‘ಐಡಿಎಫ್ಸಿ ಫಸ್ಟ್ ಬ್ಯಾಂಕ್’ನ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗಿರುವ 55 ವರ್ಷ ಪ್ರಾಯದ ವೆಂಬು ವೈದ್ಯನಾಥನ್ ಮೂಲತಃ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಕಲಿತದ್ದು ಕೇಂದ್ರೀಯ ವಿದ್ಯಾಲಯಗಳಲ್ಲಿ. ಮೂರು ದಶಕಗಳ ಹಿಂದೆ ವೈದ್ಯನಾಥನ್ ವಿದ್ಯಾರ್ಥಿಯಾಗಿದಾಗ ಚೆನ್ನೈಯಿಂದ ಜಾರ್ಖಂಡಿಗೆ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಂದರ್ಶನಕ್ಕೆ ಹೋಗಬೇಕಾಗಿ ಬಂದಾಗ ಅವರ ಬಳಿ ಪ್ರಯಾಣಕ್ಕೆ ಹಣ ಇರಲಿಲ್ಲ. ಆಗ ಗಾರ್ಡಿಯಲ್ ಸೈನಿ ಎಂಬ ಅವರ ಗಣಿತ ಶಿಕ್ಷಕರು ಅವರ ಸಹಾಯಕ್ಕೆ ಬಂದು, ತಮ್ಮ ಕಿಸೆಯಿಂದ ಅವರಿಗೆ 500 ರೂಪಾಯಿ ಕೊಟ್ಟು ಸಹಕರಿಸಿದ್ದರು. ಮುಂದೆ ವೈದ್ಯನಾಥನ್ ಶಿಕ್ಷಣ ಮುಗಿಸಿ, ಕೈತುಂಬಾ ಸಂಬಳದ ಉದ್ಯೋಗ ಪಡೆದು ಆ ಶಿಕ್ಷಕರ ಋಣವನ್ನು ತೀರಿಸುತ್ತಾರೆ. ಋಣ ತೀರಿಸಿದ ರೀತಿಯಾದರೂ ಹೇಗೆ? 30 ಲಕ್ಷ ರೂಪಾಯಿ ಮೌಲ್ಯದ ತಮ್ಮ ಷೇರುಗಳನ್ನು ಅವರ ಹೆಸರಿಗೆ ವರ್ಗಾಯಿಸುವ ಮೂಲಕ! ಕೊರೊನಾ ಲಾಕ್ಡೌನ್ ಕಾಲದಲ್ಲಿ ನಡೆದ ಈ ಘಟನೆ ಆಗ ಬಹಳ ವೈರಲ್ ಆಗಿತ್ತು.
ಅದು 2000ದ ಸಮಯ. ಆಗ ಐಸಿಐಸಿಐ ಬ್ಯಾಂಕಿನ ಬಾಸ್ ಆಗಿದ್ದ ಕೆ.ವಿ.ಕಾಮತ್ ತಮ್ಮ ಕೈಕೆಳಗೆ ಜ್ಯೂನಿಯರ್ಗಳಾಗಿ ಕೆಲಸ ಮಾಡುತ್ತಿದ್ದ ಪ್ರತಿಭಾವಂತರ ಒಂದು ದೊಡ್ಡ ತಂಡವನ್ನು ಮುಂದಿನ ನಾಯಕತ್ವಕ್ಕಾಗಿ ತಯಾರು ಮಾಡುತ್ತಿದ್ದರು. ಅವರಲ್ಲಿ ಮುಖ್ಯರಾಗಿದ್ದವರು ಚಂದಾ ಕೊಚ್ಚರ್, ಶಿಖಾ ಶರ್ಮಾ, ರೇಣುಕಾ ರಾಮನಾಥ್, ಸಂಜಯ್ ಚಟರ್ಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತು ಬಂದಿದ್ದ ವೆಂಬು ವೈದನಾಥನ್ ಮೊದಲಾದವರು. ವಾಸ್ತವದಲ್ಲಿ, ಇವರೆಲ್ಲರೂ ಕಾಮತ್ರ ನಂತರ ಐಸಿಐಸಿಐ ಬ್ಯಾಂಕಿನ ಚೇರ್ಮನ್ ಹುದ್ದೆಗೆ ಅರ್ಹರಾದವರು. ಆದರೆ, ಕಾಮತ್ರ ನಿವೃತ್ತಿಯ ನಂತರ ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕಿನ ಚೇರ್ಪರ್ಸನ್ ಆಗಿ ಆಯ್ಕೆಗೊಂಡಾಗ ಇವರೆಲ್ಲರೂ ಬೇರೆ ಬೇರೆ ಕಂಪೆನಿಗಳನ್ನು ಸೇರಿಕೊಂಡರು–ಶಿಖಾ ಶರ್ಮಾ ಆಕ್ಸಿಸ್ ಬ್ಯಾಂಕಿನ ಚೇರ್ಪರ್ಸನ್ ಆದರು, ರೇಣುಕಾ ರಾಮನಾಥ್ ಮಲ್ಟಿಪಲ್ ಆಸೆಟ್ ಮ್ಯಾನೇಜ್ಮೆಂಟ್ಗೆ ಹೋದರು, ಸಂಜಯ್ ಚಟರ್ಜಿ ಗೋಲ್ಡ್ಮ್ಯಾನ್ ಸ್ಯಾಕ್ ಸೇರಿದರು ಮತ್ತು ವೆಂಬು ವೈದ್ಯನಾಥನ್ ಕಿಶೋರ್ ಬಿಯಾನಿಯವರ ಫ್ಯೂಚರ್ ಕ್ಯಾಪಿಟಲ್ ಕಂಪೆನಿ ಸೇರಿದರು. ಮುಂದೆ, ವೈದ್ಯನಾಥನ್ ಆ ಫ್ಯೂಚರ್ ಕ್ಯಾಪಿಟಲ್ನ್ನು ತಾವೇ ಖರೀದಿ ಮಾಡಿ, ಅದನ್ನು ಕ್ಯಾಪಿಟಲ್ ಫಸ್ಟ್ ಎಂದು ಹೆಸರಿಸಿ, ತಾವೇ ಅದರ ಎಂಡಿ ಮತ್ತು ಸಿಇಒ ಆದರು.
2018ರಲ್ಲಿ ವೆಂಬು ವೈದ್ಯನಾಥನ್ ಕ್ಯಾಪಿಟಲ್ ಫಸ್ಟ್ನ್ನು ಐಡಿಎಫ್ಸಿ ಬ್ಯಾಂಕ್ ಜೊತೆ ವಿಲೀನಗೊಳಿಸಿ ಐಡಿಎಫ್ಸಿ ಫಸ್ಟ್ ಬ್ಯಾಂಕನ್ನು ಹುಟ್ಟು ಹಾಕಿ ಅದರ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗುತ್ತಾರೆ. ಆರ್ಥಿಕ ಅಥವಾ ಉದ್ಯಮ ಕ್ಷೇತ್ರದಲ್ಲಿ ಹೀಗೆ ಕಂಪೆನಿಗಳನ್ನು ವಿಲೀನಗೊಳಿಸುವುದು, ಕಂಪೆನಿಗಳನ್ನು ಖರೀದಿಸುವುದು, ಮಾರುವುದು ದಿನನಿತ್ಯವೆಂಬಂತೆ ನಡೆಯುವ ಒಂದು ಸಾಮಾನ್ಯ ವಿದ್ಯಮಾನ. ಆದರೆ, ವೈದ್ಯನಾಥನ್ ನಡೆಸಿದ ಆ ವಿಲೀನ ಕಾರ್ಯ ವಿಭಿನ್ನ ರೀತಿಯ ಒಂದು ವಿದ್ಯಮಾನವಾಗಿತ್ತು. ವೈದ್ಯನಾಥನ್ ವಿಲೀನ ಕಾರ್ಯಕ್ಕೆ ಮೊದಲು ಕ್ಯಾಪಿಟಲ್ ಫಸ್ಟ್ನಲ್ಲಿದ್ದ ತಮ್ಮ 40 ಕೋಟಿ ಷೇರುಗಳನ್ನು ಒಂದು ಸೋಷಿಯಲ್ ಟ್ರಸ್ಟಿಗೆ ವರ್ಗಾಯಿಸಿದರು. ಮತ್ತು ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಕ್ಯಾಪಿಟಲ್ ಫಸ್ಟ್ ಸಂಸ್ಥೆಯ ಉದ್ಯೋಗಿಗಳಿಗೆ ದಾನ ಮಾಡಿದರು.
