ಕೋಲಾರದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಆಡಿದ ಮಾತಿನಿಂದ ಮಾನಹಾನಿಯಾಗಿದೆ ಎಂದು ಗುಜರಾತಿನ ಬಿಜೆಪಿ ಶಾಸಕ ಸೂರತ್ನಲ್ಲಿ ದೂರು ನೀಡಿದ್ದು 2019ರ ಏಪ್ರಿಲ್ 16ರಂದು. ಆಗ ದವೆ ಎಂಬವರು ಮ್ಯಾಜಿಸ್ಟ್ರೇಟ್ ಆಗಿದ್ದರು. 2021ರ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡುತ್ತಾರೆ. ರಾಹುಲ್ ಹೇಳಿಕೆಯ ಸಾಕ್ಷ್ಯಗಳನ್ನು ಮಂಡಿಸಿ ರಾಹುಲ್ ಗಾಂಧಿ ಅವರನ್ನು ಪುನಃ ನ್ಯಾಯಾಲಯದ ಮುಂದೆ ಕರೆಯಬೇಕೆಂದು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ 2022ರ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯವನ್ನು ಕೋರುತ್ತಾರೆ. ನ್ಯಾಯಾಧೀಶ ದವೆ ಈ ಅರ್ಜಿಯನ್ನು ತಳ್ಳಿ ಹಾಕುತ್ತಾರೆ. ಈ ಬೆಳವಣಿಗೆಯ ನಂತರ ತಾವೇ ನಡೆಸಿದ್ದ ಖಟ್ಲೆಗೆ ಹೈಕೋರ್ಟಿನಿಂದ ತಡೆಯಾಜ್ಞೆ ತರುತ್ತಾರೆ ಪೂರ್ಣೇಶ್.
ಒಂದು ವರ್ಷ ಕಾಲ ತಣ್ಣಗೆ ಕುಳಿತಿದ್ದ ಪೂರ್ಣೇಶ್ ಇದೇ ಫೆಬ್ರವರಿ 16ರಂದು ಹಠಾತ್ತನೆ ಹೈಕೋರ್ಟ್ ಮುಂದೆ ಹೋಗುತ್ತಾರೆ. ಮೊಕದ್ದಮೆಗೆ ಅಗತ್ಯವಿರುವ ಸಾಕ್ಷ್ಯ ಪುರಾವೆಗಳು ಸಂಗ್ರಹವಾಗಿವೆಯೆಂದು ನಿವೇದಿಸಿಕೊಂಡು, ತಡೆಯಾಜ್ಞೆ ತೆರವು ಮಾಡಿಸುತ್ತಾರೆ. ಪೂರ್ಣೇಶ್ ಪುನಃ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಂದೆ ಸಕ್ರಿಯರಾಗುತ್ತಾರೆ. ಈ ನಡುವೆ ನ್ಯಾಯಾಧೀಶ ದವೆಯವರ ಸ್ಥಾನಕ್ಕೆ ನ್ಯಾಯಾಧೀಶ ಎಚ್.ಎಚ್.ವರ್ಮ ಬಂದಿರುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಶಿಕ್ಷೆಯ ತೀರ್ಪು ಪ್ರಕಟವಾಗುತ್ತದೆ.
ತಮ್ಮನ್ನು ನಿತ್ಯ ನಿರಂತರ ಎಡೆಬಿಡದೆ ಕಾಡುತ್ತಿರುವ ಕಾಂಗ್ರೆಸ್ ತಲೆಯಾಳು ರಾಹುಲ್ ಗಾಂಧಿಯವರನ್ನು ಮೋ–ಶಾ ಜೋಡಿ ಕಡೆಗೂ ಬಲೆಗೆ ಕೆಡವಿದೆ. ಸಂಸತ್ತಿನ ಸದಸ್ಯತ್ವ ಕಳೆದುಕೊಳ್ಳುವ ಜೊತೆಗೆ ಮುಂದಿನ ಎಂಟು ವರ್ಷಗಳ ಕಾಲ ಅವರು ಮತ ನೀಡುವಂತಿಲ್ಲ ಮತ್ತು ಚುನಾವಣೆಗೂ ಸ್ಪಂದಿಸುವಂತಿಲ್ಲ. ತಮ್ಮನ್ನು ದೀರ್ಘಕಾಲ ಸಂಸತ್ತಿನಿಂದ ಹೊರಗಿಡುವ ಈ ಬಲೆಯಲ್ಲೇ ರಾಹುಲ್ ಬಂಽಯಾಗುವರೇ ಅಥವಾ ಅದನ್ನು ಹರಿದೊಗೆದು ಹೊರಬೀಳುವರೇ ಎಂಬುದು ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.
