; ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಿ, ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದ್ದಾಗಿ ಬಹುತೇಕ ಈ ಚಿತ್ರಮಂದಿರಗಳು ವರದಿಕೊಟ್ಟು, ಸಂಗ್ರಹಿಸಿದ ತೆರಿಗೆಯನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತವೆ ಎಂಬುದಾಗಿ ವಿಧಾನಮಂಡಲದ ವಿಷಯ ಸಮಿತಿ ವರದಿ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ತೆರಿಗೆಯನ್ನೇ ಇಳಿಸಿದ್ದರು.
ಕನ್ನಡ ಚಿತ್ರರಂಗದ ವಜ್ರಮಹೋತ್ಸವ ವರ್ಷ (1993-34)ದಲ್ಲಿ ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಅಧ್ಯಕ್ಷತೆಯ ತಜ್ಞರ ಸಮಿತಿ, ಕನ್ನಡ ಚಿತ್ರರಂಗದ ಕಾಯಕಲ್ಪಕ್ಕಾಗಿ ಸಮಗ್ರ ಅಧ್ಯಯನ ನಡೆಸಿ ನೀಡಿದ ಶಿಫಾರಸುಗಳಲ್ಲಿ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯೂ ಸೇರಿತ್ತು. ಸಿದ್ದರಾಮಯ್ಯ ಅವರು 1995-96ರ ಮುಂಗಡಪತ್ರದಲ್ಲಿ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಅದರ ಅಧ್ಯಕ್ಷರು ಯಾರು ಆಗಬೇಕು ಎಂಬ ಚರ್ಚೆಯ ಕಾರಣದಿಂದ ಅದು ನನೆಗುದಿಗೆ ಬಿತ್ತು. ನಂತರ ಚಿತ್ರರಂಗದ ವಜ್ರಮಹೋತ್ಸವದ ವೇಳೆಗೆ ಅಕಾಡೆಮಿಯ ಸ್ಥಾಪನೆ ಆಯಿತು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಧಿಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಮೀನನ್ನು 2015ರಲ್ಲೇ ಕಾಯ್ದಿರಿಸಲಾಗಿತ್ತು. ಅವರ ಅವಧಿ ಮುಗಿಯುವುದರ ಒಳಗೆ ಅಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎನ್ನುವ ಮಾತೂ ಇತ್ತು. ಅದಾಗಲಿಲ್ಲ. ಕರ್ನಾಟಕದ ಚಿತ್ರನಗರಿ ಸ್ಥಾಪನೆಯ ಯೋಜನೆಗೆ ಐವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. 1972ರಲ್ಲೇ, ಇದಕ್ಕಾಗಿ ಬೆಂಗಳೂರಿನ ಹೆಸರಘಟ್ಟ ಬಳಿ ಕಾದಿರಿಸಿದ ಜಾಗದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು ಚಿತ್ರನಗರಿಗೆ ಅಡಿಗಲ್ಲು ಹಾಕಿದ್ದರು. ಮೂರು ಹಂತಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ನೀಲಿನಕ್ಷೆಯೂ ಸಿದ್ಧ ವಾಗಿತ್ತು. ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆ ಯಲ್ಲಿ ಇದು ಕಾರ್ಯಸಾಧ್ಯವಾಗಬೇಕಿತ್ತು.
ಇಮ್ಮಾವಿನಲ್ಲಿ ಶಂಕುಸ್ಥಾಪನೆಯನ್ನು ಮುಂದೆ ಬಂದ ಸರ್ಕಾರ ಮಾಡುತ್ತದೆ ಎನ್ನುವ ನಂಬಿಕೆಯನ್ನು ಹುಸಿ ಮಾಡಿದ್ದು, ನಂತರ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರ ಯೋಚನೆಗಳು. ಮೈಸೂರಿನಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ಸಹಸ್ರಾರು ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ ಎಂದರು ಅವರು. ಚಿತ್ರನಗರಿಯನ್ನು ಮೈಸೂರಿನ ಬದಲು ರಾಮನಗರದಲ್ಲಿ ಸ್ಥಾಪಿಸುವುದಾಗಿ ಹೇಳಿದರು. ಅಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ಕೂಡ ಆರಂಭಿಸುವ ಮಾತುಗಳನ್ನಾಡಿದರು.