ವಾಸ್ತವದಲ್ಲಿ, ವೈದ್ಯನಾಥನ್ ಹಾಗೆ ಷೆರುಗಳನ್ನು ದಾನ ಮಾಡಿದ್ದು ಅದೇ ಮೊದಲ ಬಾರಿಯಲ್ಲ. ಅದಕ್ಕೂ ಮೊದಲಿನಿಂದಲೂ ಅವರು ಆಗಾಗ್ಗೆ ತಮ್ಮ ಕಾರ್ ಡ್ರೆ ವರ್, ತರಬೇತುದಾರರು, ಮನೆಯಾಳುಗಳು, ಸಂಬಂಧಿಕರು, ಶಾಲೆ ಕಾಲೇಜುಗಳಲ್ಲಿ ತಮಗೆ ಕಲಿಸಿದ ಶಿಕ್ಷಕರು ಮೊದಲಾದವರಿಗೆ ಷೇರುಗಳನ್ನು ದಾನ ಮಾಡುತ್ತ ಬಂದಿದ್ದಾರೆ. ಉದಾಹರಣೆಗೆ, 2021ರ ಮೇ 14 ರಂದು 2.43 ಕೋಟಿ ರೂಪಾಯಿ ಮೌಲ್ಯದ 4,50,000 ಶೇರುಗಳನ್ನು ತಮ್ಮ ಮೂವರು ಕೆಲಸದಾಳುಗಳಿಗೆ ಮನೆ ಖರೀದಿಸುವ ಸಲುವಾಗಿ ದಾನ ನೀಡಿದ್ದರು. ಅದಕ್ಕೂ ಮೊದಲು, ೨೦೨೧ರ ಫೆಬ್ರವರಿಯಲ್ಲಿ ೩.೯೫ ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ತಮ್ಮ ಕಾರ್ ಚಾಲಕ, ಕಚೇರಿ ಸಹಾಯಕರು, ಮನೆಯಾಳುಗಳಿಗೆ ದಾನ ನೀಡಿದ್ದರು. ವೈದ್ಯನಾಥನ್ ಹೀಗೆ ದಾನ ಮಾಡಿದ ಷೇರುಗಳ ಮೌಲ್ಯ ರೂ. 70 ಕೋಟಿಗೂ ಮಿಕ್ಕಿದ್ದು. ವಿಶೇಷವೆಂದರೆ, ವೈದ್ಯನಾಥನ್ ತಾವು ಷೇರುಗಳನ್ನು ದಾನ ಮಾಡಿದುದನ್ನು ಎಂದಿಗೂ ಬಹಿರಂಗಪಡಿಸಿರಲಿಲ್ಲ. ಆದರೆ, ಐಡಿಎಫ್ಸಿ ಬ್ಯಾಂಕ್ನೊಂದಿಗೆ ತಮ್ಮ ಕಂಪೆನಿಯನ್ನು ವಿಲೀನಗೊಳಿಸುವಾಗ ‘ಸೆಬಿ’ಗೆ ಸಲ್ಲಿಸಬೇಕಾದ ವಿವರಗಳಲ್ಲಿ ಷೇರುಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿತ್ತು. ಹಾಗೆ ನಮೂದಿಸಲ್ಪಟ್ಟ ಕಾರಣ ಈ ವಿಚಾರಗಳು ಬೆಳಕಿಗೆ ಬಂದವು.
ಕಂಪೆನಿಯೊಂದರ ಪ್ರಮೋಟರ್ ಆಗಿರುವ ವೈದ್ಯನಾಥನ್ ಹೀಗೆ ಷೇರುಗಳನ್ನು ದಾನ ಮಾಡುತ್ತ ಹೋದರೆ ಕಂಪೆನಿಯಲ್ಲಿ ಅವರ ಹೂಡಿಕೆ ‘ಡೈಲುಟ್’ ಆಗುವುದಲ್ಲ ಎಂದು ಯಾರಾದರೂ ಅವರನ್ನು ಕೇಳಿದರೆ ಅವರು, ‘ಹಣ ಡಿಮಾಟ್’ ಖಾತೆಯಲ್ಲಿ ಸೋಮಾರಿಯಾಗಿ ಜಮವಾಗಿರಬಾರದು. ಬದಲಿಗೆ, ಅದು ಜನರ ಉಪಯೋಗಕ್ಕೆ ಬರುತ್ತಿರಬೇಕು’ ಎಂದು ಉತ್ತರಿಸುತ್ತಾರೆ. ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಮುಂಬೈಯಲ್ಲಿ ವಾಸಿಸುವ ವೈದ್ಯನಾಥನ್, ಸಂಚಾರಕ್ಕೆ ಹೆಚ್ಚಾಗಿ ಸಾರ್ವಜನಿಕ ಟ್ಯಾಕ್ಸಿಗಳನ್ನು ಬಳಸುತ್ತಾರೆ. ಭಾರತದ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸ್ಥಳೀಯ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಾರೆ. ಪ್ರತಿವರ್ಷ ನಡೆಯುವ ಮುಂಬೈ ಮ್ಯಾರಥಾನ್ನಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಹಾಡುವ ಹವ್ಯಾಸವೂ ಇರುವ ವೈದ್ಯನಾಥನ್ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಡಮಕ್ಕಳ ಹೃದ್ರೋಗ ಚಿಕಿತ್ಸೆಗೆ ಫಂಡ್ ಎತ್ತುವ ‘ಜೆನೆಸಿಸ್ ಫೌಂಡೇಷನ್’ಗೆ ಅನೇಕ ಬಾರಿ ನೆರವಾಗಿದ್ದಾರೆ.