ರಾಹುಲ್ ವಿರುದ್ಧ ಸೂರತ್ ನ್ಯಾಯಾಲಯದ ತೀರ್ಪು ಹೊರಬಿದ್ದಿರುವ ರಾಜಕೀಯ ಸಂದರ್ಭ ಅತ್ಯಂತ ಗುರುತರ. ಲೋಕಸಭೆಯಲ್ಲಿ ರಾಹುಲ್ ಭಾಷಣಗಳು ಆಳುವ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ನಂತರ ರಾಹುಲ್ ಆಕ್ರಮಣಕ್ಕೆ ಮತ್ತಷ್ಟು ಮೊನಚು ಮೂಡಿತ್ತು. ಅದಾನಿ–ಮೋದಿಯವರ ಸಂಬಂಧವನ್ನು ಸದನದಲ್ಲಿ ಪ್ರದರ್ಶಿಸಿದ್ದರು. ಅದಾನಿ ಷೇರು ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಆಗ್ರಹಿಸಿದ್ದರು. ಅದಾನಿ ಕುರಿತ ಯಾವ ಆಪಾದನೆಗಳಿಗೂ ಮೋದಿಯವರು ಸದನದಲ್ಲಿ ಉತ್ತರ ನೀಡಿರಲಿಲ್ಲ. ಜಂಟಿ ಸದನ ಸಮಿತಿಯ ಬೇಡಿಕೆ ಈಡೇರುವ ತನಕ ಸದನದ ಕಲಾಪವನ್ನು ಪ್ರತಿಪಕ್ಷಗಳು ತಡೆದಿದ್ದವು. ಆಳುವ ಪಕ್ಷ ‘ಪ್ರತಿತಂತ್ರ’ ಹೆಣೆದಿತ್ತು. ವಿದೇಶಗಳಲ್ಲಿ ಭಾರತದ ಜನತಂತ್ರವನ್ನು ರಾಹುಲ್ ಟೀಕಿಸಿದ್ದಾರೆಂದು ಆಪಾದಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿತ್ತು. ಕ್ಷಮೆ ಕೇಳುವ ತನಕ ಸದನದ ಕಾರ್ಯಕಲಾಪ ನಡೆಯಲು ಬಿಡೆನೆಂದು ಅಡ್ಡಿ ಒಡ್ಡಿತ್ತು. ಆಳುವ ಪಕ್ಷ ಮತ್ತು ಪ್ರತಿಪಕ್ಷಗಳು ಹಿಂದೆ ಸರಿಯುತ್ತಿಲ್ಲ. ನನೆಗುದಿಗೆ ಬಿದ್ದಿರುವ ಬಜೆಟ್ ಅಧಿವೇಶನ ಸ್ಥಗಿತಗೊಂಡಿದೆ.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ತುಳಿಯಲು ಬ್ರಿಟಿಷರು ತಂದಿದ್ದ ದಮನಕಾರಿ ಕಾಯಿದೆಗಳ ಪೈಕಿ ಕ್ರಿಮಿನಲ್ ಮಾನಹಾನಿಯೂ ಒಂದು. ಪ್ರಶ್ನಿಸುವುದನ್ನು, ಪ್ರತಿಭಟನೆಯನ್ನು, ಟೀಕೆಯನ್ನು ಹತ್ತಿಕ್ಕುವ ಉದ್ದೇಶದಿಂದ 1860ರಲ್ಲಿ ಕಾಯ್ದೆ ಜಾರಿಯಾಗಿತ್ತು. ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ರೂಪಿಸಿದವನು ಥಾಮಸ್ ಬಾರ್ಬಿಂಗ್ಟನ್ ಮೆಕಾಲೆ. ಲಾರ್ಡ್ ಮೆಕಾಲೆ ಎಂದು ಜನಜನಿತ. ಐ.ಪಿ.ಸಿ.ಯ 499ನೆಯ ಸೆಕ್ಷನ್ ಕ್ರಿಮಿನಲ್ ಮಾನಹಾನಿಯನ್ನೂ, 500ನೆಯ ಸೆಕ್ಷನ್ ಸಿವಿಲ್ ಮಾನಹಾನಿಯನ್ನು ವ್ಯಾಖ್ಯಾನಿಸುತ್ತವೆ. ಟೀಕೆ ಟಿಪ್ಪಣಿ ಹಾಗೂ ಭಿನ್ನಮತವನ್ನು ಮೊಳಕೆಯಲ್ಲೇ ಚಿವುಟಲು ಈ ವಸಾಹತುಶಾಹಿ ಕಾಯಿದೆಗಳು ಅಸ್ತ್ರದಂತೆ ಬಳಕೆಯಾಗಿವೆ. ಸ್ವತಂತ್ರ ಭಾರತ ಈ ಕಾಯಿದೆಗಳನ್ನು ರದ್ದು ಮಾಡಬೇಕಿತ್ತು ಇಲ್ಲವೇ ಮೊಂಡಾಗಿಸಬೇಕಿತ್ತು. ಆದರೆ ಇವುಗಳನ್ನು ಮತ್ತಷ್ಟು ಮಸೆದು ಹರಿತಗೊಳಿಸಲಾಗಿದೆ.