ಮಾಧ್ಯಮಗಳಿಗೆ ಒಳ್ಳೆಯ ವಿಷಯ. ಬೆಂಗಳೂರು, ಮೈಸೂರುಗಳಿಂದ ಈಗ ರಾಮನಗರದತ್ತ ಹೊರಳಿತ್ತು ಚಿತ್ರನಗರಿಯ ಯೋಜನೆ. ಕುಮಾರ ಸ್ವಾಮಿಯವರ ನಂತರ ಬಂದ ಯಡಿಯೂರಪ್ಪ ಅವರ ಗಮನವೂ ಈ ಯೋಜನೆಯತ್ತ ಹೆಚ್ಚು ಇದ್ದಂತೆ ಇರಲಿಲ್ಲ. ಸಿನಿಮಾ ಮೊದಲ ಆದ್ಯತೆ ಏನೂ ಅಲ್ಲವಲ್ಲ! ಅದೂ ಅಲ್ಲದೆ, ವಿಶ್ವವನ್ನೇ ಕಾಡಿದ ಕೊರೊನಾದ ಕಾರಣ ಆದ್ಯತೆಗಳು ಬದಲಾದವು. ಕಳೆದ ಅವಧಿಯಲ್ಲಿ (2018-23) ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಆದ ಕೆಲಸಗಳು ಕಡಿಮೆ. ‘ಇಲ್ಲ’ ಎಂದರೂ ತಪ್ಪೇನಿಲ್ಲ.
ಕನ್ನಡ ಮತ್ತು ಇಲ್ಲಿನ ಪ್ರಾದೇಶಿಕ ಚಿತ್ರಗಳಿಗೆ ತೆರಿಗೆ ವಿನಾಯಿತಿ, ಸಹಾಯ ಧನ ನೀಡಿಕೆ, ವಾರ್ಷಿಕ ಪ್ರಶಸ್ತಿಗಳು ಇವು ಸರ್ಕಾರದಿಂದ ಉದ್ಯಮಕ್ಕೆ ಸಿಗುವ ಸೌಲಭ್ಯಗಳು. ಹೊಸ ಸರ್ಕಾರ ಅಧಿಕಾರಕ್ಕೆ ಬರುವ ವೇಳೆಗಾಗಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ಕಾರಣದಿಂದ ಕನ್ನಡ ಚಿತ್ರಗಳಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇಲ್ಲದಾಯಿತು. ಕನ್ನಡ ಚಿತ್ರರಂಗಕ್ಕೆ ನೆರವಾಗಲು ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದಿತ್ತು. ಈ ನಿಟ್ಟಿನಲ್ಲಿ ಉದ್ಯಮದ ಬೇಡಿಕೆ ಇದ್ದರೂ ಅದು ಈಡೇರಲಿಲ್ಲ. ಕೆಲವು ರಾಜ್ಯಗಳಲ್ಲಿ ಮನರಂಜನೋದ್ಯಮ ನೀಡುವ ಈ ತೆರಿಗೆಯನ್ನು ಪುನಾ ಉದ್ಯಮಕ್ಕೆ ಹಿಂದಿರುಗಿಸಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
2018ರ ಸಾಲಿನ ಪ್ರಶಸ್ತಿಗಳನ್ನು ನಿರ್ಧರಿಸಲಾಗಿದೆ. ಆದರೆ ಅದಕ್ಕೆ ತಡೆಯಾಜ್ಞೆ ಇದೆ. ಸ್ಪರ್ಧೆಯಲ್ಲಿರುವ ಚಿತ್ರಗಳಿಗೆ ಸಂಬಂಧಪಟ್ಟವರು ಪ್ರಶಸ್ತಿ ಸಲಹಾ ಸಮಿತಿಯಲ್ಲಿ ಇರುವಂತಿಲ್ಲ ಎನ್ನುವ ನಿಯಮವಿದೆ. ಆದರೆ ಈ ಸಾಲಿನ ಸಮಿತಿ ಅದಕ್ಕೆ ಅಪವಾದವಾದ್ದರಿಂದ ಅದು ನ್ಯಾಯಾಲಯದ ಮೆಟ್ಟಿಲೇರಿದೆ. ಆ ವರ್ಷದ ಸಹಾಯಧನಕ್ಕೆ ಚಿತ್ರಗಳ ಆಯ್ಕೆಯಾಗಿ ಕೆಲವರಿಗೆ ಅದನ್ನು ನೀಡಲಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಆಗಿದೆ ಎನ್ನಲಾದ ಪ್ರಮಾದವೊಂದು ಇಲ್ಲಿಗೆ ತಡೆಯಾಗಿದೆ.