1968ರಲ್ಲಿ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವೈದ್ಯನಾಥನ್ರ ತಂದೆ ಮತ್ತು ಸಹೋದರರು ಭಾರತೀಯ ಸೇನೆಯಲ್ಲಿ ಉದ್ಯೋಗ ಮಾಡಿದವರು. ಅವರ ಕುಟುಂಬದಲ್ಲಿ ವೈದ್ಯನಾಥನ್ ಮಾತ್ರವೇ ಖಾಸಗಿ ಸಂಸ್ಥೆಯನ್ನು ಸೇರಿದವರು. ತಾನು ನಿವೃತ್ತನಾಗುವ ತನಕ ಹೀಗೇ ಷೇರುಗಳನ್ನು ದಾನ ನೀಡುವುದನ್ನು ಮುಂದುವರಿಸುತ್ತೇನೆ ಎನ್ನುವ ವೈದ್ಯನಾಥನ್ರ ದಾನ ಪ್ರಕ್ರಿಯೆಯ ಹಿಂದಿನ ಪ್ರೇರಕ ಶಕ್ತಿ ಯಾವುದೇ ರೀತಿಯ ಆಧ್ಯಾತ್ಮಿಕತೆಯಾಗಲೀ, ಧಾರ್ಮಿಕತೆಯಾಗಲಿ ಅಲ್ಲ. ವಾಸ್ತವದಲ್ಲಿ, ಅವರು ತಮ್ಮ ಷೇರುಗಳನ್ನು ಸೋಷಿಯಲ್ ಟ್ರಸ್ಟಿಗೆ ದಾನ ಮಾಡುವ ಮೊದಲು, ಅವುಗಳನ್ನು ಯಾವುದೇ ರೀತಿಯ ಧಾರ್ಮಿಕ ಉದ್ದೇಶಗಳಿಗೆ ಬಳಸಬಾರದು ಎಂಬ ಷರತ್ತನ್ನು ನಮೂದಿಸುತ್ತಾರೆ. ತನ್ನ ಔದ್ಯಮಿಕ ಜೀವನದಲ್ಲಿ ೨೦೧೭ರ ‘ಏಷಿಯಾಪೆಸಿಫಿಕ್ ಆಂಟರ್ಪ್ರೂನರ್ ಆಫ್ ದಿ ಇಯರ್’ ಪ್ರಶಸ್ತಿ, ಲಂಡನ್ನ ಕ್ಯಾಪಿಟಲ್ ಫೈನಾನ್ಸ್ ಇಂಟರ್ನೇಷನಲ್ ಸಂಸ್ಥೆಯ ‘ಔಟ್ಸ್ಟಾಂಡಿಂಗ್ ಕಾಂಟ್ರಿಬ್ಯುಷನ್ ಟು ಫೈನಾನ್ಷಿಯಲ್ ಇಂಕ್ಲುಸನ್, ಇಂಡಿಯಾ’ ಪ್ರಶಸ್ತಿ, 2018ರ ಇಂಗ್ಲೆಂಡಿನ ‘ಟ್ರಾನ್ಸ್ –ರ್ಮೇ ಷನಲ್ ಲೀಡರ್ ಸಿಎಫ್ಐ’ ಪ್ರಶಸ್ತಿ ಮೊದಲಾದ ಗೌರವಗಳನ್ನು ಪಡೆದವ ರೆಂದು ವೈದ್ಯನಾಥನ್ರ ಹೆಸರು ವಿಶ್ವದ ಯಾವುದೇ ಬಿಲಿಯನೇರ್ ಪಟ್ಟಿಗಳಲ್ಲಿ ಇಲ್ಲ. ಆದರೆ, ಅವರಿಂದ ಷೇರುಗಳನ್ನು ದಾನ ಪಡೆದು ಬದುಕು ಕಟ್ಟಿಕೊಂಡ ವರ ಹೃದಯಗಳಲ್ಲಿ ಅವರ ಹೆಸರು ಅಜರಾಮರವಾಗಿರುವುದಂತೂ ನಿಜ.