ಎರಡು ವರ್ಷಗಳ ಸಜೆ ವಿಧಿಸಿ ತಾನು ನೀಡಿರುವ ತೀರ್ಪನ್ನು ಸೂರತ್ ಜಿಲ್ಲಾ ನ್ಯಾಯಾಲಯ 30 ದಿನಗಳ ಕಾಲ ಅಮಾನತಿನಲ್ಲಿ ಇರಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡುವುದು ಅಮಾನತಿನ ಉದ್ದೇಶ. ಈ ಅವಕಾಶ ರಾಹುಲ್ಗೆ ಯಾವುದೇ ಪರಿಹಾರ ಒದಗಿಸಲಾರದು ಎನ್ನುತ್ತಾರೆ ಕಾನೂನು ತಜ್ಞರು. ಎರಡು ವರ್ಷಗಳಿಗೆ ಕಡಿಮೆಯಿಲ್ಲದ ಸಜೆ ಒಮ್ಮೆ ಹೊರಬಿತ್ತೆಂದರೆ ಅನರ್ಹತೆ ತಕ್ಷಣದಿಂದ ತಂತಾನೇ ಜಾರಿಯಾಗುತ್ತದೆ ಎನ್ನುತ್ತಾರೆ. ಜಿಲ್ಲಾ ನ್ಯಾಯಾಲಯ ತನ್ನ ತೀರ್ಪಿಗೆ ತಾನೇ ತಡೆಯಾಜ್ಞೆ ನೀಡಿದರೆ ಅಥವಾ ಉಚ್ಚ ನ್ಯಾಯಾಲಯ ಸಜೆಯ ಅವಽಯನ್ನು ತಗ್ಗಿಸಿದರೆ ಮಾತ್ರವೇ ರಾಹುಲ್ ಅನರ್ಹತೆಯಿಂದ ಪಾರಾಗುವುದು ಸಾಧ್ಯ.
1951ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(4)ರ ಪ್ರಕಾರ ಲೋಕಸಭೆ ಅಥವಾ ಶಾಸನಸಭೆಗಳ ಸದಸ್ಯತ್ವ ಮೂರು ತಿಂಗಳ ಕಾಲಾವಕಾಶದ ನಂತರ ರದ್ದಾಗುತ್ತಿತ್ತು. ಮೂರು ತಿಂಗಳ ಒಳಗಾಗಿ ಮೇಲ್ಮನವಿ ಸಲ್ಲಿಸಿದರೆ ಸದಸ್ಯತ್ವಕ್ಕೆ ಬಾಧೆ ಇರಲಿಲ್ಲ. ಲಿಲ್ಲಿ ಥಾಮಸ್ ಮೊಕದ್ದಮೆಯಲ್ಲಿ ಹೊರಬಿದ್ದ 2013ರ ಸುಪ್ರೀಂ ಕೋರ್ಟ್ ತೀರ್ಪು ಈ ಕಾಲಾವಕಾಶವನ್ನು ಕಿತ್ತು ಹಾಕಿತು. ಅನರ್ಹತೆ ತಕ್ಷಣದಿಂದಲೇ ಜಾರಿಯಾಗಬೇಕು ಸಂವಿಧಾನದ 14ನೆಯ ಅನುಚ್ಛೇದದ ಪ್ರಕಾರ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯ ಆಗಬೇಕು ಎಂಬ ಸಮರ್ಥನೆಯನ್ನೂ ಒದಗಿಸಿತು. ಆದರೆ ಸಂವಿಧಾನದ 102ನೆಯ ಅನುಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ಅಂಶಗಳ ಪ್ರಕಾರ ಸದನಗಳ ಸದಸ್ಯತ್ವಕ್ಕೆ ಅನರ್ಹ ಎನಿಸಿಕೊಳ್ಳುವವರೆಲ್ಲರನ್ನೂ ಅನುಚ್ಛೇದ 103ರ ಪ್ರಕಾರ ರಾಷ್ಟ್ರ ಪತಿಯವರೇ ಅನರ್ಹರೆಂದು ಘೋಷಿಸಬೇಕು. ಇಂತಹ ತೀರ್ಮಾನಕ್ಕೂ ಮುನ್ನ ರಾಷ್ಟ್ರಪತಿಯವರು ಚುನಾವಣಾ ಆಯೋಗದ ಅಭಿಪ್ರಾಯ ಪಡೆಯಬೇಕು. ರಾಷ್ಟ್ರಪತಿ ತೀರ್ಮಾನ ವ್ಯತಿರಿಕ್ತವಾದರೆ ನಿರ್ದಿಷ್ಟ ಸದಸ್ಯ ಪ್ರತಿನಿಧಿಸುವ ಕ್ಷೇತ್ರ ತೆರವಾಗಿದೆ ಎಂದು ಸಾರಲಾಗುತ್ತದೆ. ಹೀಗಾಗಿ ಲಿಲ್ಲಿ ಥಾಮಸ್ ಪ್ರಕರಣದ ನಂತರವೂ ಅನರ್ಹತೆಯು ತೀರ್ಪು ಹೊರಬಿದ್ದ ತಕ್ಷಣವೇ ಜಾರಿಯಾಗುವಂತಿಲ್ಲ. ಈ ವಿಧಿವಿಧಾನ ಪೂರ್ಣಗೊಳ್ಳುವ ತನಕ ನಿರ್ದಿಷ್ಟ ಸಂಸದನ ಸದಸ್ಯತ್ವಕ್ಕೆ ಚ್ಯುತಿಯಿಲ್ಲ ಹಾಗೂ ಆತ ಸದನದ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಯಾವ ಅಡ್ಡಿಯೂ ಇಲ್ಲ ಎಂಬುದು ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್ ಪಿ.ಡಿ.ಟಿ.ಆಚಾರ್ಯ ಅಭಿಪ್ರಾಯ.
ಆದರೆ ಸುಪ್ರೀಂ ಕೋರ್ಟು ಲಿಲ್ಲಿ ಥಾಮಸ್ ಪ್ರಕರಣದ ತೀರ್ಪು ನೀಡುವಾಗ 103ನೆಯ ಅನುಚ್ಛೇದದ ಆಳಕ್ಕೆ ಇಳಿಯಲಿಲ್ಲ. ಇಲ್ಲವಾದರೆ ಅನರ್ಹತೆ ಘೋಷಣೆ ಕುರಿತು ರಾಷ್ಟ್ರಪತಿಯವರ ಪಾತ್ರವನ್ನೂ ಮತ್ತು ಅದನ್ನು ವಿಧಿಸಿರುವ 103ನೆಯ ಅನುಚ್ಛೇದವನ್ನೂ ಬದಿಗೆ ಸರಿಸುತ್ತಿರಲಿಲ್ಲ.
ಲಿಲ್ಲಿ ಥಾಮಸ್ ತೀರ್ಪನ್ನು ತಟಸ್ಥಗೊಳಿಸಲು ಅಂದಿನ ಮನಮೋಹನಸಿಂಗ್ ಸರ್ಕಾರ 2013ರಲ್ಲಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತ್ತು. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳ ಅನರ್ಹತೆ ತಕ್ಷಣದಿಂದಲೇ ಜಾರಿಗೆ ಬರದಂತೆ ತಡೆಯುವುದು ಈ ಸುಗ್ರೀವಾಜ್ಞೆಯ ಉದ್ದೇಶವಾಗಿತ್ತು. ಲಾಲೂಪ್ರಸಾದ್ ಯಾದವ್ ಅವರ ಸದಸ್ಯತ್ವದ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಟೀಕೆಯನ್ನು ಮನಮೋಹನಸಿಂಗ್ ಸರ್ಕಾರ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮದೇ ಸರ್ಕಾರದ ಸಚಿವ ಸಂಪುಟ ಅನುಮೋದಿಸಿ ತಂದಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹರಿದೊಗೆದಿದ್ದರು. ಸರ್ಕಾರ ಈ ಕ್ರಮವನ್ನು ಕೈಬಿಟ್ಟಿತ್ತು.