2019, 2020 ಮತ್ತು 2021ರ ಸಾಲಿನ ಸಹಾಯಧನಕ್ಕೆ ಚಿತ್ರಗಳ ಆಯ್ಕೆ ಆಗಬೇಕಾಗಿದೆ. ಈ ಸಾಲಿನ ಪ್ರಶಸ್ತಿಗಳು ಕೂಡ. 2022ರ ಸಾಲಿಗೆ ಪ್ರಶಸ್ತಿ ಮತ್ತು ಸಹಾಯಧನಕ್ಕಾಗಿ ಅರ್ಜಿಗಳನ್ನು ಇನ್ನಷ್ಟೇ ಕರೆಯಬೇಕಾಗಿದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಈ ಸರ್ಕಾರದಿಂದ ಕಾಯಕಲ್ಪವಾಗಲಿದೆ ಎನ್ನುವ ನಿರೀಕ್ಷೆ ಉದ್ಯಮದ್ದು.
ಹ್ಞಾಂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಂಕೇಶರ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ ಕಾಣಿಸಿಕೊಂಡದ್ದನ್ನು ಆ ಚಿತ್ರದ ನಿರ್ಮಾಣದಲ್ಲಿ ಜೊತೆಗಿದ್ದ ಮೋಹನ್ ಕುಮಾರ್ ಕೊಂಡಜ್ಜಿ ನೆನಪಿಸಿಕೊಳ್ಳುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಸಿನಿಮಾ ನಂಟಿದೆ. ಅವರು ಪ್ರದರ್ಶಕರು. ಆಳುವ ಪಕ್ಷದಲ್ಲಿರುವ ಶಾಸಕರಲ್ಲಿ ಮಧು ಬಂಗಾರಪ್ಪವನರು ಚಿತ್ರೋದ್ಯಮಿ. ನಟ, ನಿರ್ಮಾಪಕ, ಸ್ಟುಡಿಯೋ ಹಾಗೂ ಆಡಿಯೋ ಸಂಸ್ಥೆಯ ಮಾಲೀಕರು. ಅವರಿಗೆ ಚಿತ್ರರಂಗದ ಬೇಕು–ಬೇಡಗಳ ಬಗ್ಗೆ ಹೆಚ್ಚು ಅರಿವು, ಅನುಭವ ಇದೆ. ವಿರೋಧ ಪಕ್ಷಗಳಲ್ಲಿ ಚಿತ್ರೋದ್ಯಮಿಯಾಗಿಯೇ ವೃತ್ತಿಜೀವನ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.
ಅಂಬರೀಶ್ ಜನ್ಮದಿನೋತ್ಸವದ ಸಂದರ್ಭಕ್ಕೆ ಅವರ ಅಭಿನಯದ ‘ಅಂತ’ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಪುನಾ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತ್ಮೀಯರಾಗಿ ರುವ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆಯ ಕುರಿತ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಅವರ ಮಾತುಗಳು ಹೊರಳಿದ್ದು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ.
ಅದಕ್ಕೆ ಕಾರಣವೂ ಇದೆ ಎನ್ನಿ. ಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಜಾಗ, ಸಿದ್ಧತೆಗಳ ಹಿಂದೆ ಬಾಬು ಅವರೂ ಬೆನ್ನು ಹತ್ತಿದ್ದರು. ಅಷ್ಟೇ ಅಲ್ಲದೆ, ಅವರು ಆಗ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಕೆಲವು ತಿಂಗಳ ಹಿಂದೆ, ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಚಿತ್ರರಂಗದ ಗಣ್ಯರು ಭೇಟಿಯಾಗಿ, ಚಿತ್ರೋದ್ಯಮಕ್ಕೆ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಮಾಡುವಂತೆ ಕೋರಿದ್ದರು. ಮೈಸೂರಿನಲ್ಲಿ ಚಿತ್ರನಗರಿಯ ಕುರಿತಂತೆ ಪ್ರಸ್ತಾಪಿಸಿದಾಗ, ಇನ್ಯಾರೋ ಬಿಡದಿಯ ಬಳಿ ಚಿತ್ರನಗರಿ ಸ್ಥಾಪಿಸಲು ಯೋಜನೆ ಹಾಕಿರುವ ವರ್ತಮಾನವನ್ನೂ ಹೇಳಿದರು. ಒಂದು ರಾಜ್ಯದಲ್ಲಿ ಒಂದೇ ಚಿತ್ರನಗರಿ ಇರಬೇಕು ಎಂದೇನೂ ಇಲ್ಲ. ಕೆಲವು ರಾಜ್ಯಗಳಲ್ಲಿ ಎರಡೆರಡು ಚಿತ್ರನಗರಿಗಳಿವೆ.
