Light
Dark

ಆಂದೋಲನ ಓದುಗರ ಪತ್ರ : 17 ಶುಕ್ರವಾರ 2023

ವಾಹನಗಳ ನಕಲಿ ನಂಬರ್ ಪ್ಲೇಟ್ ಬಗ್ಗೆ ಎಚ್ಚರ ವಹಿಸಿ

ಕರ್ನಾಟಕ ವಿಧಾನಸಭಾ ಚುನಾವಣೆಯ ವರ್ಷದಲ್ಲಿಯೇ ರಾಜ್ಯ ಸರ್ಕಾರವು ಸಾರಿಗೆ ಇಲಾಖೆ ಹೊರತುಪಡಿಸಿ ಉಳಿದ ವಾಹನಗಳಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿರುವ ವಾಹನಗಳ ಮಾಲೀಕರು ತಮ್ಮ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಯೊಂದಿಗೆ ಪಾವತಿಸಲು ಆಫರ್ ನೀಡಿತ್ತು. ಇದು ಮೊದಲ ಅವಧಿಯಲ್ಲಿ ಯಶಸ್ವಿಯಾ ಗಿದ್ದು, ಕೊಟ್ಯಂತರ ರೂ.ಗಳಷ್ಟು ದಂಡದ ಮೊತ್ತ ಸಂಗ್ರಹವಾಗಿದೆ. ಮೊದಲ ಅವಧಿಯ ಯಶಸ್ಸಿನ ಬಳಿಕ ಸರ್ಕಾರ ಈಗ ಮತ್ತೆ ರಿಯಾಯಿತಿಯಲ್ಲಿ ದಂಡ ಕಟ್ಟಲು ಕಾಲಾವಕಾಶವನ್ನು ಎರಡು ವಾರಗಳ ಕಾಲ ಮುಂದುವರಿಸಿದ್ದು, ಮತ್ತಷ್ಟು ದಂಡದ ಮೊತ್ತ ಸಂಗ್ರಹವಾಗುವ ನಿರೀಕ್ಷೆ ಇದೆ. ಆದರೆ ದಂಡ ಕಟ್ಟಲು ಬಂದ ವೇಳೆ ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿರುವುದು ಹಾಗೂ ವಾಹನದ ಮಾಲೀಕರಿಗೆ ತಿಳಿಯದೆಯೇ ಬೇರೆ ವ್ಯಕ್ತಿಗಳು ವಾಹನ ಚಲಾಯಿಸಿ ತಂತ್ರಾಂಶದಲ್ಲಿ ದಂಡ ದಾಖಲಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರಿಕೆವಹಿಸಬೇಕು. ತಮ್ಮ ತಮ್ಮ ವಾಹನಗಳ ದಂಡದ ವಿವರಗಳನ್ನು ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳುವ ಸೌಲಭ್ಯವಿದ್ದು, ಆದರೆ ಅಲ್ಲಿ ಟ್ರಾಫಿಕ್ ಉಲ್ಲಂಘನೆಯಾ ದಂತಹ ಸಂದರ್ಭದಲ್ಲಿ ಸ್ವಯಂಚಾಲಿತ ಕ್ಯಾಮೆರಾಗಳು ತೆಗೆದ ಚಿತ್ರಗಳು ಲಭ್ಯವಿರುವುದಿಲ್ಲ. ಇದರಿಂದಾಗಿ ವಾಹನದ ಮಾಲೀಕರಿಗೆ ತಮ್ಮ ವಾಹನ ದಿಂದ ನಿಯಮ ಉಲ್ಲಂಘನೆಯಾದ ಸಂದರ್ಭದಲ್ಲಿ ಯಾರು ಚಲಾಯಿಸು ತ್ತಿದ್ದರು ಎಂಬುದನ್ನು ತಿಳಿಯಲು ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ನಕಲಿ ನಂಬರ್ ಪ್ಲೇಟ್ ದಂಧೆಯನ್ನು ಪತ್ತೆಹಚ್ಚುವುದರ ಜೊತೆಗೆ ಕರ್ನಾಟಕ ಒನ್ ವೆಬ್‌ಸೈಟಿನಲ್ಲಿ ದಂಡದ ವಿವರಗಳೊಂದಿಗೆ ನಿಯಮ ಉಲ್ಲಂಘನೆ ಸಂದರ್ಭದ ಚಿತ್ರವೂ ಲಭ್ಯವಾಗುವಂತೆ ಮಾಡುವುದು ಉತ್ತಮ.