2019ರಲ್ಲಿ ಲೋಕಸಭೆಗೆ ಆಯ್ಕೆಯಾಗಿರುವ ಸದಸ್ಯರ ಪೈಕಿ ಶೇ.30ರಷ್ಟು ಮಂದಿ ಭ್ರಷ್ಟಾಚಾರ ಮತ್ತು ಕೊಲೆಯಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈವರೆಗೆ ಅನರ್ಹಗೊಂಡಿರುವ ಬಹುತೇಕ ಸಂಸದರು ಲಂಚ, ಕೊಲೆ, ಕಳ್ಳಸಾಗಣೆ, ದ್ವೇಷಭಾಷಣ, ಲೈಂಗಿಕ ಹಲ್ಲೆಯಂತಹ ಆರೋಪಗಳಲ್ಲಿ ಶಿಕ್ಷೆಗೆ ಒಳಗಾದವರು.
ಮೋದಿ ಉಪನಾಮ ಕುರಿತ ರಾಹುಲ್ ಚುನಾವಣಾ ಭಾಷಣ ಟೀಕೆಯು ಎರಡು ವರ್ಷಗಳ ಗರಿಷ್ಟ ಜೈಲು ಶಿಕ್ಷೆ ವಿಧಿಸುವಷ್ಟು ಮತ್ತು ಆನಂತರ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪಂದಿಸದಿರುವಷ್ಟು ತೀವ್ರವೇ ಎಂಬುದು ಮೇಲ್ಮನವಿಯ ವಿಚಾರಣೆಯಲ್ಲಿ ತೀರ್ಮಾನವಾಗಲಿದೆ. ಬಲಪಂಥೀಯ ವಲಯದಿಂದ ವ್ಯವಸ್ಥಿತ ಅಪಪ್ರಚಾರ, ನಗೆಪಾಟಲು, ವ್ಯಂಗ್ಯ ‘ವಿಡಂಬನೆ’ ತಮಾಷೆಗೆ ಗುರಿಯಾಗುತ್ತ ಬಂದಿರುವ ವ್ಯಕ್ತಿ ರಾಹುಲ್ ಗಾಂಧಿ. ಪಪ್ಪು, ಮೀರ್ ಜಾಫರ್, ದೇಶದ್ರೋಹಿ ಮುಂತಾಗಿ ಅವರನ್ನು ಹಳಿಯಲಾಗಿದೆ. ಅವರು ಕ್ರಿಮಿನಲ್ ಮಾನಹಾನಿ ಹೂಡಿದ್ದರೆ ಇದೀಗ ಅಟ್ಟಹಾಸ ಮೆರೆಯುತ್ತಿರುವ ಅದೆಷ್ಟು ಮಂದಿ ಜೈಲಿಗೆ ಹೋಗಬೇಕಿತ್ತೋ ಎಂದು ಲೆಕ್ಕ ಹಾಕಬೇಕಿದೆ. ಸಮಾಜವನ್ನು ದ್ವೇಷದ ಅಲೆಯಲ್ಲಿ ಮುಳುಗೇಳಿಸಿರುವ ಪ್ರಚೋದನಕಾರಿ ಭಾಷಣಗಳ ಮೂಲಕ ಘೋರ ಪಾತಕಗಳನ್ನೇ ಎಸಗಿರುವವರು ಆರಾಮ ಅಡ್ಡಾಡಿಕೊಂಡಿದ್ದಾರೆ. ವಿಶ್ವದ ಅತಿ ದೊಡ್ಡ ಜನತಂತ್ರದ ತೊಟ್ಟಿಲು ಎಂದೆಲ್ಲ ಕರೆದುಕೊಳ್ಳುವ ವ್ಯವಸ್ಥೆಯಲ್ಲಿ ಪ್ರಮುಖ ಪ್ರತಿಪಕ್ಷದ ನಾಯಕನೊಬ್ಬನನ್ನು ದಿನ ಬೆಳಗಾಗುವುದರೊಳಗೆ ಹೊರಕ್ಕೆ ದಬ್ಬುವುದು ಆಳುವ ಪಕ್ಷದ ಪಾಲಿಗೆ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳಬೇಕಿರುವ ಸಂಗತಿಯೆನಿಸಿರುವುದು ಬೃಹತ್ ವಿಡಂಬನೆ.