ಕೊರೊನಾ ನಂತರ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಏಕಪರದೆಯ ಚಿತ್ರಮಂದಿರಗಳು ಮುಚ್ಚತೊಡಗಿವೆ. 1990ರ ದಶಕದ ಕೊನೆಯಲ್ಲಿ 1250ಕ್ಕೂ ಹೆಚ್ಚಿದ್ದ ಈ ಚಿತ್ರಮಂದಿರಗಳ ಸಂಖ್ಯೆ ಈಗ 500ರ ಆಜುಬಾಜಿನಲ್ಲಿದೆ. ಮಲ್ಟಿಪ್ಲೆಕ್ಸ್ಗಳ ಪ್ರವೇಶದರ ಮಧ್ಯಮ, ಕೆಳಮಧ್ಯಮ ವರ್ಗದ ಪ್ರೇಕ್ಷಕರ ಪಾಲಿಗೆ ಎಟಕುವಂತಿಲ್ಲ. ಒಟಿಟಿ ಮತ್ತಿತರ ತಾಣಗಳು ಸದಭಿರುಚಿಯ ಕನ್ನಡ ಚಿತ್ರಗಳ ಪಾಲಿಗೆ ವರವಾಗಿಲ್ಲ.
ಚಿತ್ರನಗರಿಯ ಯೋಜನೆಯನ್ನು ಮೊದಲು ಕನಸಿದ್ದು ಮೈಸೂರು ರಾಜ್ಯ. 1972ರಲ್ಲಿ. 1973 ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದಾಯಿತಷ್ಟೇ. ಕರ್ನಾಟಕ ರಾಜ್ಯವಾಗಿ ಇದೀಗ ಸುವರ್ಣ ಮಹೋತ್ಸವ ವರ್ಷ. ಐದು ವರ್ಷಗಳಿಗೆ ಎಂದು ಪ್ರಕಟವಾದ ‘ಕರ್ನಾಟಕ ಚಲನಚಿತ್ರ ನೀತಿ -2011’, 2016ರ ವೇಳೆಗೆ ಬದಲಾಗಬೇಕಾಗಿತ್ತು.
ಪರಿಷ್ಕೃತ ನೀತಿಯ ಕರಡು ಆಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಳಿ ಇದೆ ಎನ್ನಲಾಗಿದ್ದು, ಒಂದಷ್ಟು ಬದಲಾವಣೆಗಳೊಂದಿಗೆ ಅದು ಜಾರಿಗೆ ಬರಬೇಕಾಗಿದೆ. ಚಿತ್ರನಗರಿ, ಚಿತ್ರಮಂದಿರಗಳ ನಿರ್ಮಾಣದಂತಹ ಯೋಜನೆಗಳನ್ನು ಸರ್ಕಾರವೇ ಕೈಗೆತ್ತಿಕೊಳ್ಳುವುದಾದರೆ ಪ್ರತ್ಯೇಕ ನಿಗಮದ ಸ್ಥಾಪನೆ ಆಗಬೇಕು ಎನ್ನುತ್ತಾರೆ ತಜ್ಞರು. ಈಗ ಬಹುತೇಕ ರಾಜ್ಯಗಳಲ್ಲಿ ಆಯಾ ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳಿವೆ. ಚಲನಚಿತ್ರ ಅಕಾಡೆಮಿ ಮತ್ತು ಚಲನಚಿತ್ರ ಅಭಿವೃದ್ಧಿ ನಿಗಮ ಎರಡೂ ನೆರೆಯ ಕೇರಳದಲ್ಲಿ ಇವೆ. ಅಲ್ಲಿ ಚಿತ್ರನಗರಿ ನಿರ್ವಹಣೆ, ಚಿತ್ರಮಂದಿರಗಳ ನಿರ್ಮಾಣ ಮುಂತಾದ ಜವಾಬ್ದಾರಿ ನಿಗಮದ್ದಾದರೆ, ಅಕಾಡೆಮಿಕ್ ಕೆಲಸಗಳನ್ನಷ್ಟೇ ಅಕಾಡೆಮಿ ನೋಡಿಕೊಳ್ಳುತ್ತಿದೆ.
ಸರ್ಕಾರ ಮೂವತ್ತು ವರ್ಷಗಳ ಹಿಂದೆ ಮಾಡಿದಂತೆ ಚಲನಚಿತ್ರ ರಂಗದ ಪರಿಣತರ ಸಮಿತಿಯೊಂದನ್ನು ರಚಿಸಿ, ಅದರ ಮೂಲಕ ಕನ್ನಡ ಚಿತ್ರೋದ್ಯಮದ ಇಂದಿನ ಬೇಕುಬೇಡಗಳ ಕುರಿತು ಸಮಗ್ರ ಅಧ್ಯಯನ ಮಾಡಿ, ಅದರ ಶಿಫಾರಸಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬಹುದು ಎನ್ನುವುದು ಸಂಬಂಧಪಟ್ಟವರ ಸಲಹೆ.