ಹೃತೀನ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.


ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಕೊಡುಗೆ ಸಿಗಲಿ

ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕಾಗಿ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿದೆ. ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್‌ರವರ ನೇತೃತ್ವದಲ್ಲಿ ಈ ವೇತನ ಆಯೋಗ ರಚನೆಯಾಗಿದ್ದು, ಆಯೋಗದಿಂದ ಮಧ್ಯಂತರ ವರದಿಯನ್ನು ತರಿಸಿಕೊಂಡು, ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಯೋಜಿಸಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಐದು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ಸರ್ಕಾರ ರಚಿಸಬೇಕಿದ್ದು, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರನೇ ವೇತನ ಆಯೋಗವನ್ನು ರಚಿಸಿತ್ತು. ಈ ಆಯೋಗದ ಶಿಫಾರಸಿನ ಮೇಲೆ 2018ರ ಬಜೆಟ್‌ನಲ್ಲಿ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯನ್ನು ಹೆಚ್ಚಳ ಮಾಡಿದ್ದರು. ಇದೀಗ ಅವಽ ಪೂರೈಸುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳನೇ ವೇತನ ಆಯೋಗವನ್ನು ರಚಿಸಿದ್ದು, 2023-24ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳದ ಕೊಡುಗೆ ನೀಡಲಿದ್ದಾರೆ ಎಂಬ ಆಶಾಭಾವನೆ ಸರ್ಕಾರಿ ನೌಕರರಲ್ಲಿದೆ. ಈ ಆಶಾಭಾವನೆಯನ್ನು ಹುಸಿ ಮಾಡದೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಬಜೆಟ್‌ನಲ್ಲಿ ಉತ್ತಮ ಯೋಜನೆಗಳನ್ನು ನೀಡಲಿ ಎಂಬುದು ರಾಜ್ಯ ಸರ್ಕಾರಿ ನೌಕರರ ನಿರೀಕ್ಷೆಯಾಗಿದೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ ತಾ.


ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು!

ಇಲವಾಲ ಗ್ರಾಮದಿಂದ ಮೈಸೂರು ನಗರ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳು ಸಾಕಷ್ಟು ಇದ್ದರೂ ಅವು ಸಮಯಕ್ಕೆ ಸರಿಯಾಗಿ ಬಾರದೆ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಲವಾಲದಿಂದ ನಗರ ಬಸ್ ನಿಲ್ದಾಣಕ್ಕೆ ಬೆಳ್ಳಿಗ್ಗೆ 8.00 ರಿಂದ 9.೦೦ ಗಂಟೆಯ ಸಮಯದಲ್ಲಿ ಹೆಚ್ಚಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕಾರ್ಯಗಳಿಗಾಗಿ ತೆರಳುತ್ತಾರೆ, ವಿದ್ಯಾರ್ಥಿಗಳೂ ಅದೇ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದೆ. ಆದರೆ ಈ ಸಮಯದಲ್ಲಿ ಮಾತ್ರ ಇಲ್ಲಿ ಯಾವುದೇ ಬಸ್‌ಗಳು ಬಾರದಿರುವುದು ಸಮಸ್ಯೆಯನ್ನು ಉಂಟುಮಾಡಿದೆ. ಕೆಲ ಬಾರಿ ಬಸ್ಸುಗಳು ಬಂದರೂ ಅದರಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಒಬ್ಬರೇ ಆಗಿದ್ದು, ಪ್ರಯಾಣಿಕರಿಗೆಲ್ಲ ಟಿಕೆಟ್ ವಿತರಿಸಿ ನಂತರ ಬಸ್ ಚಲಾಯಿಸಬೇಕು. ಇದರಿಂದ ಮತ್ತೆ ಸಮಯ ಹರಣವಾಗಿ ಸಾರ್ವಜನಿಕರು ಬಸ್ ಸಿಕ್ಕರೂ ತಡವಾಗಿ ಹೋಗಬೇಕಾಗಿದೆ. ಅಲ್ಲದೆ ಬಸ್‌ನಲ್ಲಿ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗುತ್ತಿದ್ದು, ವಿದ್ಯಾರ್ಥಿನಿಯರಿಗೆ, ವಯೋವೃದ್ಧರಿಗೆ ಹಾಗೂ ಮಕ್ಕಳಿಗೆ ಬಸ್ ಹತ್ತುವುದೇ ಕಷ್ಟಸಾಧ್ಯವಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕ್ರಮವಹಿಸಿ ಬೆಳಗಿನ ವೇಳೆಯಲ್ಲಿ ಹೆಚ್ಚಿನ ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ನಿಯೋಜಿಸುವ ಜೊತೆಗೆ ಚಾಲಕ ಮತ್ತು ನಿರ್ವಾಹಕ ಇಬ್ಬರನ್ನೂ ನೇಮಿಸಬೇಕಾಗಿದೆ.

ಸಿ.ಶ್ವೇತ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.


ತನಿಖಾ ಸಂಸ್ಥೆಗಳ ಅತಿರೇಕದ ವರ್ತನೆ !

ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ (ಬಿಬಿಸಿ) ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಪರಿಶೀಲನೆ ನೆಪದಲ್ಲಿ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆ ನಡೆಸಿದೆ. ಪರಿಶೀಲನೆ ಯನ್ನು ವಿರೋಧ ಪಕ್ಷಗಳು ವಿರೋಧಿಸಿದ್ದು, ಇದು ಮಾಧ್ಯಮ ಸ್ವಾತಂತ್ರ್ಯ ವನ್ನು ದಮನ ಮಾಡುವ ಯತ್ನ ಎಂದು ಕಿಡಿಕಾರಿವೆ. ಇನ್ನೊಂದೆಡೆ 2002ರ ಗುಜರಾತ್ ಗಲಭೆ, ಕುರಿತ “ಇಂಡಿಯಾ: ದಿ ಮೋದಿ ಕ್ವೆಶ್ಚನ್” ಸಾಕ್ಷ್ಯಚಿತ್ರ ವನ್ನು ಬಿಜೆಪಿಯು ವಿಷ ಪೂರಿತ ವರದಿಗಾರಿಕೆ ಎಂದು ಆರೋಪಿಸಿದೆ. ಈ ಸಂದರ್ಭವನ್ನು ಸೂಕ್ಷವಾಗಿ ಗಮಿಸಿದರೆ ಒಂದು ಪ್ರಶ್ನೆ ಮೂಡುತ್ತದೆ. ಆದಾಯ ತೆರಿಗೆ ಇಲಾಖೆಗೆ ಭಾರತದ ಬಿಬಿಸಿ ಕಚೇರಿಯಲ್ಲಿ ಪರಿಶೀಲನೆ ಮಾಡಲು ಸಾಕ್ಷ್ಯಚಿತ್ರ ಬಿಡುಗಡೆ ನಂತರವೇ ಸಮಯ ಬಂದಿತೇ? ಇಡೀ ದೇಶದಲ್ಲಿ ಭಾರೀ ಸಂಚಲನವನ್ನುಂಟು ಮಾಡಿರುವ ಅದಾನಿ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ಮೌನವಹಿಸಿರುವುದು ಅನುಮಾನ ಮೂಡಿಸುವಂತಿದೆ. ಬಿಬಿಸಿಯ ಸಾಕ್ಷ್ಯಚಿತ್ರದ ಬಗ್ಗೆ ಸುಪ್ರೀಂಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದ್ದರೂ ಬೇರೆ ದಾರಿ ಇಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಈ ರೀತಿ ಅಡ್ಡದಾರಿ ಹಿಡಿದಿರುವುದು ಖಂಡನೀಯ. ತನಿಖಾ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ಮತ್ತು ರಕ್ಷಣೆ ಬೇಕಾಗಿರುವುದು ಇಂದಿನ ತುರ್ತು ಅನಿವಾರ್ಯಗಳಲ್ಲೊಂದು. ತನಿಖಾ ಸಂಸ್ಥೆಗಳು ವಿವೇಚನೆಯಿಂದ ಕಾರ್ಯನಿರ್ವಹಿಸುವಂತಾಗಿ, ಬಗೆಹರಿಸಬೇಕಾದ ಜ್ವಲಂತ ಸಮಸ್ಯೆಗಳು ಸಾಕಷ್ಟಿದ್ದು, ಅದರ ಕಡೆಗೆ ಗಮನ ಹರಿಸಲಿ. ಈ ದೇಶದ ಸಾರ್ವಭೌಮತ್ವ ಮರುಕಳಿಸುವಂತಾಗಲಿ.

ಜಿ.ಎಂ.ಪ್ರಸಾದ್, ಮೈಸೂರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